ಧನಂಜಯ್ ಕುಮಾರ್, ಬಸವರಾಜ್ ಅತಂತ್ರ!
ಹಳೆಯ ಎಲ್ಲಾ ನೋವುಗಳನ್ನು ಮರೆತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿದ್ದಾರೆ. ಅವರ ಜೊತೆಗೆ ಕೆಜೆಪಿಯಲ್ಲಿದ್ದ ಕೆಲವು ನಾಯಕರು ಕಮಲ ಪಕ್ಷಕ್ಕೆ ಮರಳಿದ್ದಾರೆ. ಆದರೆ, ಕೆಜೆಪಿ ಪಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ವಿ.ಧನಂಜಯ್ ಕುಮಾರ್ ಮತ್ತು ತುಮಕೂರು ಸಂಸದ ಜಿ.ಎಸ್.ಬಸವರಾಜ್ ಅವರ ಸ್ಥಿತಿ ಅತಂತ್ರವಾಗಿದೆ.[ಯಡಿಯೂರಪ್ಪ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದೇನು]
ಧನಂಜಯ್ ಕುಮಾರ್ ಮತ್ತು ಬಸವರಾಜ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮೇಲೆ ತೀವ್ರವಾದ ವಾಗ್ದಾಳಿ ನಡೆಸಿದ್ದರು. ಅದರ ನೆನಪು ಬಿಜೆಪಿ ನಾಯಕರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದ್ದು, ಆದ್ದರಿಂದ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಧನಂಜಯ್ ಕುಮಾರ್ ಸೇರ್ಪಡೆಗೆ ಅಡ್ವಾಣಿ ಒಪ್ಪಬೇಕು]
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿದ ಬಳಿಕ ಗುರುವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಧನಂಜಯ್ ಕುಮಾರ್ ಮತ್ತು ಬಸವರಾಜ್ ಅವರ ಬಗ್ಗೆ ಚರ್ಚೆಗಳು ನಡೆದಿವೆ. ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಈ ಇಬ್ಬರು ನಾಯಕರು ಪುನಃ ಪಕ್ಷಕ್ಕೆ ಮರಳುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದ್ದ ಸಂದರ್ಭದಲ್ಲಿ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಇತರ ರಾಷ್ಟ್ರೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿ ಅಡ್ವಾಣಿ ವಿರೋಧ ಕಟ್ಟಿಕೊಂಡಿದ್ದರು. ಈ ಹೇಳಿಕೆ ರಾಜ್ಯದ ಬಿಜೆಪಿ ನಾಯಕರ ಕೆಂಗಣ್ಣಿಗೂ ಗುರಿಯಾಗಿತ್ತು. [ಧನಂಜಯ್ ಕಿಕ್ ಬ್ಯಾಕ್ ಕಿರಿಕ್]
ಲೋಕ ಸಭೆಯಲ್ಲಿ ಯಾವುದಾದರೂ ವಿಷಯದ ಕುರಿತು ಚರ್ಚೆ ನಡೆಯುವ ವೇಳೆ ಮಾತನಾಡಲು ಮುಂದಾಗುವ ಕರ್ನಾಟಕದ ಸಂಸದರಿಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವಕಾಶ ನೀಡುವುದಿಲ್ಲ ಎಂದು ಸಂಸದ ಜಿ.ಎಸ್. ಬಸವರಾಜು ಗಂಭೀರ ಆರೋಪ ಮಾಡಿದ್ದರು. ಇದು ಸಹ ರಾಜ್ಯದ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಉಭಯ ನಾಯಕರ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲವನ್ನು ಮರೆತು ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಆದರೆ, ಅವರ ಇಬ್ಬರು ಬೆಂಬಲಿಗರ ಸ್ಥಿತಿ ಮಾತ್ರ ಈಗ ಅತಂತ್ರವಾಗಿ ಯಡಿಯೂರಪ್ಪ ರಾಜ್ಯ ನಾಯಕರ ಮನವೊಲಿಸಿ ಧನಂಜಯ್ ಕುಮಾರ್ ಮತ್ತು ಬಸವರಾಜ್ ಅವರ ಸೇರ್ಪಡೆಗೆ ವೇದಿಕೆ ಸಿದ್ಧಗೊಳಿಸುತ್ತಾರೆಯೇ?