ಪ್ರಕಾಶ್ ರೈಗೆ 'ಶಿವರಾಮ ಕಾರಂತ ಪ್ರಶಸ್ತಿ' ನೀಡದಂತೆ ಬಿಜೆಪಿ ಮನವಿ
ಬೆಂಗಳೂರು, ಅಕ್ಟೋಬರ್ 5: ಬಹುಭಾಷಾ ನಟ ಪ್ರಕಾಶ್ ರೈಗೆ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ' ನೀಡುತ್ತಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿವರ್ಷದಂತೆ ಈ ವರ್ಷ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ'ಯನ್ನು ನಟ ಪ್ರಕಾಶ್ ರೈಗೆ ಘೋಷಣೆ ಮಾಡಲಾಗಿತ್ತು. ಉಡುಪಿಯ ಕೋಟದಲ್ಲಿರುವ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಮತ್ತು ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಈ ಪ್ರಶಸ್ತಿ ನೀಡುತ್ತದೆ.
ಇತ್ತೀಚೆಗೆ ಡಿವೈಎಫ್ಐ 11ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಪ್ರಕಾಶ್ ರೈ, 'ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ನನಗಿಂತ ದೊಡ್ಡ ನಟರು' ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
ಇದರಿಂದ ಕೆರಳಿರುವ ಬಿಜೆಪಿ ನಾಯಕರು ಇದೀಗ ಪ್ರಕಾಶ್ ರೈ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪ್ರಶಸ್ತಿ ನೀಡುತ್ತಿರುವ ಪ್ರತಿಷ್ಠಾನಕ್ಕೆ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ಆರ್.ಎಸ್.ಎಸ್ ಮತ್ತು ಬಿಜೆಪಿ ಒತ್ತಾಯಿಸಿದೆ.
ಅ. 10ರಂದು ಶಿವರಾಮ ಕಾರಂತರ ಹುಟ್ಟುಹಬ್ಬದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೋಟದಲ್ಲಿ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.