ರಾಜ್ಯದಲ್ಲಿ ಈಗ ಚುನಾವಣೆ ಘೋಷಣೆಯಾದರೆ ಬಿಜೆಪಿ ಎಷ್ಟು ಸೀಟು ಗೆಲ್ಲುತ್ತೆ!
ಬೆಂಗಳೂರು, ಜೂ. 27: ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನು ಹತ್ತು ತಿಂಗಳು ಬಾಕಿಯಿದೆ. ಇದೇ ರೀತಿಯ ಪರಿಸ್ಥಿತಿ ಇದ್ದರೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 70 ರಿಂದ 80 ಸೀಟು ಗೆಲ್ಲುವುದು ಕಷ್ಟ.!
ಬಿಜೆಪಿ ಕೇಂದ್ರ ವರಿಷ್ಠರು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಇಂತಹ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಮತ್ತೆರಡು ಸಮೀಕ್ಷೆ ನಡೆಸಿದ್ದು, ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಚುನಾವಣೆ ಗೆಲ್ಲುವ ಅನುಕೂಲಕರ ವಾತಾವರಣವೇ ಇಲ್ಲ ಎಂಬ ಸತ್ಯ ಗೊತ್ತಾಗಿ ಬಿಜೆಪಿ ವರಿಷ್ಠರ ನಾಯಕರ ಚಿಂತೆಗೆ ಕಾರಣವಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಗೆಲ್ಲಬೇಕು. ಈ ಮೂಲಕ ಸ್ವತಂತ್ರ್ಯವಾಗಿ ಪಕ್ಷ ಅಧಿಕಾರಕ್ಕೆ ಬರಬೇಕು. ಆಪರೇಷನ್ ಕಮಲ, ಇಲ್ಲವೇ ಅನ್ಯ ಪಕ್ಷಗಳ ಮೈತ್ರಿ ಜತೆ ಸರ್ಕಾರ ರಚನೆ ಮಾಡುವ ಉಸಾಬರಿಯೇ ಬೇಡ. ಈ ನಿಟ್ಟಿನಲ್ಲಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ಆದರೆ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಅಸಲಿ ಚಿತ್ರಣವೇ ಬೇರೆಯದ್ದು ಅಗಿದೆ.
ಮೋದಿ,ಷಾ ಬಂದರೂ ಉಪಯೋಗವಾಗಿಲ್ಲ
ರಾಜ್ಯದಲ್ಲಿ ಅಡಳಿತ ರೂಢ ಬಿಜೆಪಿ ಸರ್ಕಾರದ ಬಗ್ಗೆ ಜನರು ಒಲವು ತೋರುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬುದರ ಬಗ್ಗೆ ಕೇಂದ್ರ ವರಿಷ್ಠರು ಸಮೀಕ್ಷೆ ನಡೆಸಿದ್ದಾರೆ. ರಾಜ್ಯ ಬಿಜೆಪಿ, ಖಾಸಗಿ ಎಜೆನ್ಸಿ ಹಾಗೂ ಅಮಿತ್ ಶಾ ಕಡೆಯಿಂದ ಸಮೀಕ್ಷೆ ನಡೆಸಿದೆ. ಮೂರು ಸಮೀಕ್ಷೆಗಳ ಫಲಿತಾಂಶ ಹೋಲಿಕೆ ಮಾಡಿದರೂ ಬಿಜೆಪಿ- ಕಾಂಗ್ರೆಸ್ ಸಮಬಲ ಕಂಡು ಬರುತ್ತಿದ್ದು, ಜೆಡಿಎಸ್ ಕೂಡ ಗಣನೀಯ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ. ಈ ಪರಿಸ್ಥಿತಿ ನೋಡಿದ್ರೆ ಕಾಂಗ್ರೆಸ್ - ಬಿಜೆಪಿ ಸಮಬಲ ಸಾಧಿಸಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ವಿಧಾಸಭೆ ಚುನಾವಣೆಯಲ್ಲಿ ಆಡಳಿತ ರೂಢ ಬಿಜೆಪಿಗೆ ಹಿನ್ನಡೆಯಾಗುವುದು ಬಹುತೇಕ ಖಚಿತ ಎಂಬ ಸತ್ಯ ಕೇಂದ್ರ ವರಿಷ್ಠರಿಗೆ ಗೊತ್ತಾಗಿದೆ.
ಸಮನ್ವಯ ಸಾಧಿಸಲು ಕರೆ :
ಬಿಜೆಪಿ ಪಕ್ಷದ ವಿವಿಧ ಘಟಕಗಳಲ್ಲಿ ಸಮನ್ವಯ ಸಾಧಿಸಿಲ್ಲ. ಎಸ್. ಸಿ ಮೋರ್ಚಾ, ರೈತ ಮೋರ್ಚಾ ಸೇರಿದಂತೆ ಬಿಜೆಪಿಯ ಎಲ್ಲಾ ಮೋರ್ಚಾ ಗಳ ನಡುವೆ ಸಮನ್ವಯ ಸಾಧಿಸಲು ಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಟನೆ ಕೊರತೆ ನೀಗಿಸಲು ಬಿಜೆಪಿ ಹಿರಿಯ ನಾಯಕರು ಪ್ಲಾನ್ ರೂಪಿಸಿದ್ದಾರೆ.
ಯಡಿಯೂರಪ್ಪ ಅವರೇ ಪ್ರಭಾವಿ ನಾಯಕ
ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಬಿಜಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ಅವರೇ ಪ್ರಭಾವಿ ನಾಯಕರಾಗಿ ಉಳಿದುಕೊಂಡಿದ್ದಾರೆ. ಬಿಎಸ್ವೈ ಅವರಿಗೆ ದೆಹಲಿಯಲ್ಲಿ ಪಕ್ಷದ ಪ್ರಮುಖ ಹುದ್ದೆ ನೀಡಿ ಆಗಿದೆ. ಬಲವಂತವಾಗಿ ಸಿಎಂ ಖುರ್ಚಿಯಿಂದ ಇಳಿಸಿದ್ಧರಿಂದ ಮನನೊಂದಿರುವ ಯಡಿಯೂರಪ್ಪ ರಾಜ್ಯ ನಾಯಕರಿಂದ ಅಂತರ ಕಾಪಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಮತ್ತು ಯಡಿಯೂರಪ್ಪ ನಡುವೆ ಸಮನ್ವಯತೆ ಇಲ್ಲ. ಇದು ಕೂಡ ಪಕ್ಷದ ಮೇಲೆ ತುಂಬಾ ಪರಿಣಾಮ ಬೀರಿದೆ. ಬಿಜೆಪಿಯ ವರ್ಚಸ್ಸು ವೃದ್ಧಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ಮಾತ್ರವಲ್ಲ ಆಡಳಿತ ರೂಢ ಸಿಂ ಅವರ ಕಾರ್ಯಶೈಲಿ ಕೂಡ ಪಕ್ಷಕ್ಕೆ ಯಾವುದೇ ವರ್ಚಸ್ಸು ತಂದುಕೊಟ್ಟಿಲ್ಲ.
ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚಾಗಿಲ್ಲ
ಇದರೊಂದಿಗೆ ಬಿಜೆಪಿಯೊಳಗಿನ ಆಂತರಿಕ ಭಿನ್ನಮತಗಳು. ಹೀಗಾಗಿ ಬಿಜೆಪಿ ಕೇಂದ್ರ ವರಿಷ್ಠರು ಹೊಸ ಪ್ಲಾನ್ ರೂಪಿಸುವ ತಂತ್ರದಲ್ಲಿ ಮುಳಗಿದ್ದಾರೆ. ಕರ್ನಾಟಕದಲ್ಲಿ 150 ಸೀಟು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿ ಕೊನೆ ಅವಧಿಯಲ್ಲಿ ಏನೆಲ್ಲಾ ಆಟ ಆಡುತ್ತೋ ಕಾದು ನೋಡಬೇಕು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ಬಂದು ಹೋಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅನೇಕಸಲ ಬಂದು ಹೋಗಿದ್ದಾರೆ. ಇಷ್ಟಾಗಿಯೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚಾಗಿಲ್ಲ. ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದು ಅಸಾಧ್ಯವಾದ ಮಾತು. ಹೀಗಾಗಿ ಬಿಜೆಪಿ ಕೇಂದ್ರ ವರಿಷ್ಠರು ಹೊಸ ಕಾರ್ಯತಂತ್ರ ರೂಪಿಸುವತ್ತ ಹೆಜ್ಜೆ ಇಟ್ಟಿದ್ದಾರೆ.