ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್ಶೀಟ್ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು, ಮಾರ್ಚ್ 01: ಬೆಂಗಳೂರು ಮಹಾನಗರ ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ಚಾರ್ಚ್ಶೀಟ್ (ದೋಷಾರೋಪ ಪಟ್ಟಿ) ಬಿಡುಗಡೆ ಮಾಡಲಾಯಿತು. ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ವಿರುದ್ಧ ದೋಷಾರೋಪ ಪಟ್ಟಿ ಬಿಡುಗಡೆ ಮಾಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಹಿಂದೆ ಸೂಚಿಸಿದ್ದರು.
ಕೆ.ಜೆ.ಜಾರ್ಜ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ. ಕೃಷ್ಣಪ್ಪ, ಪ್ರಿಯಾ ಕೃಷ್ಣಪ್ಪ ಸೇರಿದಂತೆ ಹಲವು ಪ್ರಭಾವಿ ಕಾಂಗ್ರೆಸ್ ಸಚಿವರು, ಶಾಸಕರು ಮತ್ತು ಮುಖಂಡರು ಮಾಡಿರುವ ಹಗರಣಗಳ ಪಟ್ಟಿ ಒಳಗೊಂಡ ಈ ಚಾರ್ಜ್ಶೀಟ್ ಅನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು. ಬಿಜಪಿಯ ಸುರೇಶ್ ಕುಮಾರ್, ಆರ್.ಅಶೋಕ್ ಮತ್ತು ಶಾಸಕ ಡಾ.ಅಶ್ವಥ್ನಾರಾಯಣ ಅವರುಗಳು ಚಾರ್ಜ್ ಶೀಟ್ ಬಿಡುಗಡೆ ಸಮಾರಂಭದಲ್ಲಿ ಇದ್ದರು.
ಬಿಜೆಪಿಯ ಚಾರ್ಜ್ ಶೀಟ್ನಲ್ಲಿ ಬೆಂಗಳೂರಿನ ಸುತ್ತಮುತ್ತ ಕಾಂಗ್ರೆಸ್ ಮಾಡಿರುವ ಹಗರಣಗಳ ಮಾಹಿತಿಯನ್ನು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚಲು, ಸ್ಟೀಲ್ ಬ್ರಿಡ್ಜ್, ವೈಟ್ ಟಾಪಿಂಗ್ ಮುಂತಾದ ಕಾಮಗಾರಿಗಳಲ್ಲಿ ಕೆ.ಜೆ.ಜಾರ್ಜ್ ಅವರು 200 ಕೋಟಿಗೂ ಹೆಚ್ಚು ಹಣ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೇಶನ ಹಂಚಿಕೆಯಲ್ಲಿ ಗೋಲ್ಮಾಲ್
ವಸತಿ ಸಚಿವ ಎಂ.ಕೃಷ್ಣಪ್ಪ ಅವರು ಕೆರೆಯ 40 ಎಕರೆ ಜಾಗವನ್ನು ಗುಳುಂ ಮಾಡಿದ್ದಾರೆಂದು ಹಾಗೂ ನಿವೇಶನ ಹಂಚಿಕೆಯಲ್ಲಿ ಗೋಲ್ ಮಾಲ್ ಮಾಡಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅರ್ಕಾವರಿ ಡಿನೊಟಿಫೈ
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಕಂಪೆನಿಗೆ ಸಹಾಯ ಮಾಡಲೆಂದು ಹಲವು ಆಸ್ಪತ್ರೆಗಳ ಲ್ಯಾಬ್ಗಳಿಗೆ ಹೆಚ್ಚಿನ ಹಣಕ್ಕೆ ಉಪಕರಣಗಳನ್ನು ಖರೀದಿಸಲಾಗಿದೆ. ಅಷ್ಟೆ ಅಲ್ಲದೆ ಹೈಕೋರ್ಟ್ ಆದೇಶ ಇದ್ದರೂ ಸಹಿತ ಮುಖ್ಯಮಂತ್ರಿಗಳು ಅರ್ಕಾವತಿ ಬಡಾವಣೆಯ ಸೈಟ್ ಅನ್ನು ಲಂಚಕ್ಕಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರೂ ಸಹ ಹಲವು ಭೂ ಸಂಬಂಧಿ ಹಗರಣಗಳನ್ನು ಮಾಡಿದ್ದು, ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಹಾಗೂ ಲಂಚ ಪಡೆದಿದ್ದಾರೆ ಎಂದು ಬಿಜೆಪಿಯು ಆರೋಪಿಸಿದೆ.
