ಬಿಜೆಪಿ ಅಧಿಕಾರಕ್ಕೆ ಬಂದರೂ ನಿಂತಿಲ್ಲ ಆಪರೇಷನ್ ಕಮಲ?
ಬೆಂಗಳೂರು, ಜುಲೈ 29: ಬಿಜೆಪಿಯು ಅಧಿಕಾರ ಹಿಡಿದರೂ ಸಹ ಆಪರೇಷನ್ ಕಮಲಕ್ಕೆ ಬ್ರೇಕ್ ಬಿದ್ದಿಲ್ಲ. ಕುಮಾರಸ್ವಾಮಿ ಅವರು ಇಂದು ಕಲಾಪದಲ್ಲಿ ಆಡಿದ ಮಾತು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.
ವಿಶ್ವಾಸಮತದ ವಿರುದ್ಧ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯು ಇನ್ನಾದರೂ ನಮ್ಮ ಶಾಸಕರ ಮೇಲೆ ಒತ್ತಡ ಹೇರುವುದು ಬಿಡಬೇಕು, ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ ಬಲವಂತ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ವಿಶ್ವಾಸಮತ ಯಾಚನೆ: ಯಡಿಯೂರಪ್ಪ ಹೂವಿನ ನಡಿಗೆ
ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಅನರ್ಹರಾಗಿರುವ 17 ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿರುವವರೇ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆ ಶಾಸಕರಿಗೆ ವಿಶೇಷ ವಿಮಾನ ನೀಡಿದ್ದು, ಹೋಟೆಲ್ ಬುಕ್ಕಿಂಗ್, ಶಾಸಕರ ಜೊತೆ ಕಾಣಿಸಿಕೊಂಡ ಬಿಜೆಪಿ ಮುಖಂಡರು, ಅವರುಗಳ ಪಿಎಗಳು ಇವೆಲ್ಲವೂ ಹದಿನೇಳು ಶಾಸಕರ ರಾಜೀನಾಮೆ ಆಪರೇಷನ್ ಕಮಲದಿಂದಾದದ್ದು ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತವೆ.
ಆದರೆ ಅಷ್ಟೆಲ್ಲಾ ಆಪರೇಷನ್ ಕಮಲ ಮಾಡಿ ಈಗ ಅಧಿಕಾರ ಹಿಡಿದಿದ್ದರೂ ಸಹ ಇನ್ನೂ ಆಪರೇಷನ್ ಕಮಲವನ್ನು ಬಿಜೆಪಿ ನಿಲ್ಲಿಸಿಲ್ಲ. ಕುಮಾರಸ್ವಾಮಿ ಅವರು ನೇರವಾಗಿ ಸದನದಲ್ಲಿ ಈ ಆರೋಪ ಮಾಡಿದ್ದಾರೆ.
ಅಲ್ಪ ಬಹುಮತ ಹೊಂದಿರುವ ಬಿಜೆಪಿ
ಪ್ರಸ್ತುತ ವಿಧಾನಸಭೆ ಸಂಖ್ಯಾಬಲದ ಪ್ರಕಾರ ಬಿಜೆಪಿಯು ಕೇವಲ ಬಹುಮತಕ್ಕಿಂತ ಕೇವಲ ಒಂದು ಸೀಟಷ್ಟೆ ಹೆಚ್ಚಿಗಿದೆ. ಈಗಿರುವ ಒಟ್ಟು ಸದಸ್ಯರ ಸಂಖ್ಯೆ ಪ್ರಕಾರ 105 ಬಹುಮತದ ಸಂಖ್ಯೆಯಾಗಿದ್ದು, ಬಿಜೆಪಿ ಬಳಿ ಪ್ರಸ್ತುತ 106 ಶಾಸಕರ ಬಲ ಇದೆ. ಇದರಲ್ಲಿ ಒಬ್ಬರು ಪಕ್ಷೇತರ ಶಾಸಕರಾಗಿದ್ದಾರೆ.
ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಆಪರೇಷನ್ ಕಮಲ
ಹಾಗಾಗಿ ಇನ್ನೂ ಕೆಲವು ಶಾಸಕರ ರಾಜೀನಾಮೆ ಕೊಡಿಸಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಂಡು ಹೆಚ್ಚು ಭದ್ರವಾಗುವ ಉಮೇದು ಬಿಜೆಪಿಗೆ ಇದೆ ಎನ್ನಲಾಗುತ್ತಿದೆ. ಅಷ್ಟೆ ಅಲ್ಲದೆ, ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿ ಉಂಟಾಗಿರುವ ಅಭದ್ರ ಭಾವದ ಲಾಭ ಪಡೆದುಕೊಂಡು ಬಿಜೆಪಿ ಪಾಳಯ ಗಟ್ಟಿಮಾಡಿಕೊಳ್ಳುವ ಜೊತೆಗೆ ಎದುರಾಳಿಗಳನ್ನು ಟೊಳ್ಳು ಮಾಡುವ ಉಮೇದು ಸಹ ಬಿಜೆಪಿ ಇದೆ ಹಾಗಾಗಿಯೇ ಆಪರೇಷನ್ ಕಮಲ ಮುಂದುವರೆದಿದೆ ಎನ್ನಲಾಗುತ್ತಿದೆ.
LIVE: ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ
ಜೆಡಿಎಸ್-ಕಾಂಗ್ರೆಸ್ ಶಾಸಕರ ಸಂಪರ್ಕ ಮಾಡುವ ಯತ್ನ
ಕೆಲವು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಇನ್ನೂ ಸಂಪರ್ಕ ಮಾಡುತ್ತಿರುವ ಬಿಜೆಪಿಯು ಅವರನ್ನು ರಾಜೀನಾಮೆ ಒತ್ತಾಯಿಸುತ್ತಿದೆ ಎನ್ನಲಾಗುತ್ತಿದೆ. ಜಿಟಿ.ದೇವೇಗೌಡ, ಅಂಜಲಿ ನಿಂಬಾಳ್ಕರ್, ವಿ.ಮುನಿಯಪ್ಪ ಇನ್ನೂ ಕೆಲವು ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ.
ಆಪರೇಷನ್ ಕಮಲದಿಂದ ಬಿಜೆಪಿಗೆ ಸಿಹಿ ನೀಡಿದೆ
ಆಪರೇಷನ್ ಕಮಲ ಬಿಜೆಪಿಗೆ ಎರಡೆರಡು ಬಾರಿ ಅಧಿಕಾರಗಳಿಸಿಕೊಟ್ಟಿದೆ. ಜೊತೆಗೆ ಬಿಜೆಪಿಗೆ ಕೆಟ್ಟ ಹೆಸರೂ ತಂದು ಕೊಟ್ಟಿದೆ. ಸದನದ ಕಲಾಪಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಇದೇ ಆಪರೇಷನ್ ವಿಷಯಕ್ಕೆ ಹಲವು ಬಾರಿ ಬಿಜೆಪಿಯನ್ನು ದೋಷಿ ಸ ಸ್ಥಾನದಲ್ಲಿ ನಿಲ್ಲಿಸಿವೆ.