ಯುದ್ದಗೆದ್ದ ಸಂಭ್ರಮದಲ್ಲಿ ಯಡಿಯೂರಪ್ಪ: ಮುಂದಿನ ನಡೆಯೇನು?
Recommended Video
ಬೆಂಗಳೂರು, ಜುಲೈ 23: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರಕಾರಕ್ಕೆ ವಿಶ್ವಾಸಮತದಲ್ಲಿ ಸೋಲಾದ ನಂತರ, ಗೆಲುವಿನ ನಗೆಬೀರಿರುವ ಬಿಜೆಪಿ, ಸರಕಾರ ರಚಿಸಲು ಮುಂದಿನ ಕಾರ್ಯತಂತ್ರ ರೂಪಿಸುತ್ತಿದೆ.
ಬುಧವಾರ (ಜುಲೈ 24) ನವದೆಹಲಿಗೆ ಪ್ರಯಾಣ ಬೆಳೆಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.
ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್.ಯಡಿಯೂರಪ್ಪ
ವರಿಷ್ಠರಿಂದ ಮುಂದಿನ ಸೂಚನೆಯನ್ನು ಪಡೆದ ನಂತರ ಯಡಿಯೂರಪ್ಪ, ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿಯಾಗಿ ಸರಕಾರದ ಹಕ್ಕು ಮಂಡಿಸಲಿದ್ದಾರೆ ಎನ್ನುವ ಮಾಹಿತಿಯಿದೆ.
ಇದುವರೆಗಿನ ಮಾನ್ಸೂನ್ ಅಧಿವೇಶನದಲ್ಲಿ ಇಯರ್ ಫೋನ್ ಹಾಕಿಕೊಂಡು ಸುಮ್ಮನೆ ಕಲಾಪದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ, ನಾಡಿನ ರೈತರೇ ನನಗೆ ಮೊದಲ ಆದ್ಯತೆ, ಬರಗಾಲದಿಂದ ತತ್ತರಿಸಿರುವ ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅಧಿವೇಶನದ ಮುಗಿದ ನಂತರ ಹೇಳಿದ್ದಾರೆ.
"ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ. 14 ತಿಂಗಳ ಮೈತ್ರಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದರು". ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಮಂಗಳವಾರ ನಡೆದ ವಿಶ್ವಾಸಮತಯಾಚನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 6 ಮತಗಳಿಂದ ಸೋಲು ಕಂಡಿತು.