ಯಡಿಯೂರಪ್ಪ ಉಚ್ಛಾಟನೆ ಮಾಡಿದ್ದವರಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ!
ಬೆಂಗಳೂರು, ಜು. 31: ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂಬ ಚರ್ಚೆಗಳು ನಡೆದಿರುವಾಗಲೇ ರಾಜ್ಯ ಬಿಜೆಪಿ ಘಟಕವನ್ನು ಪುನರ್ ರಚನೆ ಮಾಡಲಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅವರು ಅಧಿಕಾರವಹಿಸಿಕೊಂಡ ಬಳಿಕ ಇದೀಗ ಬಾರಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾಗ ಕೊಕ್ ಕೊಟ್ಟಿದ್ದವರಿಗೆ ಮತ್ತೆ ಜವಾಬ್ದಾರಿಯನ್ನು ಕೊಡುವ ಮೂಲಕ ಬಿಜೆಪಿಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂಬ ಚರ್ಚೆಗಳು ನಡೆದಿರುವಾಗಲೇ ರಾಜ್ಯ ಘಟಕವನ್ನು ಪುನರ್ ಸಂಘಟನೆ ಮಾಡಿರುವುದು ಕುತೂಹಲ ಮೂಡಿಸಿದೆ. ಕಳೆದ 11 ತಿಂಗಳುಗಳ ಹಿಂದೆಯೆ ಅಧಿಕಾರ ವಹಿಸಿಕೊಂಡಿರುವ ನಳೀನ್ ಕುಮಾರ್ ಕಟೀಲ್ ಅವರು ಈಗ ಪದಾಧಿಕಾರಿಗಳ ಬದಲಾವಣೆ ಮಾಡಿದ್ದಾರೆ.
ಕುತೂಹಲ ಮೂಡಿಸಿದ ಯಡಿಯೂರಪ್ಪ ರಾಜ್ಯಪಾಲರ ದಿಢೀರ್ ಭೇಟಿ
ನೂತನ ಪದಾಧಿಕಾರಿಗಳು
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಮಡ ಬಳಿಕ ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶ ಮಾಡಿತ್ತು.
ರಾಜ್ಯ ಬಿಜೆಪಿ ಹೊಸ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರು ಹಾಗೂ 9 ಜನ ಮಾಜಿ ಶಾಸಕರಿಗೆ ಅವಕಾಶ ಮಾಡಿ ಕೊಡಲಾಗಿದೆ.
ಯಡಿಯೂರಪ್ಪರಿಗೆ ಹಿನ್ನಡೆ?
ಯುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ನಳೀನ್ ಕುಮಾರ್ ಕಟೀಲ್ ಆದೇಶ ಮಾಡಿದ್ದಾರೆ. ಆದರೆ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.
ಈಗ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಿಎಂ ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನೆಡೆ ಎಂದೇ ಹೇಳಲಾಗುತ್ತಿದೆ. ಜೊತೆಗೆ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ವಜಾ ಮಾಡಿದ್ದ ಇಬ್ಬರನ್ನು ಮತ್ತೆ ಪಕ್ಷ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ.
ರಾಜ್ಯ ಉಪಾಧ್ಯಕ್ಷರಾಗಿ ನಂದೀಶ್
ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದ್ದ ಎಂ.ಬಿ. ನಂದೀಶ್ ಅವರನ್ನು ಈಗ ಮತ್ತೆ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ ಆಗ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡಿದ್ದ ಕೇಶವ ಪ್ರಸಾದ್ ಅವರನ್ನು ಈಗ ರಾಜ್ಯ ಕಾರ್ಯದರ್ಶಿಯಾಗಿ ಮತ್ತೆ ನೇಮಕ ಮಾಡಿ ಕಟೀಲ್ ಆದೇಶ ಮಾಡಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾಗ ಮಾಜಿ ಶಾಸಕ ಭಾನು ಪ್ರಕಾಶ್ ಸೇರಿದಂತೆ ಹಲವರನ್ನು ಪಕ್ಷದಲ್ಲಿ ತಮ್ಮ ವಿರುದ್ಧ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದ ವಿವಿಧ ಜವಾಬ್ದಾರಿಗಳಿಂದ ವಜಾ ಮಾಡಿದ್ದರು.
ಯುವ ಮೋರ್ಚಾ
ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಕಳೆ ನಾಲ್ಕು ವರ್ಷಗಳ ಹಿಂದಷ್ಟೇ ಬಿಜೆಪಿ ಸೇರಿದ್ದ ಡಾ. ಸಂದೀಪ್ ಅವರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ. ಸಂದೀಪ್ ಅವರು ಹಿಂದೆ ಕಾಂಗ್ರೆಸ್ ಮೆಡಿಕಲ್ ಸೆಲ್ ಸಂಯೋಜಕರಾಗಿದ್ದರು. ಸಂಸದ ಪ್ರತಾಪ್ ಸಿಂಹ ಅವರು ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದ ವೇಳೆಯಲ್ಲಿ ಡಾ. ಸಂದೀಪ್ ಬಿಜೆಪಿಯನ್ನು ಸೇರಿದ್ದರು.
ಈ ವಿಚಾರದಲ್ಲಿಯೂ ಬಿ.ವೈ. ವಿಜಯೇಂದ್ರ ಅವರಿಗೆ ಹಿನ್ನೆಡೆಯಾಗಿದೆ ಎನ್ನಲಾಗಿದೆ. ತಮ್ಮ ಆಪ್ತ ತಮ್ಮೇಶ್ ಗೌಡ ಅವರನ್ನು ಯುವ ಮೋರ್ಚಾ ಅಧ್ಯಕ್ಷರನ್ನಾಗಿಸಲು ವಿಜಯೇಂದ್ರ ಪ್ರಯತ್ನ ನಡೆಸಿದ್ದರು. ಹಾಗೆಯೇ ಯುವ ಮೋರ್ಚಾ ಅಧ್ಯಕ್ಷ ಹುದ್ದೆಗೆ ಸಚಿವ ವಿ. ಸೋಮಣ್ಣ ಪುತ್ರ ಡಾ. ಅರುಣ್ ಸೋಮಣ್ಣ ಅವರೂ ಪ್ರಯತ್ನ ನಡೆಸಿದ್ದರು.