ನರೇಂದ್ರ ಮೋದಿಗೆ ದೇವೇಗೌಡರು ಪತ್ರ ಬರೆದಿದ್ದೇಕೆ?
ಬೆಂಗಳೂರು, ಜ. 9: ಬೆಂಗಳೂರು-ಮೈಸೂರು ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಬಿಎಂಐಸಿ)ಯಲ್ಲಿ ಅವ್ಯವಹಾರ ನಡೆದಿದ್ದು, ಮಹಾಲೆಕ್ಕಪಾಲಕ (ಸಿಎಜಿ) ಮುಖೇನ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ಬರೆದ ಪತ್ರದ ನಕಲನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಪ್ರಧಾನಿ ಮೋದಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೇನೆ. ಬಿಎಂಐಸಿ ಯೋಜನೆ 20 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದು 2ಜಿ ಹಗರಣಕ್ಕಿಂತಲೂ ಹತ್ತು ಪಟ್ಟು ದೊಡ್ಡ ಅವ್ಯವಹಾರ ಎಂದು ಆರೋಪಿಸಿದರು.[ಗೌಡರು ಗುಡುಗಿದ್ರು, ನೈಸ್ ಪ್ರಕರಣ ಅಸ್ತವ್ಯಸ್ತ]
ನೈಸ್ ಸಂಸ್ಥೆ ಮುನ್ನೆಡೆಸುತ್ತಿರುವ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಯೋಜನೆಯ ಲೋಪಗಳನ್ನು ಬಳಸಿಕೊಂಡ ನೈಸ್ ಸಂಸ್ಥೆ ಅಗತ್ಯಕ್ಕಿಂತ ಹೆಚ್ಚು ಭೂಮಿ ವಶಪಡಿಸಿಕೊಂಡಿದ್ದು ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಇದಲ್ಲದೇ ಕೇಂದ್ರ ಸರ್ಕಾರ ಕರ್ನಾಟಕದ ಇತರ ಪ್ರಮುಖ ಯೋಜನೆಗಳ ಮೇಲೂ ಒಂದು ಕಣ್ಣಿಡಬೇಕಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯಲ್ಲೂ ಅಕ್ರಮದ ವಾಸನೆ ಕಂಡುಬಂದಿದೆ ಎಂದು ಆರೋಪಿಸಿದರು.[ಮೋದಿ ಸರ್ಕಾರ ವಿರುದ್ಧ ಸಿಡಿದೆದ್ದ ಜನತಾ ಪರಿವಾರ]
ಒಟ್ಟಿನಲ್ಲಿ ಇಷ್ಟು ದಿನ ತಣ್ಣಗಾಗಿದ್ದ ನೈಸ್ ಮುಖ್ಯಸ್ಥ ಅಶೊಕ್ ಖೇಣಿ ಮತ್ತು ದೇವೇಗೌಡ ನಡುವಿನ ಶೀತಲ ಸಮರ ಮತ್ತೆ ಆರಂಭವಾದಂತೆ ಕಂಡುಬಂದಿದ್ದು. ಪ್ರಧಾನಿ ಸಚಿವಾಲಯ ಇದನ್ನು ಯಾವ ರೀತಿ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕು.