ಇಂದು ಅನರ್ಹ ಶಾಸಕರ ನಾಮಪತ್ರ ಸಲ್ಲಿಕೆ: ಬಿಜೆಪಿಯಲ್ಲಿ ಅಸಮಾಧಾನದ ಹೊಗೆ
ಬೆಂಗಳೂರು, ನವೆಂಬರ್ 18: ಅನರ್ಹರಾಗಿದ್ದರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದು ಬಿಜೆಪಿ ಸೇರಿರುವ ಅನರ್ಹ ಶಾಸಕರ ಪೈಕಿ 13 ಶಾಸಕರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. 15 ಸ್ಥಾನಗಳಿಗೆ ಡಿ.5ರಂದು ಚುನಾವಣೆ ನಡೆಯಲಿದ್ದು, ಶಾಸಕರ ಅನರ್ಹತೆಯಿಂದ ತೆರವಾದ ಈ ಎಲ್ಲ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳಾಗಿ ಅನರ್ಹ ಶಾಸಕರು ಕಣಕ್ಕಿಳಿಯುತ್ತಿದ್ದಾರೆ.
ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾಗಿ ಅನರ್ಹತೆ ಶಿಕ್ಷೆ ಎದುರಿಸುತ್ತಿರುವ 17 ಶಾಸಕರ ಪೈಕಿ ಶಿವಾಜಿನಗರದ ಕ್ಷೇತ್ರದ ಅನರ್ಹ ಶಾಸಕ, ಕಾಂಗ್ರೆಸ್ನ ರೋಷನ್ ಬೇಗ್ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡಿಲ್ಲ. ಹಾಗೆಯೇ ಬಿಬಿಎಂಪಿ ಮಾಜಿ ಸದಸ್ಯ ಎಂ. ಶರವಣ ಅವರಿಗೆ ಟಿಕೆಟ್ ನೀಡಿದೆ.
ಅನರ್ಹ ಶಾಸಕರ ಪರವಾಗಿ ಮತ್ತೆ ಸ್ವಪಕ್ಷದವರ ವಿರುದ್ಧ ಮಾತಾಡಿದ ಯತ್ನಾಳ್
ಇನ್ನು ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಳಿಕ ಕಾಂಗ್ರೆಸ್ ಜತೆ ಪಕ್ಷವನ್ನು ವಿಲೀನಗೊಳಿಸಿದ್ದ ಆರ್. ಶಂಕರ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರೂ, ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಅವರ ಬದಲು ಅರುಣ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಎರಡು ಕ್ಷೇತ್ರ ಹೊರತುಪಡಿಸಿ 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಸೋಮವಾರ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಅಭ್ಯರ್ಥಿ ಪರ ಕೆಲಸ ಮಾಡಲು ಸೂಚನೆ
ಅನರ್ಹ ಶಾಸಕರನ್ನು ಪಕ್ಷದ ಅಭ್ಯರ್ಥಿಗಳೆಂಬುದನ್ನು ಗಮನಿಸಬೇಕು. ಅವರು ಈ ಹಿಂದೆ ತಮ್ಮ ಶತ್ರು ಪಕ್ಷದಲ್ಲಿದ್ದು, ಪಕ್ಷದ ನಾಯಕರು ಮತ್ತು ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದರೂ ಈಗ ಅಧಿಕೃತವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ. ಅವರು ಮತ್ತು ಅವರ ಬೆಂಬಲಿಗರೊಂದಿಗಿನ ಹಳೆಯ ವೈಮನಸ್ಯಗಳನ್ನು ಬಿಟ್ಟು ಪಕ್ಷ ನಿಷ್ಠೆಯಿಂದ ಅನರ್ಹ ಶಾಸಕರ ಪರ ಕೆಲಸ ಮಾಡಬೇಕು ಎಂದು ಬಿಜೆಪಿ ತನ್ನ ಬೆಂಬಲಿಗರಿಗೆ ಸೂಚಿಸಿದೆ.
