ಸರ್ಕಾರ ರಚನೆಗೆ ಬಿಜೆಪಿ ಏನೆಲ್ಲಾ ಮಾಡಿತು, ಸೋತಿತು!
ಬೆಂಗಳೂರು, ಮೇ 19 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮೊದಲೇ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಣೆ ಮಾಡಿದರು. ಇದರಿಂದಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕನಸಿಗೆ ಹಿನ್ನಡೆ ಉಂಟಾಗಿದೆ.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಗಳಿಸಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಹೊಂದಿತ್ತು. ಆದರೆ, ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕಿದ್ದು 104 ಸ್ಥಾನಗಳು ಮಾತ್ರ.
ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!
ಬಹುಮತ ಇಲ್ಲದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಮೂರು ದಿನದಲ್ಲಿ ಬಿಜೆಪಿ ಸರ್ಕಾರ ಬಹುಮತ ಕೊರತೆಯ ಕಾರಣ ಪತನಗೊಂಡಿತು.
ಸಂಭಾವ್ಯ : ಕೈ-ತೆನೆ ಮೈತ್ರಿ ಸರ್ಕಾರದಲ್ಲಿ ಸಚಿವರು ಹಾಗೂ ಖಾತೆಗಳು
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಿತು. ಆದರೆ, ಎಲ್ಲಾ ತಂತ್ರಗಳು ವಿಫಲವಾದವು. ಈ ಮೂಲಕ 2019ರ ಲೋಕಸಭೆ ಚುನಾವಣೆಗೂ ಮುನ್ನ ದಕ್ಷಿಣ ಭಾರತದಲ್ಲಿ ಪಕ್ಷದ ಧ್ವಜ ಹಾರಿಸುವ ಬಿಜೆಪಿಯ ಕನಸು ಈಡೇರಲಿಲ್ಲ.
ಬಹುಮತವಿಲ್ಲದಿದ್ದರೂ ಸರ್ಕಾರ
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಬಿಜೆಪಿ 104 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಹುಮತ ಸಿಕ್ಕಿರಲಿಲ್ಲ.
ಬಹುಮತ ದೊರೆಯದಿದ್ದರೂ ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಯಿತು. ಮೇ 17ರ ಗುರುವಾರ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಬಹುಮತವಿಲ್ಲದ ಕಾರಣ ಮೇ 19ರಂದು ಸರ್ಕಾರ ಪತನಗೊಂಡಿದೆ.
ರಾಜ್ಯಪಾಲರಿಂದ ಆಹ್ವಾನ
ಬಿಜೆಪಿ 104 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು 117 ಸದಸ್ಯ ಬಲವಿದೆ ನಮಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದವು.
ಆದರೆ, ಬಿಜೆಪಿ ರಾಜ್ಯಪಾಲ ವಜುಭಾಯಿ ಅವರ ಮೂಲಕ ಸರ್ಕಾರ ರಚನೆ ಮಾಡಲು ಪಕ್ಷಕ್ಕೆ ಮೊದಲು ಅವಕಾಶ ಸಿಗುವಂತೆ ಮಾಡಿಕೊಂಡರು. ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದರು. ಆದರೆ, ಕಾಂಗ್ರೆಸ್-ಜೆಡಿಎಸ್ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದವು.
ವಿಮಾನ ಹಾರಾಟಕ್ಕೆ ತಡೆ
ಬಹುಮತ ಸಾಬೀತು ಮಾಡಲು ಬಿಜೆಪಿ ಶಾಸಕರ ಖರೀದಿಗೆ ಮುಂದಾಯಿತು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ ಸೇರಿದರು. ಶಾಸಕರು ಕೇರಳದ ಕೊಚ್ಚಿಗೆ ತೆರಳಲು ಮುಂದಾಗಿದ್ದರು. ಆದರೆ, ವಿಶೇಷ ವಿಮಾನದ ಹಾರಾಟಕ್ಕೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರದ ಮೂಲಕ ಬಿಜೆಪಿ ಒತ್ತಡ ಹಾಕಿಸಿತು.
ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನ, ಹಣದ ಆಮಿಷವೊಡ್ಡಿ ಬಿಜೆಪಿ ಪರವಾಗಿ ಮತ ಚಲಾವಣೆ ಮಾಡುವಂತೆ ಒತ್ತಾಯ ಹೇರಿತು. ಆದರೆ, ಯಾವ ತಂತ್ರವೂ ಫಲಿಸದೇ ಸರ್ಕಾರ ಪತನಗೊಂಡಿತು.
ಸ್ಪೀಕರ್ ಕೆ.ಜಿ.ಬೋಪಯ್ಯ ನೇಮಕ
ಸುಪ್ರೀಂಕೋರ್ಟ್ ಶುಕ್ರವಾರ ಮೇ 19ರಂದು ಬಿಜೆಪಿ ಬಹುಮತ ಸಾಬೀತು ಮಾಡಬೇಕು ಎಂದು ಆದೇಶ ನೀಡಿತು. ಬಹುಮತ ಸಾಬೀತು ಮಾಡಲು ಯಾವುದೇ ಪಕ್ಷಕ್ಕೂ ಸಮಯಾವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಇದಕ್ಕಾಗಿ ತಂತ್ರ ರೂಪಿಸಿದ ಬಿಜೆಪಿ ಹೆಚ್ಚು ಸಲ ಗೆದ್ದ ಸದಸ್ಯರಿದ್ದರೂ ಕೆ.ಜೆ.ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿತು. ಆದರೆ, ಕಾಂಗ್ರೆಸ್ ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿತು.