ಮೈತ್ರಿ ಸರಕಾರದಲ್ಲಿ ಬಿಎಂ ಫಾರೂಕ್ ಆರೋಗ್ಯ ಸಚಿವ?
ಬೆಂಗಳೂರು, ಮೇ 21: ಕಾಂಗ್ರೆಸ್-ಜೆಡಿಎಸ್ ಸರಕಾರ ಬುಧವಾರದಿಂದ ಅಸ್ತಿತ್ವಕ್ಕೆ ಬರಲಿದ್ದು ಮೈತ್ರಿ ಸರಕಾರದಲ್ಲಿ ಖಾತೆಗಳ ಹಂಚಿಕೆಯ ಚರ್ಚೆಗಳು ಬಿರುಸಿನಿಂದ ಸಾಗಿವೆ. ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕು, ಯಾರಿಗೆ ಯಾವ ಖಾತೆ ನೀಡಬೇಕು, ಕಾಂಗ್ರೆಸಿನವರಿಗೆ ಯಾವ ಖಾತೆ, ಜೆಡಿಎಸ್ ನವರಿಗೆ ಯಾವ ಖಾತೆ ಎಂಬ ಬಗ್ಗೆ ಮಾತುಕತೆಗಳು ಚಾಲ್ತಿಯಲ್ಲಿವೆ.
ಕುಮಾರಸ್ವಾಮಿಯವರ ಸಂಪುಟದಲ್ಲಿ ದಕ್ಷಿಣ ಕನ್ನಡ ಭಾಗದ ಮುಸ್ಲಿಂ ಸಮುದಾಯಕ್ಕೆ ಸೇರಿದ ಉದ್ಯಮಿ ಬಿ.ಎಂ. ಫಾರೂಕ್ ಅವರಿಗೆ ಸಚಿವ ಸ್ಥಾನ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಹಾಗೆ ನೋಡಿದರೆ ಫಾರೂಕ್ ಯಾವುದೇ ಸದನದ ಸದಸ್ಯರಾಗಿಲ್ಲ. ಹೀಗಿದ್ದೂ ಅವರಿಗೆ ಸಚಿವ ಸ್ಥಾನ ನೀಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಒಂದೇ ಒಂದು ಸ್ಥಾನಗಳನ್ನೂ ಜೆಡಿಎಸ್ ಗೆದ್ದಿಲ್ಲ. ಕಾಂಗ್ರೆಸ್ ಗೆದ್ದಿರುವುದೂ ಒಂದು ಸ್ಥಾನ ಮಾತ್ರ. ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿದ್ದ ಯುಟಿ ಖಾದರ್ ಮಂಗಳೂರಿನಿಂದ ಗೆದ್ದಿದ್ದಾರೆ.
ಲೆಕ್ಕಾಚಾರ
ಅವಿಭಜಿತ ದಕ್ಷಿಣ ಕನ್ನಡದಲ್ಲಿರುವ ಏಕೈಕ ಶಾಸಕ ಖಾದರ್ ಅವರಿಗೆ ಸುಲಭವಾಗಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇತ್ತು. ಆದರೆ ಇದೀಗ ಫಾರೂಕ್ ಕರಾವಳಿ ಭಾಗದಿಂದ ಸಚಿವ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಇಬ್ಬರೂ ಮುಸ್ಲಿಂ ಸಮುದಾಯಕ್ಕೇ ಸೇರಿರುವುದರಿಂದ, ಜೊತೆಗೆ ಒಂದೇ ಭಾಗಕ್ಕೆ ಸೇರಿರುವುದರಿಂದ ಖಾದರ್ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಕಾದು ನೋಡಬೇಕಿದೆ.
ಡಿಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿರುವ ನಾಲ್ವರು ಯಾರು?
ಫಾರೂಕ್ ಯಾಕೆ?
ದೇವೇಗೌಡರಿಗೆ ಫಾರೂಕ್ ಆಪ್ತರಾಗಿದ್ದಾರೆ. ಹಲವು ಸಂದರ್ಭದಲ್ಲಿ ಪಕ್ಷ ಸಂಕಷ್ಟದಲ್ಲಿದ್ದಾಗ ಅವರು ಕೈ ಹಿಡಿದಿದ್ದಾರೆ. ಆಗರ್ಭ ಶ್ರೀಮಂತರಾಗಿರುವ ಇವರು ಜೆಡಿಎಸ್ ಪಾಲಿನ ಆರ್ಥಿಕ ಶಕ್ತಿಯೂ ಹೌದು. ಅವರು ಎರಡು ಬಾರಿ ರಾಜ್ಯಸಭಾ ಚುನಾವಣೆಗೆ ನಿಂತು ಸೋಲೊಪ್ಪಿಕೊಂಡಿದ್ದರು. ಹಲವು ವರ್ಷಗಳಿಂದ ಪಕ್ಷದಲ್ಲಿದ್ದರೂ ಯಾವುದೇ ಹುದ್ದೆ ಕೊಡಲು ಸಾಧ್ಯವಾಗಿಲ್ಲ ಎಂಬ ಕೊರತೆ ಇದೆ.
ಈ ಕಾರಣಕ್ಕೆ ಈ ಬಾರಿ ಫಾರೂಕ್ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಅವರಿಗೆ ಆರೋಗ್ಯ ಸಚಿವ ಖಾತೆ ನೀಡಲಾಗುತ್ತದೆ ಜೊತೆಗೆ ದಕ್ಷಿಣ ಕನ್ನಡ ಉಸ್ತುವಾರಿ ನೀಡಲಾಗುತ್ತದೆ ಎಂಬ ಚರ್ಚೆಗಳೂ ನಡೆಯುತ್ತಿವೆ.