ರಾಜ್ಯಕ್ಕೆ ಇನ್ನೂ ಇಬ್ಬರು ಡಿಸಿಎಂ: ಬಿಜೆಪಿ ತಂತ್ರವೇನು?
ಬೆಂಗಳೂರು, ಸೆಪ್ಟೆಂಬರ್ 07: ಮೂರು ಜನ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಟೀಕೆಗೆ ಗುರಿ ಆಗಿರುವ ಬಿಜೆಪಿ ಅತೃಪ್ತರನ್ನು ನಿಭಾಯಿಸುವ ಉದ್ದೇಶದಿಂದ ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲು ತಯಾರಾಗಿದೆ.
ಈಗಾಗಲೇ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿರುವ ಬಿಜೆಪಿ ಇನ್ನೂ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುವ ಯೋಚನೆಯಲ್ಲಿದೆ.
Recommended Video
ಐದು ಡಿಸಿಎಂ ಹುದ್ದೆ ಸೃಷ್ಟಿಸುವ ಹಿಂದೆ ಜಾತಿ ರಾಜಕೀಯ ಲೆಕ್ಕಾಚಾರ ಇದೆ. ಈಗಾಗಲೇ ಲಿಂಗಾಯತ, ಎಸ್ಸಿ, ಒಕ್ಕಲಿಗ ಸಮುದಾಯದವರನ್ನು ಡಿಸಿಎಂ ಆಗಿ ಮಾಡಲಾಗಿದ್ದು, ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಇನ್ನೆರಡು ಜಾತಿಗಳನ್ನು ಪ್ರತಿನಿಧಿಸುವವರಿಗೆ ಡಿಸಿಎಂ ಪಟ್ಟ ನೀಡಿ ಮತಗಳು ಬಿಜೆಪಿ ಬಿಟ್ಟು ಹೋಗದಂತೆ ತಡೆಯುವ ಯೋಜನೆ ಬಿಜೆಪಿಯದ್ದು.
ಹಿರಿಯ ಶಾಸಕರಿಗೆ ದೊರೆತಿಲ್ಲ ಮಂತ್ರಿ ಸ್ಥಾನ
ಇದು ಮಾತ್ರವೇ ಅಲ್ಲದೆ, ಈಗಾಗಲೇ ಪಕ್ಷದಲ್ಲಿ ಆಂತರಿಕವಾಗಿ ಅತೃಪ್ತಿ ತಲೆದೂರಿದೆ. ಕೆಲವು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ದೊರೆತಿಲ್ಲ. ಜೊತೆಗೆ 17 ಜನ ಅನರ್ಹ ಶಾಸಕರು ಸಹ ಸಚಿವ ಸ್ಥಾನಕ್ಕಾಗೆಂದೇ ಬಿಜೆಪಿ ಬಾಗಿಲ ಬಳಿಯೇ ಕಾದು ನಿಂತಿದ್ದಾರೆ. ಎಲ್ಲರಿಗೂ ಅವಕಾಶ ನೀಡುವ ಜವಾಬ್ದಾರಿ ಇರುವ ಕಾರಣ ಹೆಚ್ಚು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಲಾಗುತ್ತಿದೆ.
ಐವರಲ್ಲಿ ಒಬ್ಬರು ಯಡಿಯೂರಪ್ಪ ಉತ್ತರಾಧಿಕಾರಿ
ಐವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಹಿಂದೆ ಮತ್ತೊಂದು ಪ್ರಮುಖವಾದ ಕಾರಣವೂ ಇದೆ. ಈ ಐವರಲ್ಲಿ ಒಬ್ಬರನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಆಗಿ ಮುಂದಿನ ದಿನಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಐವರಲ್ಲಿ ಯಾರು ಹೆಚ್ಚು ಸೂಕ್ತ ಎನಿಸುತ್ತಾರೆಯೋ ಅವರು ರಾಜ್ಯ ಬಿಜೆಪಿಯ ಭವಿಷ್ಯದ ಸಿಎಂ ಆಕಾಂಕ್ಷಿ ಆಗಲಿದ್ದಾರೆ.
ಅನರ್ಹ ಶಾಸಕರಿಗೆ ಒಂದು ಡಿಸಿಎಂ ಹುದ್ದೆ
ಈಗ ಸೃಷ್ಟಿಸಲಿರುವ ಎರಡು ಡಿಸಿಎಂ ಹುದ್ದೆಗಳಲ್ಲಿ ಒಂದು ಹುದ್ದೆ ಅನರ್ಹಗೊಂಡಿರುವ ಶಾಸಕರಲ್ಲಿ ಒಬ್ಬರಿಗೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಒಂದು ಸ್ಥಾನವನ್ನು ಕರಾವಳಿ ಭಾಗಕ್ಕೆ ಮೀಸಲಿಡಲಾಗುತ್ತದೆ. ಆ ಮೂಲಕ ಎಲ್ಲರನ್ನೂ ತೃಪ್ತಗೊಳಿಸುವ ಯತ್ನ ಮಾಡಲಾಗುತ್ತಿದೆ.
ಸಚಿವ ಸ್ಥಾನಕ್ಕೆ ಹಾತೊರೆಯುತ್ತಿದ್ದಾರೆ ಅನರ್ಹರು
ಅನರ್ಹ ಶಾಸಕರಲ್ಲಿ ಎಲ್ಲರೂ ಸಚಿವ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ. ಅವರಿಗೆ ಖಾತೆ ಹಂಚಿಕೆ ಮಾಡುವ ಸಮಯದಲ್ಲಿ ಬಿಜೆಪಿಯಲ್ಲಿ ಆಂತರಿಕ ಗೊಂದಲ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಹಾಗಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಬಿಜೆಪಿ ತೆಗೆದುಕೊಳ್ಳುತ್ತಿದೆ. ಐದು ಡಿಸಿಎಂ ಹುದ್ದೆ ಸೃಷ್ಟಿಸುವುದೂ ಒಂದಾಗಿದೆ.