ರಾಜ್ಯಸಭೆ- ವಿಧಾನ ಪರಿಷತ್ ಚುನಾವಣೆ: ಸಿಎಂ ಬೊಮ್ಮಾಯಿ- ಯಡಿಯೂರಪ್ಪ ಭೇಟಿ
ಬೆಂಗಳೂರು, ಮೇ. 13: ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಕರ್ನಾಟಕ ಘಟಕ ಶನಿವಾರ ಕೋರ್ ಕಮಿಟಿ ಸಭೆ ಏರ್ಪಡಿಸಿದೆ.
ರಾಜ್ಯಸಭೆ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನು ಸಾಮೂಹಿಕವಾಗಿ ಒಗ್ಗೂಡಿಸಿ ಯಶಗಳಿಸಬೇಕಾದ ಅನಿವಾರ್ಯತೆ ಬೊಮ್ಮಾಯಿಗೆ ಎದುರಾಗಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯ ಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಿಳಿಸಿದರು.
ಸಿಎಂ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜತೆ ಬೇರೆ ವಿಚಾರ ಚರ್ಚೆ ಆಗಿದೆ. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಬಗ್ಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಒಬಿಸಿ ಮೀಸಲಾತಿ ಮಾಡಲೇಬೇಕಿದೆ. ಅದಕ್ಕೆ ಈಗಾಗಲೇ ರಚಿಸಲಾಗಿರುವ ಸಮಿತಿ ತನ್ನ ವರದಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಅಥವಾ ಹಳೆಯ ಮೀಸಲಾತಿ ಪ್ರಕಾರ ಚುನಾವಣೆ ಮಾಡಲು ಅವಕಾಶ ನೀಡುವಂತೆ ಕೋರಲಾಗಿದೆ. ಇದಕ್ಕೆ ಬಹುತೇಕ ಅವಕಾಶ ಸಿಗುವ ಭರವಸೆ ಇದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಅಷ್ಟು ಮಹತ್ವ ಅಲ್ಲದಿದ್ದರೂ, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆಲುವು ಬೊಮ್ಮಾಯಿ ಅವರ ನಾಯಕತ್ವದ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಮೀಸಲಾತಿ ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ಪಕ್ಷಕ್ಕೆ ಹೊಡೆತ ಬೀಳುವ ವಾತಾವರಣವಿದೆ. ಈಗಾಗಲೇ ಹಿಜಾಬ್, ಹಲಾಲ್ ಕಟ್, ಅಜಾನ್ , ಮತಾಂತರ ನಿಷೇಧ ಕಾಯಿದೆ ಸುಗ್ರೀವಾಜ್ಞೆ ಹೀಗೆ ನಾನಾ ವಿಚಾರಗಳು ಪಕ್ಷದ ಮೇಲೆ ಪರಿಣಾಮ ಬಿದ್ದಿವೆ. ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ಮುಸ್ಲಿಂ ಸಮುದಾಯದ ಮತ ಗಳಿಸುವಲ್ಲಿ ಬಿಜೆಪಿಗೆ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಮುಂದೆ ರಾಜ್ಯದಲ್ಲಿ ಎದುರಾಗಲಿರುವ ಸ್ಥಳೀಯ ಚುನಾವಣೆಗಳು, ಗೆಲುವಿನ ಕಾರ್ಯತಂತ್ರ, ಮೀಸಲಾತಿ ಮಹತ್ವದ ವಿಚಾರಗಳು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಸಂಪುಟ ವಿಸ್ತರಣೆಯಾಗದ ಕಾರಣ ಈಗಾಗಲೇ ಅನೇಕ ಶಾಸಕರು ಬೊಮ್ಮಾಯಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆ ಗೆಲುವಿನ ದಿಕ್ಸೂಚಿ ಎಂದೇ ಭಾವಿಸಲಾಗುತ್ತದೆ. ಹೀಗಾಗಿ ಬೊಮ್ಮಾಯಿ ಅವರು ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದಕ್ಕಿಂತಲೂ ಚುನಾವಣೆ ಎದುರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
ಹೊರಗಿನವರಿಗೆ ಆದ್ಯತೆ:
ಬಿಜೆಪಿ ಸರ್ಕಾರ ರಚನೆಗೆ ಬೆನ್ನು ಕೊಟ್ಟ ಹೊರಗಿನಿಂದ ಬಂದವರಿಗೆ ಬಹುಕೇತ ನಾಯಕರಿಗೆ ಸಚಿವ ಸ್ಥಾನ ನೀಡಲಾಗಿದೆ.ದಶಕಗಳಿಂದ ದುಡಿದ ಬಿಜೆಪಿ ಮೂಲ ನಾಯಕರನ್ನು ಕಡೆಗಣಿಸಲಾಗಿದೆ. ಈ ಅಸಮಾಧಾನ ಯಡಿಯೂರಪ್ಪ ದಿಟ್ಟವಾಗಿ ನಿಭಾಯಿಸಿದ್ದರು. ಆದರೆ, ಇದನ್ನು ಬೊಮ್ಮಾಯಿ ನಿರ್ವಹಣೆ ಮಾಡುವುದು ಅಸಾಧ್ಯ. ಯಡಿಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕ. ಅರ್ಧ ಮಂದಿ ಎದುರು ಬಿದ್ದರೂ ಅವರ ಭಿನ್ನಮತ ಶಮನ ಮಾಡುವ ಶಕ್ತಿ ಅವರಲ್ಲಿತ್ತು. ಬೊಮ್ಮಾಯಿ ಅವರಿಗೆ ಅದು ಅಸಾಧ್ಯ. ಹೀಗಾಗಿ ಬೊಮ್ಮಾಯಿ ಅವರಿಗೆ ಚುನಾವಣೆಗಳಲ್ಲ ಗೆಲುವು ಸಾಧಿಸುವುದೇ ದೊಡ್ಡ ಸಾವಾಲಾಗಿ ಪರಿಣಮಿಸಿದೆ.
Recommended Video