ಉಡುಪಿ-ಚಿಕ್ಕಮಗಳೂರಿಗೆ ಯಾರೆಂದು ಬಲ್ಲಿರಿ?
ಒಂದೆಡೆ ಕರಾವಳಿ, ಒಂದೆಡೆ ಮಲೆನಾಡು ಮತ್ತೊಂದಿಷ್ಟು ಬಯಲು ಸೀಮೆಯ ಸ್ಪರ್ಶ... ಇದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ಥೂಲ ಭೌಗೋಳಿಕ ಚಿತ್ರಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಕುರಿತು ಕಾಂಗ್ರೆಸೇತರ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ. ಕಾಂಗ್ರೆಸ್ನಿಂದ ಕಣಕ್ಕಿಳಿಯುವವರು ಹಾಲಿ ಸಂಸದ ಜಯಪ್ರಕಾಶ ಹೆಗ್ಡೆ. ಈ ವಿಚಾರದಲ್ಲಿ ಯಾವುದೇ ವಿವಾದಗಳಿಲ್ಲ.
ಆದರೆ, ಕಾಂಗ್ರೆಸ್ನ ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿಯಿಂದ ಯಾರು ಸ್ಪರ್ಧಿಸ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ! ಸದ್ಯದ ಮಾಹಿತಿಯಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಸೆಗೆ ಬೈ ಹೇಳಲು ಡಿ.ವಿ. ಸದಾನಂದಗೌಡರು ನಿರ್ಧರಿಸಿದ್ದಾರೆ. ಉಡುಪಿ-ಚಿಕ್ಕಮಗಳೂರಿಗೆ ಅವರೇ ಅಭ್ಯರ್ಥಿಯಂತೆ. ಹಾಗಾಗಿ ಸದ್ಯಕ್ಕೆ ಗೌಡರನ್ನು ಬೆಂಗಳೂರು ಉತ್ತರದಿಂದ ಓಡಿಸುವಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಯಶಸ್ವಿಯಾಗಿದ್ದಾರೆ, ಎನ್ನಬಹುದು.
ಆರಂಭದಲ್ಲಿ ಬಿಜೆಪಿಯಿಂದ ಕೇಳಿ ಬರುತ್ತಿದ್ದ ಹೆಸರು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರದು. ಆದರೆ, ಅವರು ಯಾವತ್ತು ಬೆಂಗಳೂರು ಉತ್ತರದ ಆಕಾಂಕ್ಷಿಯಾದರೋ ಅಲ್ಲಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೆಕ್ಕಾಚಾರ ಬದಲಾಯಿತು. ತದನಂತರದಲ್ಲಿ ಕೇಳಿಬಂದ ಹೆಸರುಗಳ ಪಟ್ಟಿ ಖಂಡಿತವಾಗಿಯೂ ಅಚ್ಚರಿ ಮೂಡಿಸುವಂತದ್ದು. ಅದು ಹಾಲಿ ಶಾಸಕರಾದ ಸುನಿಲ್ ಕುಮಾರ್ ಮತ್ತು ಸಿ.ಟಿ. ರವಿ ಹೆಸರು. [ಮಾಜಿ ಸಿಎಂ ದೊಡ್ಡವ್ರಾ, ಡಿಸಿಎಂ ದೊಡ್ಡವ್ರಾ?]
ನಡುವೆ ತೇಲಿ ಬಂದ ಹೆಸರುಗಳೆಂದರೆ, ಪತ್ರಕರ್ತ ಪ್ರತಾಪ ಸಿಂಹ, ಚಕ್ರವರ್ತಿ ಸೂಲಿಬೆಲೆ. ಇದರ ನಡುವೆ ಬಿಜೆಪಿ ಪಡಸಾಲೆಯಿಂದಲೇ ಕೇಳಿ ಬಂದ ಇನ್ನೊಂದು ಹೆಸರು ಬಂಜಾರ ಪ್ರಕಾಶ್ ಶೆಟ್ಟಿ. ಇನ್ನೊಂದು ವಾರದಲ್ಲಿ ಸುಮಾರು 6 ಮಂದಿಯ ಹೆಸರು ಅಂತಿಮಗೊಳ್ಳಲಿದೆ ಎಂದು ದೆಹಲಿಯಲ್ಲಿ ಬಿಜೆಪಿ ನಾಯಕರು ಪ್ರಕಟಿಸುತ್ತಿದ್ದಂತೆ, ಈಗ ಉಡುಪಿ- ಚಿಕ್ಕಮಗಳೂರು ಬಿಜೆಪಿ ಆಕಾಂಕ್ಷಿಗಳ ಪಟ್ಟಿಗೆ ಕಾಪುವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಸೇರುವ ಸುಳಿವು ನೀಡಿದ್ದಾರೆ.
