ಪೂರ್ಣ ವೇತನ ಇಲ್ಲದೇ ಸಾಲದ ಸುಳಿಯಲ್ಲಿ ಬಿಎಂಟಿಸಿ ನೌಕರರು: ಸಾರಿಗೆ ಮಂತ್ರಿಗಳೇ ಗಮನಿಸಿ
ಬೆಂಗಳೂರು, ಜ. 13: ಏನೆಲ್ಲಾ ಹೋರಾಟ ನಡೆಸಿದರೂ ಬಿಎಂಟಿಸಿ ನೌಕರರು ಕಷ್ಟದಿಂದ ಪಾರಾಗುವಂತೆ ಕಾಣುತ್ತಿಲ್ಲ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ ನಡೆಸಿದ್ದ ಬಿಎಂಟಿಸಿ ನೌಕರರು ವೇತನ ಇಲ್ಲದೇ ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಇನ್ನೂ ಮನೆ ಬಾಡಿಗೆ ಪಾವತಿಸದೇ ಕೆಲವು ಬಿಎಂಟಿಸಿ ನೌಕರರು ಮರ್ಯಾದೆಗೆ ಅಂಜಿ ಕದ್ದು ಮುಚ್ಚಿ ಮನೆಗೆ ಬಂದ ಹೋಗುತ್ತಿದ್ದಾರೆ.
ಬಿಎಂಟಿಸಿ ನೌಕರರ ಸಂಕಷ್ಟ: ರಾಜಧಾನಿ ಬೆಂಗಳೂರಿನ ಬಡವರ ಸಾರಿಗೆ ಬಿಎಂಟಿಸಿ. ಕೊರೊನಾ ಕಾಲದಲ್ಲಿ ಜೀವ ಭಯ ಬದಿಗೊತ್ತಿ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಹಗಲಿರುಳು ಶ್ರಮ ಪಡುತ್ತಿದ್ದಾರೆ. ತಿಂಗಳು ಬೆವರು ಹರಿಸಿ ದುಡಿದರೂ ಮಾಸಿಕ ಸಂಬಳ ಸಿಗುತ್ತಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಅರ್ಧ ವೇತನ ನೀಡಲಾಗಿತ್ತು. ಡಿಸೆಂಬರ್ ವೇತನದಲ್ಲಿ ಕೂಡ ಅರ್ಧ ವೇತನ ಪಾವತಿಸಲಾಗಿದೆ. ಸಂಬಳ ನಂಬಿ ಬದುಕುವ ಬಿಎಂಟಿಸಿ ನೌಕರರು ಇದೀಗ ಸಾಲ ಮಾಡಿ ಬದುಕು ದೂಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮೊದಲೇ ವೇತನ ಕಡಿಮೆ
ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 31 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ 46 ಸಾವಿರ ಟ್ರಿಪ್ ಬಸ್ ಪ್ರಯಾಣ ಮಾಡುತ್ತಿವೆ. ಸುಮಾರು ಆರು ಸಾವಿರ ಬಸ್ ಪ್ರತಿ ನಿತ್ಯ ಸಂಚರಿಸುತ್ತಿವೆ. ಕೊರೊನಾ ನಡುವೆಯೂ ಬಸ್ಗಳಲ್ಲಿ ಕುರಿ ತುಂಬಿದ ರೀತಿ ಪ್ರಯಾಣಿಕರನ್ನು ತುಂಬಿಸಲಾಗುತ್ತಿದೆ. ಇಷ್ಟಾಗಿಯೂ ಬಿಎಂಟಿಸಿ ನೌಕರರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಕಳೆದ ನವೆಂಬರ್ನಲ್ಲಿ ಸಹ ಅರ್ಧ ವೇತನ ನೀಡಲಾಗಿತ್ತು. ಈ ಬಾರಿಯೂ ಅರ್ಧ ವೇತನ ನೀಡಲಾಗಿದೆ. ಹೀಗಾಗಿ ಒಂದು ತಿಂಗಳ ವೇತನ ತಡೆ ಹಿಡಿಯಲಾಗಿದೆ. ಇದರಿಂದ ಬಿಎಂಟಿಸಿ ನೌಕರರು ಸಂಕಟಕ್ಕೆ ಸಿಲುಕಿದ್ದಾರೆ. ಅರ್ಧ ವೇತನ ಕೊಡುತ್ತಿರುವುದಕ್ಕೆ ಕಾರಣ ಮಾತ್ರ ಬಿಎಂಟಿಸಿ ನೀಡಿಲ್ಲ.
ವೇತನವೇ ಜೀವನ
ಬಿಎಂಟಿಸಿ ಸಂಸ್ಥೆ ತಾಂತ್ರಿಕ ಕೌಶಲ್ಯ ಅಳವಡಿಸಿಕೊಂಡಿರುವುದಲ್ಲಿ ದೇಶಕ್ಕೆ ಮಾದರಿ. ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇಂಥ ಸಂಸ್ಥೆಯ ಶ್ರೇಯೋಭಿವೃದ್ದಿಗೆ ದುಡಿಯುತ್ತಿರುವ ನಿರ್ವಾಹಕರು ಮತ್ತು ಚಾಲಕರಿಗೆ ಇರುವ ಏಕೈಕ ಆದಾಯದ ಮೂಲ ವೇತನ. ಅದರಲ್ಲಿ ಬಾಡಿಗೆ ಮನೆ, ಜೀವನ, ಮಕ್ಕಳ ಶುಲ್ಕ ಪಾವತಿ ಮಾಡಿ ಜೀವನ ನಿರ್ವಹಿಸಬೇಕು. ಮೊದಲೇ ಸಿಗುವ ವೇತನ ಬೇರೆ ಕಡಿಮೆ. ಅದರಲ್ಲೂ ಅರ್ಧ ವೇತನ ಪಡೆದು ಜೀವನ ಮಾಡುವುದು ಹೇಗೆ ?
ಬಾಡಿಗೆ ಕಟ್ತಿಲ್ಲ, ರೇಷನ್ ಅಂಗಡಿ ಸಾಲ, ಬಸ್ನಲ್ಲಿ ಠಿಕಾಣಿ
ಇನ್ನು ಬಿಎಂಟಿಸಿ ನೌಕರರು ಅರ್ಧ ವೇತನ ಪಡೆದು ಮನೆಯಲ್ಲಿ ಮುಖ ತೋರಿಸಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಮನೆಗಳ ಬಾಡಿಗೆ ಪಾವತಿಸುತ್ತಿಲ್ಲ. ಬಾಡಿಗೆ ಮನೆ ಮಾಲೀಕರ ಮಾತು ಕೇಳದೇ ಕದ್ದು ಮುಚ್ಚಿ ಮನೆಗೆ ಹೋಗುತ್ತಿದ್ದಾರೆ. ಇನ್ನೂ ಬಹುತೇಕರು ರೇಷನ್ಗೂ ಸಾಲ ಮಾಡುವ ಸ್ಥಿತಿ. ಇಂತಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೊರೊನಾ ಹೆಚ್ಚಳದಿಂದ ಬಸ್ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಬಿಎಂಟಿಸಿ ಸಂಚಾರ ನಿಂತರೆ ನೌಕರರ ಪರಿಸ್ಥಿತಿ ಏನಾಗಲಿದೋ ದೇವರೇ ಬಲ್ಲ.
ಐಎಎಸ್ಗಳ ವೇತನ ಕಡಿತ ಏಕಿಲ್ಲ?
ಐಎಎಸ್ಗಳ ವೇತನ ಕಡಿತ? ಬಿಎಂಟಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆಯೇ? ಅಥವಾ ಮುಷ್ಕರ ನಿರತ ನೌಕರರ ಮೇಲೆ ಸೇಡಿನ ಅಸ್ತ್ರವಾಗಿ ವೇತನ ತಡೆ ಹಿಡಿಯಲಾಗಿದೆಯಾ ಎಂಬ ಪ್ರಶ್ನೆಗಳು ನೌಕರರ ವಲಯದಲ್ಲಿ ಚರ್ಚೆ ಆಗುತ್ತಿವೆ.
