ವಿಶ್ವಾಸಮತಯಾಚನೆ ಪ್ರಕ್ರಿಯೆ ಇಂದೇ ಮುಗಿಸಲು ರಾಜ್ಯಪಾಲರ ಸೂಚನೆ
Recommended Video
ಬೆಂಗಳೂರು, ಜುಲೈ 18: ವಿಶ್ವಾಸಮತಯಾಚನೆಯನ್ನು ಇಂದೇ ನಡೆಸುವಂತೆ ಸೂಚಿಸುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಬಿಜೆಪಿ ನಿಯೋಗ ನೀಡಿದ ದೂರನ್ನು ರಾಜ್ಯಪಾಲರು ಪರಿಗಣಿಸಿದ್ದಾರೆ. ವಿಶ್ವಾಸಮತವನ್ನು ಇಂದೇ ಮಂಡನೆ ಪ್ರಕ್ರಿಯೆಯನ್ನು ಮುಗಿಸುವಂತೆ ರಾಜ್ಯಪಾಲರು ಸ್ಪೀಕರ್ ಗೆ ಸಂದೇಶ ಕಳಿಸಿದ್ದಾರೆ. ಇದೇ ಸಂದೇಶ ಪತ್ರವನ್ನು ಸದನದಲ್ಲಿ ಸ್ಪೀಕರ್ ಅವರು ಓದಿ ತಿಳಿಸಿದರು.
ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಾಡಿದ ಬಳಿಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾಯಿಂಟ್ ಆಫ್ ಆರ್ಡರ್ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಇತಿಹಾಸ, ಕುತೂಹಲಕಾರಿ ಪಕ್ಷಾಂತರಗಳ ಬಗ್ಗೆ ಸುದೀರ್ಘವಾಗಿ ವಿವರಿಸಿ, ಸುಪ್ರೀಂಕೋರ್ಟಿನ ವಿಪ್ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದಾರೆ.
ವಿಶ್ವಾಸ-ಅವಿಶ್ವಾಸ ಮತ: ಇತಿಹಾಸದಲ್ಲಿ ಎಷ್ಟು ದಿನ ಚರ್ಚೆ ನಡೆದಿತ್ತು?
ಆದರೆ, ಇದೆಲ್ಲವೂ ಇಂದು ವಿಶ್ವಾಸಮತ ಯಾಚನೆ ನಿಗದಿಯಾಗಿದ್ದ ಪ್ರಕ್ರಿಯೆಯಿಂದ ದೂರವಾದ ವಿಚಾರವಾಗಿದೆ. ನಿಗದಿಯಂತೆ ವಿಶ್ವಾಸಮತಯಾಚನೆಯನ್ನು ಇಂದೇ ನಡೆಸುವಂತೆ ಸೂಚಿಸುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಬಿಜೆಪಿ ನಿಯೋಗ ಇಂದು ದೂರು ನೀಡಿದೆ.
ಆಡಳಿತ ಪಕ್ಷದವರು ವಿಶ್ವಾಸಮತ ಯಾಚನೆಗೆ ಸಮಯ ಕೋರಿ ದಿನ ನಿಗದಿಯಾಗಿದ್ದರೂ ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದಾರೆ. ಸದನದಲ್ಲಿ ಆಡಳಿತ ಪಕ್ಷವು ಕಾಲಹರಣ ಮಾಡುತ್ತಿದ್ದರೂ ಸ್ಪೀಕರ್ ಕ್ರಮ ಜರುಗಿಸಿಲ್ಲ, ಈ ಬಗ್ಗೆ ಬಿಜೆಪಿ ಶಾಸಕರಾದ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಶ್ವಾಸಮತ ಯಾಚನೆ ವಿಳಂಬ, ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪ
ಈ ವಿಚಾರದಲ್ಲಿ ಕೂಡಲೇ ರಾಜ್ಯಪಾಲರು ಪ್ರವೇಶ ಮಾಡಿ, ವಿಶ್ವಾಸಮತ ಯಾಚನೆಗೆ ಅನುವು ಮಾಡಿಕೊಡಬೇಕೆಂದು ಬಿಜೆಪಿ ಕೋರಿದೆ. ರಾಜ್ಯದಲ್ಲಿ 7 ಬಾರಿ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಿದ್ದು, 7 ಬಾರಿಯೂ ಬೆಳಗ್ಗೆಯಿಂದ ಸಂಜೆವರೆಗೆ ಚರ್ಚೆಗಳು ನಡೆದು ವಿಶ್ವಾಸಮತ ಯಾಚಿಸಿದ ಹಲವು ಉದಾಹರಣೆಗಳಿವೆ. ಇದನ್ನು ಸ್ಪೀಕರ್ ಗಮನಕ್ಕೆ ತಂದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ನಾವು ರಾಜ್ಯಪಾಲರನ್ನು ಭೇಟಿ ಮಾಡಿ, ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡಿದ್ದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ
ರಾಜ್ಯಪಾಲರ ಪ್ರತಿಕ್ರಿಯೆ: ಸದನದ ಕಲಾಪವನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದ ರಾಜ್ಯಪಾಲರ ವಿಶೇಷಾಧಿಕಾರಿಗಳು ಸ್ಪೀಕರ್ ಭೇಟಿ ಮಾಡಿದ್ದಾರೆ. ನಂತರ ತಮ್ಮ ಪರಿವೀಕ್ಷಣಾ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಬಿಜೆಪಿ ಮನವಿಯನ್ನು ಸ್ವೀಕರಿಸಿದ ರಾಜ್ಯಪಾಲ ವಜುಭಾಯಿ ವಾಲ ಅವರು ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಈ ನಡುವೆ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ನೀಡಿದ ಬಳಿಕ, ಸಿಎಂ ಕುಮಾರಸ್ವಾಮಿ ಅವರು ಸಚಿವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.