ಒಟ್ಟಾರೆ, ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೆ ಸ್ವಲ್ಪ ಮಟ್ಟಿಗೆ ಗೊಂದಲ ಮತ್ತು ಭಾರೀ ಲೆಕ್ಕಾಚಾರ ಶುರುವಾಗಿದೆ. ತಮ್ಮ ಪತ್ನಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವುದಾದರೆ ಮಾತ್ರ ಲೋಕಸಭೆಗೆ ಸ್ಪರ್ಧಿಸುತ್ತೇನೆ ಎಂದು ಸಿ.ಟಿ. ರವಿ ಕಂಡೀಶನ್ ಹಾಕಿದ್ದಾರೆ ಎಂಬುದು ಇನ್ನೊಂದು ಗಾಸಿಪ್. ಈಗ ಡಿ.ವಿ. ಹೆಸರು ಬಹುತೇಕ ಅಂತಿಮವಾಗಿರುವುದರಿಂದ ಸಿ.ಟಿ.ರವಿ ಶಾಸಕರಾಗಿಯೇ ಮುಂದುವರಿಯುವುದು ಖಚಿತ. [ಲೋಕಸಭೆ ಕಣಕ್ಕೆ ಸಿಟಿ ರವಿ]
ಇನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ತೆನೆ ಹೊರುವವರು ಯಾರು? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಕಳೆದ ಬಾರಿ ಕಣಕ್ಕಿಳಿದಿದ್ದ ಭೋಜೇಗೌಡರು ಮತ್ತೆ ಅದೃಷ್ಟಪರೀಕ್ಷೆಗೆ ಇಳಿಯುವ ಆಸಕ್ತಿ ಹೊಂದಿಲ್ಲ. ಹಾಗಾಗಿಯೇ ಮಾಜಿ ಕಾಂಗ್ರೆಸಿಗ ಪ್ರಸ್ತುತ ಜೆಡಿಎಸ್ನಲ್ಲಿರುವ ವಸಂತ ಸಾಲಿಯಾನ್ ಅಭ್ಯರ್ಥಿಯಾಗ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ. ಸಾಲಿಯಾನ್ ಅಥವಾ ಇನ್ಯಾರೇ ನಿಂತರೂ ಅದು ಆಟಕ್ಕುಂಟು ಲೆಖ್ಖಕ್ಕಿಲ್ಲ ಎಂಬ ಭಾವನೆ ಇದೆ. ಆಟ ಹೀಗೆ ನಡೆಯತ್ತೆ ಅಂತ ಹೇಳಕ್ಕಾಗಲ್ಲ.
ಯಾಕೆಂದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಸ್ಪರ್ಧೆ. ಕಳೆದ ಒಂದೂವರೆ ವರ್ಷದಲ್ಲಿ ಚಿಕ್ಕಮಗಳೂರಿನ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ, ಹಾಗೇ ಉಡುಪಿಯ ನದಿಗಳಲ್ಲಿ ಕೂಡಾ. ಈ ಚುನಾವಣೆಯ ಕಾಲಕ್ಕೆ ಆಗಿರುವ ಮಹತ್ತರ ಬದಲಾವಣೆಯೆಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು. ಕಳೆದ ಬಾರಿ 2012ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ ಸುನೀಲ್ ಕುಮಾರ್ ಅವರನ್ನು 45.724 ಮತಗಳಿಂದ ಸೋಲಿಸಿದ್ದರು.
ಅದರ ಲಾಭ ಕಾಂಗ್ರೆಸ್ ಅಭ್ಯರ್ಥಿಗೆ ಎಷ್ಟಾಗುತ್ತೋ ಗೊತ್ತಿಲ್ಲ. ಆದರೆ ಮೋದಿ ಹವಾ ಈ ಬಾರಿ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬುದು ರಾಜಕೀಯ ಪಂಡಿತರ ಅಂಬೋಣ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವೈಯಕ್ತಿಕ ಇಮೇಜ್ ಮತ್ತು ಪರೋಕ್ಷವಾಗಿ ತಮ್ಮದೇ ಪಕ್ಷ ಅಧಿಕಾರದಲ್ಲಿರುವುದು ಪ್ಲಸ್ ಪಾಯಿಂಟ್. ಅದೇ ವೇಳೆ, ರಾಜ್ಯ ಸರಕಾರದ ಗೊಂದಲಗಳು, ಯುಪಿಎ ಸರಕಾರದ ಭ್ರಷ್ಟಾಚಾರ ಹೆಗ್ಡೆ ಪಾಲಿಗೆ ಸವಾಲೂ ಹೌದು. ಏನೇ ಇದ್ದರೂ ಕಾಂಗ್ರೆಸ್ ಬಿಜೆಪಿ ನಡುವೆ ಟಫ್ ಫೈಟ್ ಗ್ಯಾರಂಟಿ.