ರೈತರ ಸಾಲಮನ್ನಾ, ಕುಸಿದ ಮಾವಿನ ದರ : ಕಾವೇರಲಿದೆ ಅಧಿವೇಶನ
ಬೆಂಗಳೂರು, ಜು.9: ರೈತರ ಸಾಲಮನ್ನಾ, ಕುಸಿದ ಮಾವು ಬೆಲೆ, ಬಸ್ ಪಾಸ್ ಸಮಸ್ಯೆ ವಿಚಾರವಾಗಿ ಪ್ರತಿಭಟನೆ ಭುಗಿಲೆದ್ದಿದೆ. ಒಂದೆಡೆ ಬಸ್ಪಾಸ್ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರೆ, ಇನ್ನೊಂದೆಡೆ ಮಾವು ಬೆಲೆ ಕ್ವಿಂಟಾಲ್ಗೆ ಕೇವಲ 2 ಸಾವಿರ ರುಪಾಯಿ ದರ ನಿಗದಿಗೆ ಒತ್ತಾಯಿಸಿ ಹಿನ್ನೆಲೆಯಲ್ಲಿ ರಸ್ತೆಗೆ ಮಾವುಗಳನ್ನು ಸುರಿದು ರೈತರು ಪ್ರತಿಭಟಿಸುತ್ತಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಸಿದ್ಧವಾಗುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸರ್ಕಾರವನ್ನು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಮುಜುಗರಕ್ಕೀಡು ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ.
ಕರ್ನಾಟಕ ಬಜೆಟ್: ಪ್ರತಿ ರೈತರ ಕುಟುಂಬದ 2 ಲಕ್ಷದವರೆಗಿನ ಸಾಲ ಮನ್ನಾ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದ ಮೊದಲ ವಾರ ಈಗಾಗಲೇ ಮುಗಿದಿದ್ದು, ರಾಜ್ಯಪಾಲರ ಭಾಷಣ, ಅದರ ಮೇಲಿನ ಚರ್ಚೆ ಹಾಗೂ ಬಜೆಟ್ ಮಂಡನೆಯಲ್ಲಿ ಕಳೆದು ಹೋಗಿದೆ. ಜುಲೈ 9ರ ಸೋಮವಾರದಿಂದ ಐದು ದಿನಗಳ ಕಾಲ ಎರಡನೇ ವಾರದ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ತಯಾರಾಗಿದ್ದು, ಸದನ ಕಾವೇರುವ ಲಕ್ಷಣಗಳಿವೆ.
ಪ್ರಮುಖವಾಗಿ ತುಮಕೂರಿನಲ್ಲಿ ಶನಿವಾರ ಉಚಿತ ಬಸ್ ಪಾಸ್ ವಿತರಣೆ ಕುರಿತಂತೆ ಬಜೆಟ್ನಲ್ಲಿ ಯಾವುದೇ ಘೋಷಣೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಪ್ರಕರಣವನ್ನು ಬಿಜೆಪಿ ಸೋಮವಾರ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಹಿಂದಿನ ಸಿದ್ದರಾಮಯ್ಯ ಸರ್ಕಾರ ಪ್ರಾಥಮಿಕ ಹಂತದಿಂದ ಪಿಯು ಹಂತದವರೆಗೆ ಎಲ್ಲ ಜಾತಿ ಜನಾಂಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವುದಾಗಿ ಘೋಷಿಸಿತ್ತು. ಆದರೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲಲ್ಲೇ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಎಲ್ಲ ಜಾತಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಾಧ್ಯವಿಲ್ಲ ಎಂದಿದ್ದರು.
ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರಿಂದ ಸಿಎಂ ಕುಮಾರಸ್ವಾಮಿ ಬಜೆಟ್ನಲ್ಲಿ ಈ ಬಗ್ಗೆ ಪ್ರಕಟಿಸಲಾಗುವುದು ಎಂದು ಸಮಾಧಾನಪಡಿಸಿದ್ದರು. ಆದರೆ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ತುಮಕೂರಿನಲ್ಲಿ ಧರಣಿ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇನ್ನೊಂದೆಡೆ ಸ್ಪೀಕರ್ ರಮೇಶ್ಕುಮಾರ್ ಅವರ ಸ್ವಕ್ಷೇತ್ರ ಶ್ರೀನಿವಾಸಪುರದಲ್ಲಿ ಸೋಮವಾರ ಮಾವು ಬೆಳೆಗಾರರು ಬಂದ್ ಕರೆ ನೀಡಿರುವುದು ಕೂಡ ಸರ್ಕಾರಕ್ಕೆ ತಲೆನೋವಾಗಲಿದೆ. ಕೇಂದ್ರ ಸರ್ಕಾರ ಮಾವು ಬೆಳೆಯುವ ಜಿಲ್ಲೆಗಳಿಗೆ ಮಾವುಗಳ ವೈಜ್ಞಾನಿಕ ಶೇಖರಣೆಗೆಂದೇ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೂ ರಾಮನಗರ ಹಾಗೂ ಕೋಲಾರದಂತಹ ಮಾವು ಬೆಳೆಗಾರರ ಜಿಲ್ಲೆಗಳಲ್ಲಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಐದು-ಹತ್ತು ರೂಪಾಯಿಗೆ ಕೆಜಿ ಮಾವು ಮಾರಾಟ ಮಾಡುವ ದರ ಕುಸಿತದಿಂದ ತತ್ತರಿಸಿರುವ ಮಾವು ಬೆಳೆಗಾರರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಇದಲ್ಲದೇ 28 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾವ ಮತ್ತು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆ ಆರಂಭಿಸುವ ಸರ್ಕಾರದ ಬಜೆಟ್ ಪ್ರಸ್ತಾವಕ್ಕೆ ಈಗಾಗಲೇ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಪಕ್ಷ ಬಿಜೆಪಿ ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಕಿವಿ ಹಿಂಡಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯಪಾಲರ ಭಾಷಣ: ಇಂದು ಎಚ್ಡಿಕೆ ಉತ್ತರ: ಸೋಮವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿ, ಅಂಗೀಕಾರ ನಿರ್ಣಯ ಮಂಡಿಸಲಿದ್ದಾರೆ. ಅದಾದ ಬಳಿಕ ಪ್ರಶ್ನೋತ್ತರ ಕಾರ್ಯಕಲಾಪ ನಡೆಯಲಿದೆ. ನಂತರ ಬಜೆಟ್ ಮೇಲಿನ ಚರ್ಚೆ ಆರಂಭಗೊಳ್ಳಲಿದೆ.
ವಿಧಾನ ಪರಿಷತ್ ಕೂಡ ಬೆಳಗ್ಗೆ 10.30ಕ್ಕೆ ಸಮಾವೇಶಗೊಳ್ಳಲಿದ್ದು, ಮೊದಲು ಪ್ರಶ್ನೋತ್ತರ ಕಲಾಪ ನಡೆಯಲಿದೆ. ನಂತರ ಸಿಎಂ ಕುಮಾರಸ್ವಾಮಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವರು.