ರಾಜ್ಯದಲ್ಲಿ ಇನ್ಮುಂದೆ ಓವೈಸಿ ಕಾರ್ಯಕ್ರಮಗಳಿಗಿಲ್ಲ ಅನುಮತಿ?
Recommended Video
ಬೆಂಗಳೂರು. ಫೆ. 21: 'ಪಾಕಿಸ್ತಾನ್ ಜಿಂದಾಬಾದ್' ಎನ್ನುವಾಗ ಕೈಹಿಡಿದು ಎಳೆದು 'ನಾಟಕ ಮಾಡೋದು ಬೇಡ'. ಯಾರು ಕಾರ್ಯಕ್ರಮ ಆಯೋಜನೆ ಮಾಡಿದ್ದರೋ ಅವರ ಮೇಲೆ ಕೂಡ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಸಭೆಯ ಆಯೋಜಕರಿಗೆ ಸಮನ್ಸ್ ನೀಡಲಾಗಿದೆ. ಸಭೆಯ ಆಯೋಜಕರೇ ಅಮೂಲ್ಯ ಅವರನ್ನು ಕರೆಸಿದ್ದರಾ ಎಂಬುವುದನ್ನು ತನಿಖೆ ಮಾಡಲಾಗುತ್ತಿದೆ. ಜೊತೆಗೆ ಘಟನೆಯಲ್ಲಿ ಹಲವು ಸಂಘಟನೆಗಳ ಕೈವಾಡದ ಬಗ್ಗೆ ಅನುಮಾನಗಳಿವೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನುವ ಮೂಲಕ ಮುಂದಿನ ತನಿಖೆಯ ಸುಳಿವನ್ನು ಗೃಹಸಚಿವರು ಹಾಗೂ ಬೆಂಗಳೂರು ಮಹಾನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪರೋಕ್ಷವಾಗಿ ಕೊಟ್ಟಿದ್ದಾರೆ.
ಬೆಂಗಳೂರಿನ ಆರ್ಟಿ ನಗರದಲ್ಲಿ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಬೆಂಗಳೂರು ಮಹಾನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ನಿನ್ನೆಯ ಘಟನೆ ಬಗ್ಗೆ ಗೃಹಸಚಿವರಿಗೆ ಸಂಪೂರ್ಣ ಮಾಹಿತಿ ಕೊಡುವುದರ ಜೊತೆಗೆ ತನಿಖೆಯ ಪ್ರಗತಿಯನ್ನು ವಿವರಿಸಿದ್ದಾರೆ. ಅಮೂಲ್ಯ ಲಿಯೋನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದ್ದು, ಅವರ ಹಿಂದೆ ಇನ್ನು ಯಾರು ಯಾರು ಇದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ. ಕಾರ್ಯಕ್ರಮದ ಸಂಘಟಕರ ವಿರುದ್ದವೂ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿರುವ ಮಾಹಿತಿ ಉನ್ನತ ಪೊಲೀಸ್ ಮೂಲಗಳಿಂದ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ.
ತನಿಖೆಯ ಸುಳಿವು ಬಿಟ್ಟುಕೊಟ್ಟ ಕಮಿಷನರ್, ಗೃಹ ಸಚಿವರು
ಅಮೂಲ್ಯ ಲಿಯೋನ್ ಹಿಂದೆ ಹಿಂದೆ ಸಾಕಷ್ಟು ಸಂಘಟನೆಗಳಿವೆ ಎಂಬ ಸಂದರ್ಶನವನ್ನು ಸ್ವತಃ ಅಮೂಲ್ಯ ಕೊಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ಜೊತೆಗೆ ಕಾರ್ಯಕ್ರಮದ ಆಯೋಜನಕರಿಗೂ ಪೊಲೀಸರು ಸಮನ್ಸ್ ಕೊಟ್ಟಿದ್ದಾರೆ. ದೇಶದ್ರೋಹಿ ಸಂಘಟನೆಗಳಿಗೆ ಈಗ ಕಾರ್ಯಕರ್ತರು ಸಿಗುತ್ತಿಲ್ಲ ಹಾಗಾಗಿ ವಿದ್ಯಾರ್ಥಿಗಳನ್ನು ಬಳಸುತ್ತಿದ್ದಾರೆ. ಹುಬ್ಬಳ್ಳಿ, ದೆಹಲಿಯ ಜೆಎನ್ಯು ಹಾಗೂ ಈಗ ಬೆಂಗಳೂರಿನಲ್ಲೂ ವಿದ್ಯಾರ್ಥಿಗಳೇ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಜಾಮೀನು ಪಡೆಯಲು ಬಾಂಡ್ ಕೊಟ್ಟವರು ಯಾರು ಎಂಬುದು ಸಹ ಇಷ್ಟರಲ್ಲೇ ಬಹಿರಂಗವಾಗುತ್ತದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ವಿವರಿಸಿದ್ದಾರೆ.