ಆರೋಪಿಗಳಿಗೆ ರಕ್ಷಣೆ
ರಾಜ್ಯದಲ್ಲಿ ನಡೆದಿರುವ ಹತ್ಯೆಗಳ ಬಗ್ಗೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಬಿಜೆಪಿ ರಾಜ್ಯದಲ್ಲಿ ಹಲವು ಹಿಂದೂಗಳ ಹತ್ಯೆಯನ್ನು ಕಾಂಗ್ರೆಸ್ ಸರ್ಕಾರ ಬೇಕೆಂದೇ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದೆ. ಅಷ್ಟೆ ಅಲ್ಲದೆ ಕೊಲೆ ಆರೋಪಿಗಳಿಗೆ ರಕ್ಷಣೆಯನ್ನೂ ಒದಗಿಸಿದೆ ಎಂದು ಚಾರ್ಜ್ ಶೀಟ್ನಲ್ಲಿ ಆರೋಪಿಸಲಾಗಿದೆ.
ಎಲ್ಲಾ ಜಿಲ್ಲೆಗಳಲ್ಲು ಬಿಡುಗಡೆ
ಕಾಂಗ್ರೆಸ್ ನ ಹಲವು ಶಾಸಕ, ಸಚಿವರ ಹಗರಣಗಳ ದೊಡ್ಡ ಪಟ್ಟಿಯೇ ಬಿಜೆಪಿಯ ಚಾರ್ಜ್ ಶೀಟ್ನಲ್ಲಿದೆ. ಕೆಲವು ತಿಂಗಳುಗಳ ಹಿಂದೆ ಅಮಿತ್ ಶಾ ಅವರು ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಲು ಹೇಳಿದ್ದರು. ಅದರಂತೆ ಬೆಂಗಳೂರು ಮಹಾನಗರ ಬಿಜೆಪಿ ಮೊದಲ ಚಾರ್ಜ್ಶೀಟ್ ಬಿಡುಗಡೆ ಮಾಡಿದೆ.
ಸಾಕ್ಷ ಇದ್ದರೆ ಲೋಕಾಯುಕ್ತಕ್ಕೆ ಹೋಗಲಿ
ಬಿಜೆಪಿಯ ಚಾರ್ಜ್ಶೀಟ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರಲ್ಲಿ ಸಾಕ್ಷ ಇದ್ದರೆ ನೇರವಾಗಿ ಹೋಗಿ ತನಿಖಾ ಸಂಸ್ಥೆಗೆ ಅಥವಾ ಲೋಕಾಯುಕ್ತಕ್ಕೆ ದೂರು ದಾಖಲಿಸಲಿ. ಪ್ರಚಾರದ ಉದ್ದೇಶದಿಂದಷ್ಟೆ ಅದು ಮಾಧ್ಯಮಗಳ ಮುಂದೆ ಪಟ್ಟಿ ಬಿಡುಗಡೆ ಮಾಡಿದೆ ಎಂದ್ದಿದ್ದಾರೆ.
ವಿಡಿಯೋ: ರಾಹುಲ್ ಗಾಂಧಿ ಮಿಮಿಕ್ರಿ ಮಾಡಿ ರಂಜಿಸಿದ ಅಮಿತ್ ಶಾ!
ಸಾಲಮನ್ನಕ್ಕೆ ಪರಿಶಿಷ್ಟ ವರ್ಗದವರ ಹಣ ಬಳಕೆ: ಬಿಎಸ್ ವೈ ಆರೋಪ