150+ ಲೆಕ್ಕಾಚಾರ: ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ!?
ಬೆಂಗಳೂರು, ಮೇ 7: ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ "ಹೋಟೆಲ್ ಪರಾಗ್"ನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಗೊಳ್ಳಲಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮಾಜಿ ಸಚಿವ, ಮಾಜಿ ಶಾಸಕರು!
ಬಿಜೆಪಿಯ ಬಗ್ಗೆ ಹಳ್ಳಿಯಿಂದ ರಾಜ್ಯದವರೆಗೆ ವಿಶ್ವಾಸ ಹೆಚ್ಚಾಗಿದೆ. ಹೀಗಾಗಿ ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದು, ಕಾಂಗ್ರೆಸ್ ಮನೆ ಖಾಲಿ ಆಗಲಿದೆ. ಮುಂದಿನ ದಿನಗಳು ನಮ್ಮದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳ ತನಿಖೆಗಿಲ್ಲ ಆದೇಶ
ಪಿಎಸ್ಐ ನೇಮಕಾತಿ ಹಗರಣದ ತನಿಖೆಗೆ ಕೂಡಲೇ ಆದೇಶಿಸಿದ ಮುಖ್ಯಮಂತ್ರಿಯವರು ಅಭಿನಂದನಾರ್ಹರು. ಆದರೆ ಈ ಹಿಂದಿನ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಈ ಕಾಳಜಿ ತೋರಿಸಿರಲಿಲ್ಲ. ಹತ್ತಾರು ಹಗರಣ ನಡೆದರೂ, ಅದರ ತನಿಖೆಗೆ ಆದೇಶಿಸಿರಲಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ಕೋಮು ಗಲಭೆಗಳು ನಡೆದಿದ್ದವು. ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಹಗರಣಗಳು ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿದ್ದವು. ಸಿಎಂ ಬೊಮ್ಮಾಯಿ ಪಾರದರ್ಶಕ ಮತ್ತು ಅಭಿವೃದ್ಧಿಪರ ಆಡಳಿತದಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದರು.
ದೇಶದಲ್ಲಿ ಮೋದಿ ಯುಗ ಆರಂಭವಾಗಿದ್ದು, ಪರಿವರ್ತನೆಯ ಯುಗವನ್ನು ಅವರು ಮುನ್ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಆಡಳಿತವನ್ನು ಮೆಚ್ಚಿಕೊಂಡು ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದಾರೆ. ರಾಜ್ಯಾಧ್ಯಕ್ಷನಾಗಿ ಅವರನ್ನು ಅಭಿನಂದಿಸಿ ಸ್ವಾಗತಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿಗೆ ಹೊಸ ಬಲ ಬಂದಿದೆ ಎಂದ ಸಿಎಂ ಬೊಮ್ಮಾಯಿ
ಪಂಚರಾಜ್ಯಗಳ ಚುನಾವಣೆಯ ಬಳಿಕ ನಮಗೆ ಹೊಸ ಶಕ್ತಿ ಬರುತ್ತಿದೆ. ವಿರೋಧ ಪಕ್ಷಗಳ ಅನೇಕರು ಬಿಜೆಪಿಯತ್ತ ಬಂದಿದ್ದರು. ಸಂಯಮ ವಹಿಸಿ, ಸಮಾಧಾನದಿಂದಿ ಇರಿ, ಮುಂದೆ ನಿರ್ಧಾರ ಮಾಡಿ ಎಂದು ಹೇಳಿ ಕಳುಹಿಸಿದ್ದೇನೆ. ವಿರೋಧ ಪಕ್ಷದಲ್ಲೂ ದೊಡ್ಡ ಬದಲಾವಣೆ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಭಾರತ ಮಾತೆಯ ಭೂಮಿಯಲ್ಲಿ ಆಳವಾಗಿ ಬೇರೂರಿನ ಹೆಮ್ಮರ. ಅದು ಕುಂಡದಲ್ಲಿರುವ ಗಿಡವಲ್ಲ. ಅದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಅದಕ್ಕಾಗಿ ನಮ್ಮ ಹಿರಿಯರು ಪರಿಶ್ರಮ ಪಟ್ಟಿದ್ದಾರೆ. 2023 ರಾಜ್ಯದಲ್ಲಿ ಮತ್ತು 2024ರಲ್ಲಿ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ದಕ್ಷಿಣ ಭಾಗದಲ್ಲೂ ಬಿಜೆಪಿ ಗಾಳಿ
ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪರ ಗಾಳಿ ಬೀಸುತ್ತಿದೆ. ರಾಜಕಾರಣ ಯಾವತ್ತಿಗೂ ನಿಂತ ನೀರಲ್ಲ. ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಪ್ರದೇಶವಿದು. ಹೀಗಾಗಿ ಪ್ರಗತಿ ಈ ಪ್ರದೇಶ ಹಲವು ಸಮಯದಿಂದ ಎರಡು ಪಕ್ಷಗಳನ್ನು ಬೆಂಬಲಿಸುತ್ತಿತ್ತು. ಈಗ ಆ ಪಕ್ಷಗಳ ಬಗ್ಗೆ ಎಲ್ಲ ವರ್ಗದ ಜನ ಭ್ರಮ ನಿರಸನಗೊಂಡಿದ್ದು, ಬಿಜೆಪಿಯನ್ನು ಬೆಂಬಲಿಸಲು ಮುಂದಾಗಿದ್ದಾರೆ ಎಂದು ಸಿಎಂ ತಿಳಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಯುವಜನತೆಯು ಬಿಜೆಪಿ ಸರ್ಕಾರ ಅಗತ್ಯ ಎಂದು ಭಾವಿಸುತ್ತಿದೆ. ವಿಶ್ವ ನಾಯಕತ್ವ ಹೊಂದಿದ ನರೇಂದ್ರ ಮೋದಿ ನೇತೃತ್ವ ಬಿಜೆಪಿಗಿದೆ. ದೇಶಾಭಿಮಾನ, ಅಭಿವೃದ್ಧಿ, ಸಾಮಾಜಿಕ ನ್ಯಾಯದ ರಾಜಕಾರಣವೇ ಮೋದಿ ಪರಿಕಲ್ಪನೆಯಾಗಿದೆ. ಟೀಕೆ ಮಾಡುವುದು ಸುಲಭ. ಆದರೆ ಪ್ರಧಾನಿ ಮೋದಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ದೇಶವನ್ನು ಮುನ್ನಡೆಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ್ ವೇಳೆ ಆರೋಗ್ಯ ಸುರಕ್ಷತೆ ಕೊಟ್ಟ ದೇಶ ಭಾರತ. ಭಾರತದ ನಾಯಕತ್ವವನ್ನು ತೋರಿಸಿ ಕೊಟ್ಟಿದ್ದಾರೆ. ಪ್ರತಿ ಮನೆಗೆ ನಳದ ನೀರು ಕೊಡುವ ಕೆಲಸ ನಡೆಯುತ್ತಿದೆ. ಜನರು ಕೇಂದ್ರ-ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ
2023ರಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. 150ಕ್ಕೂ ಹೆಚ್ಚು ಗುರಿಗೆ ಆನೆಬಲ ಬಂದಿದೆ. ಅನೇಕ ಮುಂದಾಳುಗಳು ಪಕ್ಷ ಸೇರಿದ್ದಾರೆ. ಇದು ಬಿಜೆಪಿ ಪರವಾದ ಬದಲಾವಣೆ ಪರ್ವವಾಗಿದೆ. ಇನ್ನೊಂದು ದಿಕ್ಕಿನಲ್ಲಿ ಕಾಂಗ್ರೆಸ್ಸಿನಲ್ಲಿ ಸಚಿವ ಸಂಪುಟದ ಸ್ಥಾನಮಾನಕ್ಕಾಗಿ ಜಗಳ ನಡೆದಿದೆ. ಆದರೆ, ಅವರ ಭ್ರಮೆ ಕೇವಲ ಭ್ರಮೆಯಾಗಿಯೇ ಉಳಿಯಲಿದೆ. ಕಾಂಗ್ರೆಸ್ ದೌರ್ಭಾಗ್ಯದ ಸರ್ಕಾರ ಬೇಡ ಎಂದು ಜನತೆ ನಿರ್ಧರಿಸಿದ್ದಾರೆ. ಸ್ವಾಭಿಮಾನ, ಸ್ವಾವಲಂಬನೆಯ ಸರ್ಕಾರ ಇಲ್ಲಿ ಮತ್ತೆ ಬಿಜೆಪಿ ಮೂಲಕ ಸ್ಥಾಪನೆ ಆಗಲಿದೆ ಎಂದರು.
ಈ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥ್ ಗೌಡ, ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ. ಕೃಷ್ಣಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ಮಂಡ್ಯ ಜಿಲ್ಲಾ ಮುಖಂಡ ಅಶೋಕ್ ಜಯರಾಮ್, ಮಾಜಿ ಐಆರ್ಎಸ್ ಅಧಿಕಾರಿ ಡಾ ಲಕ್ಷ್ಮೀ ಅಶ್ವಿನ್ಗೌಡ ಬಿಜೆಪಿ ಸೇರಿದರು. ರಾಜ್ಯದ ಸಚಿವರು, ಸಂಸದರು, ಜನಪ್ರತಿನಿಧಿಗಳು, ಪಕ್ಷದ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.