ಎಸ್ಟಿ ಸಮುದಾಯವನ್ನ ಗುರುತಿಸಿದ್ದು ಬಿಜೆಪಿ ಸರ್ಕಾರ ಮಾತ್ರ: ತಿಪ್ಪರಾಜು ಹವಾಲ್ದಾರ್
ಬೆಂಗಳೂರು, ಮೇ.23 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 28 ಸಾವಿರ 234 ಕೋಟಿ ರೂಪಾಯಿಯ ಕ್ರಿಯಾ ಯೋಜನೆಗೆ ಅನುಮೋದನೆ ಕೊಟ್ಟಿದೆ. ಅತಿ ಹೆಚ್ಚು ಅನುದಾನ ನೀಡಿದ ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಧನ್ಯವಾದ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿ ಕಾರ್ಯಾಲಯ 'ಜಗನ್ನಾಥ ಭವನ' ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಸಮುದಾಯಕ್ಕೆ 20 ಸಾವಿರ 112 ಕೋಟಿ ಹಾಗೂ ಎಸ್ಟಿ ಸಮುದಾಯಕ್ಕೆ 8 ಸಾವಿರ 121 ಕೋಟಿ ಅನುದಾನವನ್ನ ಸಿಎಂ ಬಸವರಾಜ ಬೊಮ್ಮಾಯಿಯವರು ಕೊಟ್ಟಿದ್ದಾರೆ.
ಈ ರಾಜ್ಯದ ಬಹುಸಂಖ್ಯಾತ ದಲಿತ ಸಮುದಾಯಕ್ಕೆ ಬಜೆಟ್ ನಲ್ಲಿ ಹೆಚ್ಚು ಹಣ ಘೋಷಿಸಿರುವುದಲ್ಲದೆ, ಅತೀ ಹೆಚ್ಚು ಹಣ ನೀಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳು. ಇದರ ಜೊತೆಗೆ ಎಸ್ಸಿ, ಎಸ್ಟಿ ಸಮುದಾಯದ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿರುವ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದರು.
ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ಹೇಳಿಕೊಂಡು ಇಲ್ಲಿ ಆಡಳಿತ ನಡೆಸಿತ್ತು. ಆದರೆ, ಬಾಬಾ ಸಾಹೇಬರಿಗೆ ಅಂತ್ಯಸಂಸ್ಕಾರದಲ್ಲೂ ದೆಹಲಿಯಲ್ಲಿ ಒಂದು ತುಂಡು ಭೂಮಿಯನ್ನೂ ಕೊಡದೆ ಅನ್ಯಾಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 5 ಸ್ಥಳಗಳನ್ನು ಗುರುತಿಸಿ ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ಇಂತಹ ಮಹತ್ವ ಕಾರ್ಯ ಮಾಡಿದೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯರಿಗೂ ಧನ್ಯವಾದ ತಿಳಿಸುತ್ತೇವೆ.
ವಾಲ್ಮೀಕಿ ಜಯಂತಿಗೆ ಯಡಿಯೂರಪ್ಪ ರಜೆ ಘೋಷಿಸಿದ್ದರು
ಮಹರ್ಷಿ ವಾಲ್ಮೀಕಿ ಜಯಂತಿಗೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ರಜೆ ಘೋಷಣೆ ಮಾಡಿದ್ದರು. ಎಸ್ಟಿ ಸಮುದಾಯವನ್ನ ಏನಾದರೂ ಗುತಿಸಿದೆ ಅಂದ್ರೆ ಅದು ಬಿಜೆಪಿ ಸರ್ಕಾರ ಮಾತ್ರ. ಅದು ಅಲ್ಲದೆ ಇದೀಗ ಆದಿವಾಸಿ ಗೌರವ ದಿನ ಆಚರಣೆಗೆ ಕೇಂದ್ರ ಸರಕಾರ ಮುಂದಾಗಿದೆ. ನಮ್ಮ ಸಮುದಾಯಗಳಿಗೆ ಅತಿ ಹೆಚ್ಚಿನ ಕೊಡುಗೆ ಕೊಡಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಮ್ಮ ಸಮುದಾಯದ ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ತೇರ್ಗಡೆ ಹೊಂದಿದ್ದಾರೆ. ಬಿಜೆಪಿ ನಮ್ಮ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ನೋಡಿಲ್ಲ.
ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎಂದು ನೋಡಲಾಗುತ್ತಿತ್ತು
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಿರಲಿಲ್ಲ. ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎಂದು ನೋಡಲಾಗುತ್ತಿತ್ತು ಈಗ ಬಿಜೆಪಿ ಸರ್ವ ಜನಾಂಗಕ್ಕೆ ಆಧ್ಯತೆ ನೀಡುತ್ತಿರುವ ಹಾಗೂ ರಾಷ್ಟ್ರದಾದ್ಯಂತ ಎಲ್ಲಾ ಜನಾಂಗದ ಪರವಾಗಿ ಹಿತ ಕಾಪಾಡುತ್ತಾ ಬೆಳೆದುನಿಂತಿರುವ ಪಕ್ಷವಾಗಿದೆ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ಗರಿಷ್ಠ ಕೋಮು ಗಲಭೆಗಳು
ವಿರೋಧ ಪಕ್ಷಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿಚಾರದಲ್ಲಿ ಊಹಾಪೋಹ ಹಾಗೂ ಅಂತೆಕಂತೆಗಳನ್ನು ಹರಿಯಬಿಟ್ಟು ಸೌಹಾರ್ದವನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗರಿಷ್ಠ ಕೋಮು ಗಲಭೆಗಳಾಗಿದ್ದವು. ಆದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಕೋಮು ಸೌಹಾರ್ದದ ಅಭಿವೃದ್ಧಿಪರ ಆಡಳಿತವನ್ನು ನೀಡಲಾಗಿದೆ.
ನವೆಂಬರ್ನಲ್ಲಿ ಬುಡಕಟ್ಟು ಮೇಳ
ರಾಜಾ ಮದಕರಿ ನಾಯ್ಕ್ ರ್ಯಾಲಿ ಮತ್ತು ಬುಡಕಟ್ಟು ಮೇಳವನ್ನು ನವೆಂಬರ್ನಲ್ಲಿ ಎಸ್ಟಿ ಮೋರ್ಚಾ ವತಿಯಿಂದ ಆಯೋಜಿಸಲಾಗುವುದು. ಚಿತ್ರದುರ್ಗದ ಕಲ್ಲಿನ ಕೋಟೆಯಿಂದ ಆರಂಭಗೊಳ್ಳಲಿರುವ ರ್ಯಾಲಿಯು ಸುರಪುರಕ್ಕೆ ತೆರಳಲಿದೆ ಎಂದು ರಾಜ್ಯ ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ತಿಪ್ಪರಾಜ ಹವಲ್ದಾರ್ ಮಲ್ಲೇಶ್ವರದ ಬಿಜೆಪಿ ಕಚೇರಿ ಕಾರ್ಯಾಲಯ 'ಜಗನ್ನಾಥ ಭವನ' ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದೇ ವೇಳೆ ಎಸ್.ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯ್ಕ್, ರಾಜ್ಯ ಕಾರ್ಯದರ್ಶಿ ಮಹಾಂತೇಶ್ ನಾಯ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.