ಕಾರ್ಯಕರ್ತರಲ್ಲಿ ಅಸಮಾಧಾನ
ಅನರ್ಹ ಶಾಸಕರು ಸ್ಪರ್ಧಿಸುತ್ತಿರುವ ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿಯೂ ಬಿಜೆಪಿಗೆ ತಟ್ಟಿದೆ. ಹೊಸಕೋಟೆ ಕ್ಷೇತ್ರದಲ್ಲಿ ಈಗಾಗಲೇ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಪ್ರಮುಖ ಮುಖಂಡರು ಮತ್ತು ಅವರ ಬೆಂಬಲಿಗರು, ನೇರ ಹಾಗೂ ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಪಕ್ಷ ನಿಷ್ಠೆಯ ಕಾರಣಕ್ಕೆ ಒಲ್ಲದ ಮನಸಿನಿಂದಲೇ ಅಭ್ಯರ್ಥಿಗಳ ಪರ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಾರ್ಯಕರ್ತರಲ್ಲಿಯೂ ಇದು ಬೇಸರವುಂಟುಮಾಡಿದೆ.
ಗೆಲ್ಲುವ ಮೊದಲೇ ಎಲ್ಲರಿಗೂ ಸಚಿವ ಸ್ಥಾನದ ಭರವಸೆ ನೀಡಿದ ಯಡಿಯೂರಪ್ಪ
ಕುಮಟಳ್ಳಿ ನಮ್ಮ ಅಭ್ಯರ್ಥಿಯಾಗಲಾರರು
ಬೆಳಗಾವಿಯ ಅಥಣಿಯಲ್ಲಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿರುವ ಕ್ರಮಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಂಬಲಿಗರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹೇಶ್ ಕುಮಟಳ್ಳಿ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪಕ್ಷದ ನಾಯಕರಿಗೆ ರವಾನಿಸಿದ್ದಾರೆ.
ಕುಮಟಳ್ಳಿ ವಿರುದ್ಧ ಪ್ರತಿಭಟನೆ
ಭಾನುವಾರ ಅಥಣಿಯಲ್ಲಿ ನಡೆದ ಉಪ ಚುನಾವಣೆ ಸಿದ್ಧತೆ ಕುರಿತ ಸಭೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ. ಮಹೇಶ್ ಕುಮಟಳ್ಳಿ ಅವರನ್ನು ನಮ್ಮ ಅಭ್ಯರ್ಥಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಒಂದು ದಿನ ಸಮಯವಿದೆ. ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದೆ ಹೋದರೆ ನಾವು ಬೃಹತ್ ಪ್ರತಿಭಟನೆ ನಡೆಸುತ್ತೇವೆ. ನಾವು ಮಹೇಶ್ ಕುಮಟಳ್ಳಿ ಅವರಿಗೆ ಯಾವ ಕಾರಣಕ್ಕೂ ಮತ ಹಾಕುವುದಿಲ್ಲ ಎಂದು ಬೆಳಗಾವಿಯ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಕಾರ್ಯಕರ್ತರು ಖಡಕ್ಕಾಗಿ ಹೇಳಿದ್ದಾರೆ.
17 ಅನರ್ಹ ಶಾಸಕರಲ್ಲಿ ಒಬ್ಬರಿಗೆ ಮಾತ್ರ ಬಿಜೆಪಿ ಬಾಗಿಲು ಬಂದ್: ಆಗ ಅನರ್ಹ, ಈಗ ಅತಂತ್ರ!
ನಾಮಪತ್ರ ಸಲ್ಲಿಸುವ ಅನರ್ಹ ಶಾಸಕರು
ಗೋಕಾಕ್-ರಮೆಶ್ ಜಾರಕಿಹೊಳಿ, ಅಥಣಿ-ಮಹೇಶ್ ಕುಮಟಳ್ಳಿ, ಹುಣಸೂರು-ಎಚ್ ವಿಶ್ವನಾಥ್, ಯಶವಂತಪುರ-ಎಸ್ ಟಿ ಸೋಮಶೇಖರ್, ಹೊಸಕೋಟೆ-ಎಂಟಿಬಿ ನಾಗರಾಜ್, ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ, ಕೆಆರ್ ಪುರ-ಬೈರತಿ ಬಸವರಾಜ್, ಕೆಆರ್ ಪೇಟೆ- ನಾರಾಯಣಗೌಡ, ಹಿರೇಕೆರೂರ- ಬಿ.ಸಿ.ಪಾಟೀಲ್ , ಚಿಕ್ಕಬಳ್ಳಾಪುರ-ಕೆ. ಸುಧಾಕರ್, ಯಲ್ಲಾಪುರ-ಶಿವರಾಮ ಹೆಬ್ಬಾರ್, ಕಾಗವಾಡ-ಶ್ರೀಮಂತ್ ಪಾಟೀಲ್, ವಿಜಯನಗರ-ಆನಂದ್ ಸಿಂಗ್