ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ
Recommended Video
ಬೆಂಗಳೂರು, ಜನವರಿ 14: ಕಾಂಗ್ರೆಸ್ನ ಮೂರು ಜನ ಶಾಸಕರು ಈಗಾಗಲೇ ಮುಂಬೈಗೆ ಹಾರಿದ್ದಾರೆ ಹಾಗೂ ಬಿಜೆಪಿ ಜೊತೆ ಕೈಮಿಲಿಸಲು ಅಣಿಯಾಗಿದ್ದಾರೆ. ಆದರೆ ಆ ಮೂವರು ಶಾಸಕರು ಇನ್ನಷ್ಟು ಶಾಸಕರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ ಎನ್ನಲಾಗಿದೆ.
ಒಟ್ಟು 15 ಜನ ಶಾಸಕರು ಬಿಜೆಪಿಗೆ ಹಾರಲಿದ್ದು, ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ 15 ಶಾಸಕರು ಯಾರ್ಯಾರು ಎಂಬ ಮಾಹಿತಿ ಪೂರ್ಣವಾಗಿಲ್ಲ ಆದರೆ. ಕೆಲವು ಶಾಸಕರ ಮೇಲೆ ಸ್ವತಃ ಕೆಪಿಸಿಸಿ ಮತ್ತು ಮಾಧ್ಯಮಗಳು ಗುಮಾನಿ ವ್ಯಕ್ತಪಡಿಸಿವೆ.
ಈ ಪಹಾ ನಗೆತೆದ ಹಿಂದೆ ರಮೇಶ್ ಜಾರಕಿಹೊಳಿ ಅವರಿದ್ದಾರೆ ಎಂಬುದನ್ನು ಬೆಳಿಗ್ಗೆಯಷ್ಟೆ ಡಿ.ಕೆ.ಶಿವಕುಮಾರ್ ಅವರು ಸೂಚ್ಯವಾಗಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ತಮ್ಮ ಇಬ್ಬರು ಬೆಂಬಲಿಗ ಶಾಸಕರೊಡನೆ ಮುಂಬೈನಲ್ಲಿ ತಂಗಿದ್ದಾರೆ ಎನ್ನಲಾಗಿದ್ದು, ಇಂದು ಅಥವಾ ನಾಳೆ ಅವರು ಅಮಿತ್ ಶಾ ಅವರನ್ನು ಭೇಟಿ ಆಗಲಿದ್ದಾರೆ.
ರಮೇಶ್ ಜಾರಕಿಹೊಳಿಯಿಂದ ಶಾಸಕರ ಸೆಳೆವ ಯತ್ನ
ಜಾರಕಿಹೊಳಿ ಅವರು, ತಮ್ಮ ಭಾಗದ ಇನ್ನೂ ಕೆಲವು ಶಾಸಕರನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಕೆಪಿಸಿಸಿ ಆತಂಕಗೊಂಡಿದೆ. ರಮೇಶ್ ಜಾರಕಿಹೊಳಿ ಜೊತೆ ಶ್ರೀಮಂತ್ ಪಾಟೀಲ್, ಮಹೇಶ್ ಕುಮಟಹಳ್ಳಿ ಅವರು ಈಗಾಗಲೇ ಮುಂಬೈನಲ್ಲಿದ್ದಾರೆ ಎನ್ನಲಾಗಿದೆ.
ಬಿಜೆಪಿ 9 ಶಾಸಕರು ಬೇಕು
ಬಿಜೆಪಿಯು ಪ್ರಸ್ತುತ 104 ಶಾಸಕರನ್ನು ಹೊಂದಿದೆ. ಸರ್ಕಾರ ರಚಿಸಲು ಅದಕ್ಕೆ ಕನಿಷ್ಟ 9 ಶಾಸಕರ ಬಲ ಬೇಕಿದೆ. ಕೆಲವು ಸುದ್ದಿಮೂಲಗಳ ಪ್ರಕಾರ ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ನ 15 ಶಾಸಕರನ್ನು ಸಂಪರ್ಕ ಮಾಡಿದೆ ಎನ್ನಲಾಗಿದೆ. ಅಷ್ಟರಲ್ಲಿ ಎಷ್ಟು ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಯಾರು ಆ 15 ಶಾಸಕರು?
ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್, ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ರಾಯಚೂರ ಗ್ರಾಮೀಣಾ ಶಾಸಕ ಬಸವನಗೌಡ ದದ್ದೂರ್, ಹಿರೇಕೆರೂರಿನ ಬಿ.ಸಿ.ಪಾಟೀಲ್, ಚಿಂಚೋಳಿಯ ಉಮೇಶ್ ಜಾದವ್, ವಿಜಯನಗರದ ಆನಂದ್ ಸಿಂಗ್, ಕಂಪ್ಲಿಯ ಗಣೇಶ್, ನಾಗಾಠಾಣದ ದೇವೇಂದ್ರ ಚೌಹಾಣ್, ಕುಷ್ಟಗಿಯ ಅಮರೇಗೌಡ ಬೈಯ್ಯಾಪುರ, ರಾಣಿಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್, ಮುಳಬಾಗಿಲಿನ ಎಚ್.ನಾಗೇಶ್, ಟಿ.ನರಸೀಪುರದ ಅಶ್ವಿನ್ಕುಮಾರ್.ಎಂ ಶಾಸಕರಿಗೆ ಬಿಜೆಪಿ ಬಲೆ ಬೀಸಿದೆ. ಮೂರು ಶಾಸಕರು ಈಗಾಗಲೇ ಮುಂಬೈನಲ್ಲಿದ್ದಾರೆ.
ಕೆಪಿಸಿಸಿಯಿಂದ ಪ್ರತಿ ತಂತ್ರ
ಕಾಂಗ್ರೆಸ್ನ ಮೂವರು ಶಾಸಕರು ಮುಂಬೈನಲ್ಲಿ ಜಾಂಡಾ ಊರಿದ ಕೂಡಲೇ ಎಚ್ಚೆತ್ತುಕೊಂಡ ಕೆಪಿಸಿಸಿ ಇಂದು ಬೆಳಿಗ್ಗೆ ತುರ್ತು ಸಭೆ ನಡೆಸಿ. ಪಕ್ಷ ಬಿಡಲು ತಯಾರಾಗಿರುವ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿದೆ ಎನ್ನಲಾಗಿದೆ. ಬಿಜೆಪಿಯು ಸಂಪರ್ಕಿಸಿದ್ದ ಶಾಸಕರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸಂಪರ್ಕಿಸಿ ಮಾತನಾಡಿ ಮನವೊಲಿಸುವ ಯತ್ನ ಮಾಡಿದ್ದಾರೆ.