ನಿನ್ನೆಯ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ. ತನಿಖೆ ಸಂದರ್ಭದಲ್ಲಿ ಎಲ್ಲರ ಹಿನ್ನೆಲೆ ಪರಿಶೀಲನೆ ನಡೆಸಿ, ಯಾರು ಭಾಗವಹಿಸಿದ್ದರು, ಅವರ ಹಿನ್ನೆಲೆ ಏನೂ? ಅವರ ಹಿಂದೆ ಯಾರಿದ್ದಾರೆ? ಎಂಬುದನ್ನು ಪತ್ತೆ ಹಚ್ಚಲಾಗುವುದು. ಜೊತೆಗೆ ಇದಕ್ಕೆ ಕುಮ್ಮಕ್ಕು ಕೊಡುವವರು ಯಾರಿದ್ದಾರೆ ಎಂಬುದನ್ನು ನೋಡಿಕೊಂಡು ಕ್ರಮ ಜರುಗಿಸಲಾಗುವುದು. ಈಗ ಸಧ್ಯಕ್ಕೆ ಬರಿ ಅಮೂಲ್ಯ ಅವರನ್ನು ಬಂಧಿಸಲಾಗಿದೆ. ಆದರೆ ಎಫ್ಐಆರ್ನಲ್ಲಿ 'ಇತರರು' ಎಂದು ದಾಖಲಿಸಿದ್ದೇವೆ ಎಂದಿದ್ದಾರೆ. ಆ ಮೂಲಕ ತನಿಖೆ ಹೇಗೆ ಮುಂದುವರೆಯುತ್ತಿದೆ ಎಂಬ ಮುನ್ಸೂಚನೆ ಕೊಟ್ಟಿದ್ದಾರೆ. ಉಳಿದಂತೆ ವೇದಿಕೆ ಮೇಲೆ ಇದ್ದ ಎಲ್ಲರ ಮೇಲೂ ಕ್ರಮಕೈಗೊಳ್ಳುವ ಎಚ್ಚರಿಯನ್ನು ಬೆಂಗಳೂರು ಪೊಲೀಸ್ ಕಮಿಷನ್ ಭಾಸ್ಕರರಾವ್ ನೀಡಿದ್ದಾರೆ.
ಎಫ್ಐಆರ್ನಲ್ಲಿ ಅಮೂಲ್ಯ ಹೆಸರನ್ನು ಮಾತ್ರ ಹಾಕಿಲ್ಲ
ಈಗಾಗಲೇ ಎಫ್ಐಆರ್ ದಾಖಲಿಸಲಾಗಿದ್ದು ಕೇವಲ ಅಮೂಲ್ಯ ಲಿಯೋನ್ ಹೆಸರನ್ನು ಮಾತ್ರ ಹಾಕಿಲ್ಲ. ಅಮೂಲ್ಯ ಹೆಸರಿನ ಜೊತೆಗೆ 'ಇತರರು' ಎಂದು ಸೇರಿಸಿದ್ದೇವೆ. ಅವಳ ಹಿಂದೆ ಇನ್ನೂ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡುವಾದ ಬಹಳಷ್ಟು ಹುಷಾರಾಗಿರಬೇಕು. ಬೇಜವಾಬ್ದಾರಿತನ ತೋರಿಸಿ ಸಮಾಜದ ವಿರುದ್ಧ ಅಥವಾ ಗಲಾಟೆ ಸೃಷ್ಟಿಯಾಗುವಂತಹ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನರನ್ನು ಉದ್ರೇಕಗೊಳಿಸುವ ಮಾತನ್ನು ಆಡುವವರ ಮೇಲೆ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಸುಮ್ಮನೆ ಕಣ್ಣುಮುಚ್ಚಿಕೊಂಡು ಇರೋದಕ್ಕೆ ಆಗುವುದಿಲ್ಲ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಬೆಂಗಳೂರು ಪೊಲೀಸರು ಕೂಡ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ಕೊಟ್ಟಿದ್ದೇವೆ. ಎಂತಹ ಜನರನ್ನು ಕರೆಸಿ ಭಾಷಣ ಮಾಡುವುದಕ್ಕೆ ವೇದಿಕೆ ಕೊಡಬೇಕು ಎಂದು ಆಯೋಜಕರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಆ ಹುಡುಗಿ ಮಾತನಾಡುವಾಗ ವಿನಾಕಾರಣ ಗೊಂದಲ ಆಗಿದೆ. ಇವರ ಬಗ್ಗೆ ಆಯೋಜಕರಿಗೆ ಗೊತ್ತಿರಲಿಲ್ಲವಾ? ವೇದಿಕೆ ಮೇಲೆ ನಿಂತು ನಾವು ಶೇಕಡಾ ಇಷ್ಟು ಜನರಿದ್ದೇವೆ, ನೀವು ಇಷ್ಟು ಜನರಿದ್ದೀರಿ, ನಮ್ಮನ್ನು ಬಿಟ್ಟರೆ ಹಾಗೇ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಮಾತನಾಡಿ ಎರಡು ಕೋಮುಗಳ ಮಧ್ಯೆ ವೈಮನಸ್ಸು ಬರುವಂತೆ ಮಾಡುವುದರಿಂದ ಗಲಾಟೆ ಹೆಚ್ಚಾಗುತ್ತದೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ, ಜನಸಾಮಾನ್ಯರಿಗೆ ವಿಶೇಷವಾಗಿ ಬಡಜನತೆಗೆ ತೊಂದರೆ ಆಗುತ್ತದೆ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ತೊದರೆ ಆಗುತ್ತದೆ ಎಂದು ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.
