ಕಾಂಗ್ರೆಸ್ಸಿಗೆ ಹಸಿವಾಗಿದೆ,ಅದರ ಫಲವೇ ಖೇಣಿ ಸೇರ್ಪಡೆ: ಸುರೇಶ್ ಕುಮಾರ್
ಬೆಂಗಳೂರು, ಮಾರ್ಚ್ 05: ಕಾಂಗ್ರೆಸ್ ಪಕ್ಷಕ್ಕೆ ಹಸಿವಾಗಿದೆ. ಅದನ್ನು ನೀಗಿಸಿಕೊಳ್ಳುವುದಕ್ಕಾಗಿ ಎಂತೆಂಥವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಅದರ ಫಲವೇ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹೇಳಿದರು.
ಇಂದು(ಮಾ.05) ಕಾಂಗ್ರೆಸ್ ಪಕ್ಷ ಸೇರಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರ ನಡೆಯನ್ನೂ, ನೈಸ್ ಹಗರಣದ ರೂವಾರಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ನಡೆಯನ್ನು ರಾಜಾಜೀನಗರ ಶಾಸಕ ಸುರೇಶ್ ಕುಮಾರ್ ಖಂಡಿಸಿದರು.
ಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ
"ಯಾರ್ಯಾರು ವಿರೋಧ ಪಕ್ಷದಲ್ಲಿದ್ದಾಗ ಜೈಲು ಹಕ್ಕಿಗಳು ಅಂತ ಟೀಕೆ ಮಾಡುತ್ತಿದ್ದವು. ತಮ್ಮ ಪಕ್ಷಕ್ಕೆ ಸೇರುತ್ತಿದ್ದಂತೆಯೇ ಅವರನ್ನು ಉತ್ತಮ ರಾಜಕಾರಣಿಗಳು ಎನ್ನುತ್ತಾರೆ. ಅದೇ ರೀತಿ ಇವತ್ತು ಒಬ್ಬ ಮಹಾಪುರುಷರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ" ಎಂದು ಅವರು ಲೇವಡಿ ಮಾಡಿದರು.
"ಕನ್ನಡ ಮಕ್ಕಳ ಪಕ್ಷದ ನಾಯಕ ಅಶೋಕ್ ಖೇಣಿ ಅವರ ನೈಸ್ ಹಗರಣದ ಕುರಿತು ಸದನದಲ್ಲಿ ಭಾರೀ ಚರ್ಚೆಯಾಗಿ ನಂತರ ಸದನ ಸಮಿತಿಯನ್ನೂ ರಚಿಸಲಾಗಿತ್ತು. ಆ ಸದನ ಸಮಿತಿಯ ಅಧ್ಯಕ್ಷರು ಕಾನೂನು ಸಚಿವ ಜಯಚಂದ್ರ! ಹೆಚ್ಚುವರಿಯಾಗಿ ಭೂಮಿಯ ಕಬಳಿಸಿದ ಖೇಣಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದೂ ಸಮಿತಿಯಲ್ಲಿ ಚರ್ಚೆಯಾಗಿತ್ತು. ಅಂಥ ಅಶೋಕ್ ಖೇಣಿಯನ್ನು ಇಂದು ಕಾಂಗ್ರೆಸ್ಸಿಗರೇ ಬರಮಾಡಿಕೊಂಡಿರುವುದು ವಿಡಂಬನೆ" ಎಂದು ಅವರು ಟೀಕಿಸಿದರು.
ಅಶೋಕ್ ಖೇಣಿ ಕಾಂಗ್ರೆಸ್ಗೆ : ಆರ್.ಅಶೋಕ್ ಹೇಳಿದ್ದೇನು?
"ಕಾಂಗ್ರೆಸ್ ಪಕ್ಷಕ್ಕೆ ಹಸಿವಾಗಿದೆ. ಅದನ್ನು ನೀಗಿಸಿಕೊಳ್ಳೋಕೆ ಇಂಥವರನ್ನೆಲ್ಲ ಸೇರಿಸಿಳ್ಳುತ್ತಿದೆ. ಈ ಮೂಲಕ ತನ್ನ ನಿಜವಾದ ಬಣ್ಣವನ್ನು ಬಯಲು ಮಾಡಿದೆ. ಕಾಂಗ್ರೆಸ್ ಪಕ್ಷ ಅಂದರೆ ಏನು ಎಂಬುದು ಗೊತ್ತಾಗಿದೆ. ಜನವಿರೋಧಿ ನೀತಿಯನ್ನು ಬಿಜೆಪಿ ವಿರೋಧಿಸುತ್ತದೆ. ನೈಸ್ ಪ್ರಕರಣದಿಂದ ನೊಂದ, ಕಣ್ಣೀರು ಹಾಕಿದ ಜನರ ಶಾಪ ಕಾಂಗ್ರೆಸ್ಸಿಗೆ ತಟ್ಟುತ್ತೆ" ಎಂದು ಅವರು ಹೇಳಿದರು.
"ತಮ್ಮದು ಜನರನ್ನು ಹಿಂಸಿಸುವ ವ್ಯಕ್ತಿಗಳ ಪರವಾಗಿ ನಿಂತ ಪಕ್ಷ ಎಂಬುದನ್ನು ಕಾಂಗ್ರೆಸ್ಸು ಈ ಮೂಲಕ ಸಾಬೀತುಪಡಿಸಿದೆ. ನಾವು ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಯಾತ್ರೆಯಲ್ಲಿ ಅಶೋಕ್ ಖೇಣಿ ಸೇರ್ಪಡೆಯ ವಿರುದ್ಧವೂ ಧ್ವನಿ ಎತ್ತುತ್ತೇವೆ" ಎಂದು ಅವರು ಹೇಳಿದರು.