ಬಿ.ಎಲ್.ಸಂತೋಷ್ ರಾಜ್ಯಕ್ಕೆ ವಾಪಸ್, ಬಿಎಸ್ವೈಗೆ ಸಂತೋಷವಿಲ್ಲ?
ಬೆಂಗಳೂರು, ಆಗಸ್ಟ್. 27 : ಬಿಜೆಪಿ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ಗೆ ಪಕ್ಷ ಸಂಘಟನೆ ಉಸ್ತುವಾರಿ ವಹಿಸಲಾಗಿದೆ. ಸಂತೋಷ್ ಅವರಿಗೆ ಅಗತ್ಯ ಸಹಕಾರ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ.
ಶನಿವಾರ ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಆರ್ಎಸ್ಎಸ್ ಪ್ರಮುಖರಾದ ಸಂತೋಷ್ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಸಂತೋಷ್ ಕರ್ನಾಟಕದ ರಾಜಕಾರಣಕ್ಕೆ ಮರಳಿರುವುದು ಯಡಿಯೂರಪ್ಪ ಅವರಿಗೆ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.
ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ
ಪಕ್ಷ ಸಂಘಟನೆಗೆ ತಂತ್ರಗಳನ್ನು ರೂಪಿಸುವಲ್ಲಿ ಬಿ.ಎಲ್.ಸಂತೋಷ್ ಸಿದ್ಧ ಹಸ್ತರು. 2018ನೇ ಚುನಾವಣೆ ಎದುರಿರುವಾಗ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವ ಹೊಣೆಯನ್ನು ಅವರಿಗೆ ನೀಡಲಾಗಿದೆ. ಸಂತೋಷ್ಗೆ ಅಗತ್ಯ ಸಹಕಾರ ನೀಡಿ ಎಂದು ಯಡಿಯೂರಪ್ಪಗೆ ಸೂಚನೆ ನೀಡಿರುವುದು ಬಿಎಸ್ವೈ ಪಾಲಿಗೆ ನುಂಗಲಾರದ ತುತ್ತಾಗಿದೆ.
ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ಅಷ್ಟಕಷ್ಟೆ. ಹಲವಾರು ವರ್ಷಗಳಿಂದ ಈ ಇಬ್ಬರು ನಾಯಕರ ಮುನಿಸು ಮುಂದುವರೆದಿದೆ. ಕೆಜೆಪಿ ತೊರೆದು ಬಿಜೆಪಿ ಸೇರಿದ್ದ ಯಡಿಯೂರಪ್ಪ ಸಂತೋಷ್ ಅವರನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದರು. ದಕ್ಷಿಣ ಭಾರತದ ಉಸ್ತುವಾರಿ ನೋಡಿಕೊಳ್ಳಲು ಆರಂಭಿಸಿದರು....
ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಜಾವ್ಡೇಕರ್ ಹೆಗಲಿಗೆ
ಮೊದಲಿನಿಂದಲೂ 'ಸಂತೋಷ'ವಿಲ್ಲ
ಯಡಿಯೂರಪ್ಪ, ಬಿ.ಎಲ್.ಸಂತೋಷ್ ನಡುವೆ ಮೊದಲಿನಿಂದಲೂ ಅಷ್ಟಕಷ್ಟೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವೆ ಜಟಾಪಟಿ ಉಂಟಾದಾಗ. ಬಿ.ಎಲ್.ಸಂತೋಷ್ ಪಕ್ಷದ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.
ಸಂತೋಷ್ಗೆ ಸಂಪೂರ್ಣ ಜವಾಬ್ದಾರಿ
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಬಿ.ಎಲ್.ಸಂತೋಷ್ಗೆ ಅಮಿತ್ ಶಾ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ. ಪಕ್ಷ ಸಂಘಟನೆ, ಚುನಾವಣೆ ತಂತ್ರ ರೂಪಿಸುವುದು ಸೇರಿದಂತೆ ವಿವಿಧ ಕಾರ್ಯತಂತ್ರಗಳನ್ನು ರೂಪಿಸುವ ಉಸ್ತುವಾರಿ ಸಂತೋಷ್ ಹೆಗಲಿಗಿದ್ದು, ಅದಕ್ಕೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ.
ಯಡಿಯೂರಪ್ಪಗೆ ಹಿನ್ನಡೆ
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ ಕೋರ್ ಕಮಿಟಿಯ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ಮೂಲಕ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬ್ರೇಕ್ ಹಾಕಲಾಗಿದೆ. ಇದು ಯಡಿಯೂರಪ್ಪ ಅವರಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ.
ಯಡಿಯೂರಪ್ಪ ರಾಜೀನಾಮೆಯಲ್ಲಿ ಸಂತೋಷ್ ಪಾತ್ರ?
ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ನೀಡುವುದರಲ್ಲಿ ಸಂತೋಷ್ ಪಾತ್ರವಿತ್ತು? ಎಂಬ ಸುದ್ದಿ ಇದೆ. ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆಯೂ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಇದೆ. ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಮುಂತಾದ ನಾಯಕರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಸಂತೋಷ್ ಸೂಚಿಸಿದ್ದರು ಎನ್ನುತ್ತವೆ ಕೆಲವು ಮಾಹಿತಿ.
ಆಂತರಿಕ ಕಲಹಕ್ಕೆ ತೆರೆ?
ಬಿ.ಎಲ್.ಸಂತೋಷ್ ಅವರನ್ನು ರಾಜ್ಯಕ್ಕೆ ವಾಪಸ್ ಕಳಿಸುವ ಮೂಲಕ ಪಕ್ಷದ ಆಂತರಿಕ ಕಚ್ಚಾಟಕ್ಕೆ ಅಮಿತ್ ಶಾ ತೆರೆ ಎಳೆದರೆ? ಎಂಬ ಪ್ರಶ್ನೆ ಹುಟ್ಟಿದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಹಲವು ನಾಯಕರು ಅಪಸ್ವರ ಎತ್ತಿದ್ದರು. ಈಗ ಸಂತೋಷ್ ಆಗಮನದಿಂದಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇದೆ.
ಯಾರು ಈ ಸಂತೋಷ್?
ಬಿ.ಎಲ್.ಸಂತೋಷ್ ಮೂಲತಃ ಉಡುಪಿಯವರು. ದಾವಣೆಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ಬಹುಬೇಗನೆ ಆರ್ಎಸ್ಎಸ್ ಸಂಪರ್ಕಕ್ಕೆ ಬಂದ ಅವರು ಮಿತ ಭಾಷಿ, ಸರಳ ವ್ಯಕ್ತಿತ್ವದವರು. ಪಕ್ಷ ಸಂಘಟನೆಯಲ್ಲಿ ಅವರ ತಂತ್ರಗಾರಿಕೆಯನ್ನು ರಾಷ್ಟ್ರೀಯ ನಾಯಕರು ಮೆಚ್ಚಿದ್ದಾರೆ.