ಗಲಾಟೆ ಮಾಡಿಸುವುದು ಫ್ಯಾಶನ್ ಆಗಿಬಿಟ್ಟಿದೆ!
ಗಲಾಟೆ ಮಾಡಿಸುವುದು ಒಂದು ಪ್ಯಾಶನ್ ಆಗಿಬಿಟ್ಟಿದೆ. ಗಲಾಟೆ ಮಾಡಿಸೋಣ ಅಂತಾ ಗಲಾಟೆ ಮಾಡಿಸೋಣ ಅಂತಾ ಅವರವರಲ್ಲಿಯೇ ಪೈಪೋಟಿ ಶುರುವಾಗಿದೆ. ಸಣ್ಣಮಟ್ಟದ ಜನರ ಗುಂಪು ಇದ್ದರೂ ಕೂಡ ಬೆಂಗಳೂರಿನ ಇತರ ಜನರಿಗೆ ಇದರಿಂದ ಅನಾನುಕೂಲವಗಿದೆ. ನಮಗೆ ಬೆಂಗಳೂರಿನ ಶಾಂತಿ ಕಾಪಾಡುವುದು ಮುಖ್ಯ ಜವಾಬ್ದಾರಿಯಾಗಿದೆ. ಶಾಂತಿಯುತ ಪ್ರತಿಭಟನೆ ಮಾಡುವವರಿಗೆ ಅವಕಾಶ ಕೊಡುತ್ತಿದ್ದೇವೆ. ಯಾರಿಗೂ ಅವಕಾಶ ನಿರಾಕರಿಸಿಲ್ಲ. ಆದರೂ ಇಂತಹ ದೇಶದ್ರೋಹದ ಮಾತುಗಳಿಂದ ಅವರ ನಿಜವಾದ ಬಣ್ಣವನ್ನು ಅವರೇ ಬಯಲು ಮಾಡಿಕೊಳ್ಳುತ್ತಿದ್ದಾರೆಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಸಂಸದ ಓವೈಸಿ ಕಾರ್ಯಕ್ರಮಗಳಿಗೆ ಇನ್ಮುಂದೆ ಅನುಮತಿ ಇಲ್ಲ?
ಸಂಸದ ಅಸಾದುದ್ದೀನ್ ಓವೈಸಿ ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕಾ? ಬೇಡವಾ? ಎಂಬ ವಿಷಯವನ್ನು ನಾವು ಮರುಪರಿಶೀಲಿಸಬೇಕಾಗಿದೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಯಚೂರಿನಲ್ಲಿ ಓವೈಸಿಯವರ ಕಾರ್ಯಕ್ರಮ ನಿಷೇಧಿಸಿದ್ದರು. ಸಂಘಟಕರನ್ನೇ ಬಂಧಿಸಲಾಗಿತ್ತು. ಆದರೆ ನಾವು ಅವಕಾಶ ಕೊಟ್ಟೆವು. ಆದರೆ ಅದರಿಂದ ಈ ರೀತಿ ಘಟನೆಗಳು ಮರುಕಳಿಸುತ್ತವೆ ಎಂದಾದರೆ ನಾವು ಸಹ ನಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಆ ಮೂಲಕ ಸಂಸದ ಅಸಾದುದ್ದೀನ್ ಓವೈಸಿ ಅವರು ಭಾಗವಹಿಸುವ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿ ಅನುಮತಿ ನಿರಾಕರಿಸುವುದು ಬಹತೇಕ ಖಚಿತವಾಗಿದೆ.