ಲೋಡ್ಶೆಡ್ಡಿಂಗ್ ಹಿಂದೆ ಡಿಕೆಶಿ ಕೈವಾಡವಿದೆ : ಜೋಶಿ
ಬೆಂಗಳೂರು, ಅ.13 : 'ಕರ್ನಾಟಕದಲ್ಲಿ ಕೃತವಾಗಿ ವಿದ್ಯುತ್ ಆಭಾವ ಸೃಷ್ಟಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನದಲ್ಲಿ ಕೂರಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ ಕರ್ನಾಟಕ ರಾಜ್ಯವನ್ನು ಕತ್ತಲೆಗೆ ತಳ್ಳಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ ಜಾರಿಗೆ ತಂದಿರುವ ಸರ್ಕಾರವ ಕ್ರಮವನ್ನು ಟೀಕಿಸಿದರು. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದರೂ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡುತ್ತಿದೆ ಎಂದು ದೂರಿದರು. [ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ 'ಭಾಗ್ಯ']
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದ್ದರಿಂದ ವಿದ್ಯುತ್ ಅಭಾವವೆಂದು ಹೇಳಿ ಲೋಡ್ ಶೆಡ್ಡಿಂಗ್ ಜಾರಿಗೆ ತಂದು, ಸಿಎಂ ಸಿದ್ದರಾಮಯ್ಯ ಅವರನ್ನು ಆ ಸ್ಥಾನದಿಂದ ಪದಚ್ಯುತಿಗೊಳಿಸಲು ನಿರ್ಧರಿದ್ದಾರೆ ಎಂದು ಆರೋಪಿಸಿದರು.
ಆಂಧ್ರಪ್ರದೇಶದ ಕರಾವಳಿಯಲ್ಲಿ ಅಪ್ಪಳಿಸಿರುವ ಹುಡ್ಹುಡ್ ಚಂಡಮಾರುತದಿಂದಾಗಿ ಉಷ್ಣವಿದ್ಯುತ್ ಸ್ಥಾವರಗಳಲ್ಲಿನ ಉತ್ಪಾದನೆ ಕೊರತೆ ಉಂಟಾಗಿದೆ. ಆದ್ದರಿಂದ ಭಾನುವಾರದಿಂದಲೇ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ದಿನ 2 ತಾಸು ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ 2-4 ತಾಸು ಮತ್ತು ಗ್ರಾಮೀಣ ಪ್ರದೇಶದಲ್ಲಿ 15 ತಾಸು ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.
ವಿದ್ಯುತ್ ಖರೀದಿ ಹಗರಣ ತನಿಖೆ ಆರಂಭ : 2004ರಿಂದ 2014ರವರೆಗಿನ ವಿದ್ಯುತ್ ಖರೀದಿಯ ಸಂಪೂರ್ಣ ತನಿಖೆ ನಡೆಸಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಚಿಸಿದ್ದ ಸಮಿತಿ ತನ್ನ ತನಿಖೆಯನ್ನು ಸೋಮವಾರ ಆರಂಭಿಸಿದೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದ ಸಮಿತಿ ತನಿಖೆ ನಡೆಸಲಿದ್ದು, ಶಾಸಕರಾದ ರಮೇಶ್ ಕುಮಾರ್, ಶಿವಾನಂದ ಪಾಟೀಲ್, ಬಸವರಾಜ್ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಒಟ್ಟು 11 ಜನ ಸದಸ್ಯರು ಸಮಿತಿಯಲ್ಲಿದ್ದಾರೆ.