ಇಂದೇ ವಿಶ್ವಾಸಮತ ಯಾಚನೆಗೆ ಬಿಜೆಪಿ ಪಟ್ಟು, ಇಕ್ಕಟ್ಟಿನಲ್ಲಿ ಸ್ಪೀಕರ್
ಬೆಂಗಳೂರು, ಜುಲೈ 15: ಇಂದೇ ವಿಶ್ವಾಸಮತ ಯಾಚನೆಗೆ ಸಮಯ ಕೊಡಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬಿಜೆಪಿಯು ಇಂದು ಒತ್ತಾಯಿಸಿದೆ. ಸೋಮವಾರದ ಕಲಾಪ ಆರಂಭಕ್ಕೂ ಮುನ್ನವೇ ಸ್ಪೀಕರ್ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಅವರು ಈ ಬಗ್ಗೆ ಮನವಿ ಮಾಡಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ವಿಶ್ವಾಸಮತಕ್ಕಾಗಿ ಒತ್ತಾಯ ಮಾಡಲಿದ್ದಾರೆ. ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಇದ್ದ ಕಾರಣ ಬಹುತೇಕ ಶಾಂತರೀತಿಯಿಂದ ನಡೆದ ಕಲಾಪ ಇಂದು ಎರಡನೇ ದಿನ ರಣರಂಗವಾಗುವ ನಿರೀಕ್ಷೆ ಇದೆ.
ಕರ್ನಾಟಕ ರಾಜಕೀಯ LIVE: ರಕ್ಷಣೆ ನೀಡಿರೆಂದು ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತರು
ಆಡಳಿತ ಪಕ್ಷದ ಮೇಲೆ ಸವಾರಿ ನಡೆಸಲು ಬಿಜೆಪಿಯು ಸರ್ವ ಸನ್ನಧ್ಧವಾಗಿದೆ. ಯಡಿಯೂರಪ್ಪ ಅವರು ಬಿಜೆಪಿ ಮುಖಂಡರ ಸಭೆ ಕರೆದು ಸಲಹೆ, ಸೂಚನೆಗಳನ್ನು ನೀಡಿದ್ದು, ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಇಂದೇ ಮಾಡುವಂತೆ ಪಟ್ಟು ಹಿಡಿಯಬೇಕೆಂದು ಸೂಚನೆ ನೀಡಿದ್ದಾರೆ.
ಇನ್ನು ಕಾಂಗ್ರೆಸ್ ಸಹ ಬಿಜೆಪಿಗೆ ಪ್ರತಿಯಾಗಿ ರಣತಂತ್ರ ಹೆಣೆದುಕೊಂಡೇ ವಿಧಾನಸೌಧಕ್ಕೆ ಆಗಮಿಸಿದ್ದು, ಬಿಜೆಪಿಯ ಒತ್ತಾಡಕ್ಕೆ ಪ್ರತಿ ಒತ್ತಡದ ತಂತ್ರವನ್ನು ಹೇರಿ, ವಿಶ್ವಾಸಮತ ಯಾಚನೆ ಬುಧವಾರ ಸಮಯ ನಿಗದಿ ಪಡಿಸುವಂತೆ ಸ್ಪೀಕರ್ ಮೇಲೆ ಒತ್ತಡ ಹೇರಲು ಸರ್ವ ಸಜ್ಜಾಗಿದೆ.
ನಾಳೆ (ಮಂಗಳವಾರ) ಸುಪ್ರಿಂಕೋರ್ಟ್ನಲ್ಲಿ ಅತೃಪ್ತ ಶಾಸಕರ ಅರ್ಜಿಯು ವಿಚಾರಣೆಗೆ ಬರಲಿದ್ದು, ಸಂಜೆ ವೇಳೆಗೆ ಆದೇಶ ಹೊರಬೀಳಲಿದೆ. ಹಾಗಾಗಿ ಸುಪ್ರಿಂ ಕೋರ್ಟ್ ಆದೇಶ ಬಂದ ನಂತರ ರಾಜಕೀಯ ಚಿತ್ರಣ ಬದಲಾಗುವ ನಿರೀಕ್ಷೆ ಇರುವ ಕಾರಣ, ವಿಶ್ವಾಸಮತ ಯಾಚನೆಯನ್ನು ಮಂಗಳವಾರದ ನಂತರದ ದಿನ ಮಾಡಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ.
ಸೋಮವಾರವೇ ವಿಶ್ವಾಸಮತಯಾಚನೆಗೆ ಬಿಜೆಪಿ ಒತ್ತಡ
ಒಟ್ಟಿನಲ್ಲಿ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು ಮತ್ತೆ ಇಕ್ಕಟ್ಟಿನಲ್ಲಿ ಸಿಲುಕಿದ್ದು, ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಪಡಿಸುವುದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿರುವ ಕಾರಣ, ಅವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.