ಉಪ ಚುನಾವಣೆ; ಕಾಂಗ್ರೆಸ್, ಜೆಡಿಎಸ್ಗೆ ತಲಾ 1 ಸೀಟು!
ನವದೆಹಲಿ, ಡಿಸೆಂಬರ್ 8 : "15 ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನ ಪಡೆಯಲಿದೆ. ಬಿಜೆಪಿ 13 ಸ್ಥಾನಗಳಲ್ಲಿ ಜಯಗಳಿಸಲಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಭಾನುವಾರ ಬೆಂಗಳೂರಿನ ಯಲಹಂಕದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, "ನಾವು ನೆಮ್ಮದಿಯಿಂದ ಇದ್ದೇವೆ. ಗರಿಷ್ಟ ಅಂದರೆ ಕಾಂಗ್ರೆಸ್, ಜೆಡಿಎಸ್ ಒಂದೊಂದು ಸೀಟ್ ಗೆಲ್ಲಬಹುದು. ಉಳಿದ 13 ಸ್ಥಾನಗಳನ್ನು ಬಿಜೆಪಿಯೇ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಸಕೋಟೆ ಉಪ ಚುನಾವಣೆ; ಮತ ಎಣಿಕೆಗೆ ಸಕಲ ಸಿದ್ಧತೆ
"ಎಲ್ಲಾ ಕ್ಷೇತ್ರಗಳಲ್ಲಿಯೂ ನಾನು ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಎರಡು ಸಲ ಪ್ರಚಾರ ಮಾಡಿದ್ದೇವೆ. 25 ರಿಂದ 40 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ" ಎಂದು ಭವಿಷ್ಯ ನುಡಿದರು.
ಉಪ ಸಮರ ಫಲಿತಾಂಶದ ಬಗ್ಗೆ ಅನರ್ಹ ಶಾಸಕರಿಗೇಕೆ ಆತಂಕ?
"ನೂರಕ್ಕೆ ನೂರು 13 ಸೀಟು ಗೆಲ್ಲುತ್ತೇವೆ. ಮುಂದಿನ ಮೂರೂವರೆ ವರ್ಷ ಸ್ಥಿರ ಸರ್ಕಾರವನ್ನು ಕೊಡುತ್ತೇವೆ. ಪ್ರತಿಪಕ್ಷಗಳೂ ಸಹಕಾರ ಕೊಡುವಂತೆ ವಿನಂತಿ ಮಾಡುತ್ತೇನೆ" ಎಂದು ಯಡಿಯೂರಪ್ಪ ತಿಳಿಸಿದರು.
ಉಪ ಚುನಾವಣೋತ್ತರ ಸಮೀಕ್ಷೆ: ಯಾವ ಪಕ್ಷಕ್ಕೆ ಎಷ್ಟು ಸೀಟು?
ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, "ಫಲಿತಾಂಶ ಬಳಿಕ ಖಂಡಿತಾ ಬದಲಾವಣೆ ಆಗುತ್ತದೆ. ಆಡಳಿತ ಪಕ್ಷವಾಗಿ ನಾವು ಇರುತ್ತೇವೆ. ವಿಪಕ್ಷದಲ್ಲಿ ಕಾಂಗ್ರೆಸ್ ಇರುತ್ತದೆ" ಎಂದರು.
"ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚಿಸಲಿದೆ. ಅದಕ್ಕಾಗಿ ಈಗಿಂದಲೇ ನಾವು ಸಿದ್ಧತೆ ಆರಂಭಿಸಿದ್ದೇವೆ" ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಗುರುವಾರ ನಡೆದಿದ್ದು ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಡಿಸೆಂಬರ್ 9ರ ಸೋಮವಾರ ಮತಎಣಿಕೆ ನಡೆಯಲಿದೆ.