"ನನಗೆ ಬರುವ ವೇತನದಲ್ಲಿ ಕಡಿತವಾಗಿ ಮಾಸಿಕ 20 ಸಾವಿರ ಬರುತ್ತಿತ್ತು. ಅದರಲ್ಲಿ ಕನಿಷ್ಠ ಜೀವನ ಸಾಗಿಸುತ್ತಿದ್ದೆವು. ಇದೀಗ ಹತ್ತು ಸಾವಿರ ನೀಡಿದ್ದಾರೆ. (ಅರ್ಧ ವೇತನ) ಅದರಲ್ಲಿ ಬಾಡಿಗೆ, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮಾಡವುದು ಹೇಗೆ? ಮುಷ್ಕರ ಮಾಡಿದ್ದಕ್ಕೆ ಸಿಟ್ಟ ತೀರಿಸಿಕೊಳುತ್ತಿರಬೇಕು ಬಿಎಂಟಿಸಿ ಎಂದು ನಿರ್ವಾಹಕರೊಬ್ಬರು ತನ್ನ ಮನದಾಳದ ನೋವನ್ನು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.
ಜೀವನ ನಡೆಸುವುದು ಹೇಗೆ?
ಐಎಎಸ್ ವೇತನ ಅರ್ಧವೇ? ಬಿಎಂಟಿಸಿ ನಿರ್ವಾಹಕ, ಚಾಲಕ ಮತ್ತು ತಾಂತ್ರಿಕ ಸಿಬ್ಬಂದಿ ವೇತನ ಮಾತ್ರ ಅರ್ಧದಷ್ಟು ಪಾವತಿ ಮಾಡಿ ಉಳಿದಿದ್ದು ಬಾಕಿ ಉಳಿಸಿಕೊಳ್ಳಲಾಗಿದೆ. ಅದೇ ಅಧಿಕಾರಿಗಳದ್ದು ಅರ್ಧ ವೇತನ ಉಳಿಸಿಕೊಂಡಿದ್ದಾರಾ? ಸಾಧ್ಯವೇ ಇಲ್ಲ. ಐಎಎಸ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಉಚಿತ ವಾಹನ ಬಂಗಲೆ ಎಲ್ಲವೂ ಇದ್ದು ಅವರಿಗೆ ಪೂರ್ಣ ಪ್ರಮಾಣ ಸಂಬಳ ಸಿಗುತ್ತಿದೆ. ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡು ಜೀವಿಸುವ ನೌಕರರು ಈ ಅರ್ಧ ಸಂಬಳ ಕೈಗಿಟ್ಟುಕೊಂಡು ಜೀವನ ನಡೆಸುವುದು ಹೇಗೆ? ಅಧಿಕಾರಿಗಳಿಗೆ ಒಂದು ನ್ಯಾಯ, ನೌಕರರಿಗೊಂದು ನ್ಯಾಯವೇ? ಈ ಕೂಡಲೇ ಬಿಎಂಟಿಸಿ ಸಂಸ್ಥೆ ತನ್ನ ನೌಕರರಿಗೆ ಪರ್ಣ ವೇತನ ನೀಡಬೇಕು ಎಂದು ನಿರ್ವಾಹಕರು ಮತ್ತು ಚಾಲಕರು ಆಗ್ರಹಿಸಿದ್ದಾರೆ. ವೇತನ ಅರ್ಧ ತಡೆ ಹಿಡಿದಿರುವುದಕ್ಕೆ ಬಿಎಂಟಿಸಿ ಅಧಿಕಾರಿಗಳು ಸಾಕಾರಣವನ್ನು ಸಿಬ್ಬಂದಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.