ಬಿಜೆಪಿಯಲ್ಲೂ ಕೈಕೊಡುವವರು ಇದ್ದಾರೆ: ಸಿದ್ದರಾಮಯ್ಯ
ಬೆಂಗಳೂರು, ಜುಲೈ 12: ವಿಶ್ವಾಸಮತ ಗೆಲ್ಲುವ ವಿಶ್ವಾಸವಿದೆ ಎಂದಿರುವ ಸಿದ್ದರಾಮಯ್ಯ, ಬಿಜೆಪಿಯಲ್ಲೂ 'ಬ್ಲಾಕ್ ಶೀಪ್ಸ್' (ಕೈಕೊಡುವವರು) ಇದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ, ರಿವರ್ಸ್ ಆಪರೇಷನ್ನ ಅನುಮಾನ ಮೂಡಿಸಿದೆ, ವಿಶ್ವಾಸಮತ ಯಾಚನೆ ನಡೆದಾಗ ಬಿಜೆಪಿ ಶಾಸಕರು ಮೈತ್ರಿ ಸರ್ಕಾರದ ಪರ ಚಲಾಯಿಸುತ್ತಾರೆಯೇ, ಅದಕ್ಕೆ ಈಗಾಗಲೇ 'ವ್ಯವಸ್ಥೆ' ಆಗಿದೆಯೇ ಎಂಬ ಅನುಮಾನವೂ ಮೂಡುತ್ತಿದೆ.
ಮುಂದುವರೆದು ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿಯಲ್ಲೂ 'ಬ್ಲಾಕ್ ಶೀಪ್ಸ್'ಗಳಿದ್ದಾರೆ ಹಾಗಾಗಿಯೇ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗುತ್ತಿದೆ ಎಂದು ಹೇಳಿದ್ದಾರೆ.
ವಿಶ್ವಾಸ ಇರುವುದಕ್ಕೇ ವಿಶ್ವಾಸಮತ ಯಾಚನೆಗೆ ಕುಮಾರಸ್ವಾಮಿ ಕೇಳಿದ್ದಾರೆ, ಕಾದು ನೋಡಿ ಏನಾಗುತ್ತದೆ ಎಂದು ಗೊತ್ತಾಗುತ್ತದೆ ಎಂದು ಗೋಡೆಯ ಮೇಲೆ ದೀಪವಿಟ್ಟಿದ್ದಾರೆ ಸಿದ್ದರಾಮಯ್ಯ.
ಇಂದು ಸಂಜೆ ವೇಳೆಗೆ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿರುವ ಸಿದ್ದರಾಮಯ್ಯ, ರೋಷನ್ ಬೇಗ್ ಅವರನ್ನು ಅಮಾನತ್ತು ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅತೃಪ್ತ ಶಾಸಕರನ್ನ ಅನರ್ಹಗೊಳಿಸಲು ಸ್ಪೀಕರ್ಗೆ ಮನವಿ ಸಹ ಮಾಡಿದ್ದೇವೆ ಎಂದು ಹೇಳಿದ್ದಾರೆ.