ಜಟಕಾ ಸಾಬಿ ಆಗಬೇಕೆಂದಿದ್ದವ ಸ್ವಾಮಿ ವಿವೇಕಾನಂದ ಆದ!
ತಾಯಿಯನ್ನು ದೇವರಾಗಿ ಕಾಣು, ತಾಯಿಯಲ್ಲಿ ದೇವರನ್ನು ಕಾಣು. ತಾಯಿಗಿಂತ ಉನ್ನತ ವ್ಯಕ್ತಿ ಜಗತ್ತಿನಲ್ಲಿ ಯಾರೂ ಇಲ್ಲ. ಊರಿಗೆ ಅರಸನಾದರೂ ತಾಯಿಗೆ ಮಗ. ಜಗತ್ತಿಗೆ ಗುರುವಾದ ಸನ್ಯಾಸಿಯು ತಾಯಿಗೆ ಮಗನೇ.
ಒಬ್ಬ ಕೆಟ್ಟ ಮಗ ಹುಟ್ಟಬಲ್ಲ, ಆದರೆ ಎಂದೆಂದಿಗೂ ಮಗುವಿನ ಪಾಲಿಗೆ ಕೆಟ್ಟ ತಾಯಿ ಇರಲಾರಳು. ತಾಯಿ ಕಣ್ಣಿಗೆ ಕಾಣುವ ಮೊದಲ ದೇವರು. ತಾಯಿಯೇ ನಮ್ಮೆಲ್ಲರ ಮೊದಲ ಗುರು. ಈ ದೇಶದಲ್ಲಿ ಸಭ್ಯತೆ, ಸಂಸ್ಕೃತಿ ಉಳಿದಿರುವುದು ತಾಯಿಯಿಂದಲೇ.
ಹೀಗೆ ತಾಯಿಯ ಮಹತ್ವವನ್ನು ಸಾರುವ ಜೊತೆಗೆ ಇತರ ಅಧ್ಯಾಯಗಳನ್ನೂ ಹೊಂದಿರುವ, ಶ್ರೀ ಬನ್ನಂಜೆ ರಾಘವೇಂದ್ರತೀರ್ಥ ಶ್ರೀಪಾದರು ಸಂಗ್ರಹಿಸಿದ ಕಥೆಗಳನ್ನಾಧರಿಸಿ ಶ್ರೀಜ್ಞಾನವಾಹಿನಿ ಪ್ರಕಾಶನ ಸಂಸ್ಥೆ, "ಶ್ರೀಜ್ಞಾನವಾಹಿನಿ ಸಾವಿರದೆಂಟು ಕಿರುಕಥೆಗಳು" ಎನ್ನುವ ಪುಸ್ತಕದ ಮೊದಲ ಭಾಗವನ್ನು ಹೊರತಂದಿದೆ.
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅನುಗ್ರಹ ಸಂದೇಶವಿರುವ ಈ ಪುಸ್ತಕಕ್ಕೆ ಶ್ರೀ ಬನ್ನಂಜೆ ರಾಘವೇಂದ್ರತೀರ್ಥ ಶ್ರೀಪಾದರು ಮುನ್ನುಡಿ ಬರೆದಿದ್ದಾರೆ. ಈ ಪುಸ್ತಕ ಬೆಂಗಳೂರು ಕತ್ರಿಗುಪ್ಪೆ ರಸ್ತೆಯಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಲಭ್ಯವಿದೆ. ಪುಸ್ತಕದ ಮುಖಬೆಲೆ ನೂರು ರೂಪಾಯಿ.
ತಾಯಿಯ ಮಹತ್ವ, ಅನಿವಾರ್ಯ ಸಂದರ್ಭದಲ್ಲಿ ಮಾಡಬಹುದಾದ ಮೂರು ನಿಮಿಷಗಳ ಸಂಧ್ಯಾವಂದನೆ, ಮಧ್ವ ಕಥಾಸಂಗ್ರಹ, ಶ್ರೀ ವಾದಿರಾಜ ಕಥಾಮೃತ ಮುಂತಾದ ಸಣ್ಣ ಕಥಾ ಸಂಗ್ರಹವನ್ನು ಪುಸ್ತಕ ಹೊಂದಿದೆ.
ಜಟಕಾ ಸಾಬಿ ಆಗಬೇಕೆಂದಿದ್ದ ಹುಡುಗ ವಿವೇಕಾನಂದ ಆಗಿದ್ದು, ತಾಯಿ ರಕ್ಷಣೆಯಿಂದಾಗಿ ಮಗ ಇಂಗ್ಲೆಂಡಿನ ಪ್ರಧಾನಿಯಾಗಿದ್ದು, ಸೋದೆ ವಾದಿರಾಜ ಗುರುಗಳು ಬಡತನ ನಿವಾರಿಸಿದ್ದು, ನಂಜಾಚಾರಿಗೆ ರಾಘವೇಂದ್ರ ಶ್ರೀಗಳು ಕನಸಿನಲ್ಲಿ ಬಂದ ಕಥೆ ಮುಂತಾದ ಸಣ್ಣಕಥೆಯನ್ನು ಹೊಂದಿದೆ.
ಪುಸ್ತಕದಲ್ಲಿರುವ ಕೆಲವೊಂದು ಆಯ್ದ ಸಣ್ಣ ಕುತೂಹಲಕಾರಿ ಕಥೆಯನ್ನು ಸ್ಲೈಡಿನಲ್ಲಿ ಓದಿ..
ಸ್ವಾಮಿ ವಿವೇಕಾನಂದ
ನರೇಂದ್ರ ತನ್ನ ತಾಯಿ ಮತ್ತು ತಂದೆಯ ಜೊತೆ ಜಟಕಾ ಗಾಡಿಯಲ್ಲಿ ಹೋಗುತ್ತಿದ್ದ, ನೀನು ದೊಡ್ಡವನಾದ ಮೇಲೆ ಏನಾಗುತ್ತಿ ಎನ್ನುವ ತಂದೆಯ ಪ್ರಶ್ನೆಗೆ ನರೇಂದ್ರ ಜಟಕಾಸಾಬಿ ಆಗುತ್ತೇನೆ ಎನ್ನುವ ಉತ್ತರವನ್ನು ನೀಡುತ್ತಾನೆ. ಮಗನ ಮಾತಿನಿಂದ ತಂದೆಗೆ ಬಹಳ ನಿರಾಶೆಯಾಗುತ್ತದೆ. ಇದನ್ನು ಗಮನಿಸಿದ ತಾಯಿ ಮಗನನ್ನು ದೇವರ ಮುಂದೆ ಕರೆದುಕೊಂಡು ಹೋಗಿ ನೀವು ಇವನಂತೆ ತಿಳುವಳಿಕೆ ನೀಡುವ ಜಟಕಾ ಸಾಬಿ ಆಗಬೇಕೆಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸಾರಥ್ಯವಿರುವ ಚಿತ್ರವನ್ನು ತೋರಿಸುತ್ತಾಳೆ. ಮುಂದೆ ಆ ಬಾಲಕ ಸ್ವಾಮಿ ವಿವೇಕಾನಂದ ಆಗುತ್ತಾರೆ.
ಬ್ರಿಟನ್ ಪ್ರಧಾನಿ
ಮೊದಲ ಮಹಾಯುದ್ದಕ್ಕಿಂತ ಮೊದಲು ನಡೆದ ಘಟನೆ. ರಾಜ ಕುಟುಂಬದವಳೊಬ್ಬಳು ಸೌತ್ ವೇಲ್ಸ್ ಬೆಟ್ಟಗಳ ಮಧ್ಯದಿಂದ ಪ್ರಯಾಣಿಸುತ್ತಿದ್ದಾಗ ಬಿರುಗಾಳಿ ಬಂದು ಈಕೆಯೂ ಸೇರಿ ಬಹಳಷ್ಟು ಜನ ಮೃತ ಪಡುತ್ತಾರೆ. ಈಕೆಯನ್ನು ಹುಡುಕಿಕೊಂಡು ಊರಿನವರು ಬಂದು ಈಕೆಯ ಶರೀರವನ್ನು ಹಿಮದ ರಾಸಿಯಿಂದ ಹೊರತೆಗೆಯುತ್ತಾರೆ. ಆದರೆ ಆಕೆಯ ಮೈಮೇಲೆ ಬಟ್ಟೆಗಳೇ ಇರುವುದಿಲ್ಲ. ಆಕೆಯ ಬಟ್ಟೆಯೆಲ್ಲಾ ತನ್ನ ಮಗುವಿನ ಮೈಮೇಲಿತ್ತು. ತನ್ನ ಬಟ್ಟೆಯನ್ನು ಸುತ್ತಿ ತಾಯಿ ಮಗುವನ್ನು ರಕ್ಷಿಸಿದ್ದಳು. ಆ ಮಗುವೇ ಬೆಳೆದು ದೊಡ್ಡವನಾಗಿ ಇಂಗ್ಲೆಂಡಿನ ಪ್ರಧಾನಮಂತ್ರಿಯಾದ (ಡೇವಿಡ್ ಲಾಯ್ಡ್ ಜಾರ್ಜ್, 1916 ರಿಂದ 1921 ಅವಧಿಯಲ್ಲಿ)
ಉಡುಪಿ ಕೃಷ್ಣ ವಿಗ್ರಹ ತಿರುಗಿದ್ದಲ್ಲ
ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಆಚಾರ್ಯ ಮಧ್ವರು ಪಶ್ಚಿಮಾಭಿಮುಖವಾಗಿಯೇ ಪ್ರತಿಷ್ಠಾಪಿಸಿದ್ದು. ಕನಕದಾಸರಿಗಾಗಿ ವಿಗ್ರಹ ಪಶ್ಚಿಮಕ್ಕೆ ತಿರುಗಿದ್ದಲ್ಲ. ಕನಕದಾಸರಿಗಾಗಿ ಹೊರಗಿನ ಕಿಂಡಿಯ ಮೂಲಕ ಪ್ರತ್ಯಕ್ಷವಾಗಿ ಶ್ರೀಕೃಷ್ಣ ದರ್ಶನ ಕೊಟ್ಟಿದ್ದು, ಹೊರಗಿನ ಕಿಂಡಿಯನ್ನು ವಾದಿರಾಜರು ತಮ್ಮ ಸ್ನೇಹಿತರಾದ ವಿಜಯೇಂದ್ರತೀರ್ಥರಿಗಾಗಿ ಮಾಡಿಸಿದ್ದು.
ಧರ್ಮಸ್ಥಳದಲ್ಲಿ ದೇವಾಲಯ ಇದ್ದಿರಲಿಲ್ಲ
ಧರ್ಮಸ್ಥಳದಲ್ಲಿ ದೇವಾಲಯ ಇದ್ದಿರಲಿಲ್ಲ. ಸೋಂದ ಭೂತರಾಜರ ಮೂಲಕ ಕದ್ರಿಯಿಂದ ಮಂಜುನಾಥಸ್ವಾಮಿಯ ಒಂದಂಶದಿಂದ ತರಿಸಿ ಪ್ರತಿಷ್ಠೆ ಮಾಡಿ ಒಂದು ನರಸಿಂಹ ಸಾಲಿಗ್ರಾಮವಿಟ್ಟು ನಿತ್ಯ ಅನ್ನದಾನ ಕ್ಷೇತ್ರವನ್ನಾಗಿಸಿದರು, ಒಂದಂಶದಲ್ಲಿ ಭೂತರಾಜರೂ ಅಲ್ಲಿದ್ದಾರೆ.
ಹನುಮಂತ
ಸೀತಾಮಾತೆಯನ್ನು ಹುಡುಕಿಕೊಂಡು ಹನುಮಂತ ಲಂಕೆಯ ಹತ್ತಿರಬಂದಾಗ ಸಿಂಹಿಕೆ ಎಂಬವಳು ಹನುಮಂತನ ನೆರಳನ್ನು ಹಿಡಿದೆಳೆದು ಹಾಗೆಯೇ ನುಂಗಿ ಹಾಕುತ್ತಾಳೆ. ಹನುಮಂತ ಅವಳ ಹೊಟ್ಟೆಯನ್ನು ಸೀಳಿ ಹೊರಗೆ ಬರುತ್ತಾನೆ. ಆದರೆ ಅವಳಿಗೆ ಬ್ರಹ್ಮನ ವರವಿತ್ತು. ಎಲ್ಲರನ್ನೂ ಸಾಯಿಸುತ್ತಿದ್ದ ಸಿಂಹಿಕೆಯ ಬೆನ್ನಿಗೆ ಹನುಮಂತ ಗುದ್ದಿ ಮುನ್ನುಗ್ಗುತ್ತಾನೆ.