ರಾಜ್ಯದಲ್ಲಿ ಚುನಾವಣೆ ಪರ್ವ: ಮತ್ತೆ ಮೌನಕ್ಕೆ ಶರಣಾದರೆ ಬಿಎಸ್ವೈ?
ಪ್ರಧಾನಿ ಮೋದಿ ಇತ್ತೀಚೆಗೆ ಸುತ್ತೂರು ಮಠದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ, ಮೋದಿಗೆ ಎಷ್ಟು ಜನಪ್ರಿಯತೆ ವ್ಯಕ್ತವಾಗಿತ್ತೋ ಅಷ್ಟೇ ಜನಪ್ರಿಯತೆ ಯಡಿಯೂರಪ್ಪನವರಿಗೂ ಇದೆ ಎನ್ನುವುದಕ್ಕೆ ಆ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ನುರಿತ ನಾವಿಕನಿಲ್ಲದ ದೋಣಿಯಂತಾಗಿರುವ ರಾಜ್ಯ ಬಿಜೆಪಿಯನ್ನು ದಡ ಸೇರಿಸಬಲ್ಲ 'ನಾವಿಕ' ಯಡಿಯೂರಪ್ಪ ಮಾತ್ರ ಎನ್ನುವ ಸತ್ಯ ಕೇಂದ್ರ ಬಿಜೆಪಿ ಮುಖಂಡರಿಗೂ ಅರಿವಿದ್ದರೂ ಈ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿರುವುದಂತೂ ಗ್ಯಾರಂಟಿ. (ಪಂಚಾಯತಿ ಚುನಾವಣೆಗೆ ಜೋಶಿಯೇ ಸಾರಥಿ)
ಮಹಾಲೆಕ್ಕ ಪರಿಶೋಧಕ (ಸಿಎಜಿ) ವರದಿ ಮತ್ತು ಹದಿನೈದಕ್ಕೂ ಹೆಚ್ಚು ಎಫ್ಐಆರ್ ಗಳನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ ರಾಜ್ಯ ಪ್ರವೇಶಕ್ಕೆ ಇದ್ದ ಎಲ್ಲಾ ತಡೆಗೋಡೆಗಳು ನಿವಾರಣೆಯಾಯಿತು ಎಂದೇ ಭಾವಿಸಲಾಗಿತ್ತು.
ಇದಕ್ಕೆ ಪೂರಕ ಎನ್ನುವಂತೆ ಮತ್ತೆ ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಿ, ಕಾರ್ಯಕರ್ತರನ್ನು ಭೇಟಿ ಮಾಡಿ ಹುರಿದುಂಬಿಸಲಾರಂಭಿಸಿದ್ದು. ಜೊತೆಗೆ, ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದ ಎನ್ನುವ ಹೇಳಿಕೆಯನ್ನು ಬಹಿರಂಗವಾಗಿ ನೀಡಿದ್ದರು ಕೂಡಾ.
ಆದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದೊಳಗಿನ ಕೆಲವು ಹಿರಿಯ ಮುಖಂಡರ ಕಾಲೆಳೆಯುವ ರಾಜಕೀಯ ಮುಂದುವರಿಯುತ್ತಿರುವುದರಿಂದ, ರಾಜ್ಯದ ಈ ಪ್ರಮುಖ ಚುನಾವಣಾ ಪರ್ವದ ವೇಳೆಯಲ್ಲಿ ಯಡಿಯೂರಪ್ಪ ಮತ್ತೆ ಸಿಟ್ಟಾಗಿದ್ದಾರೆ ಎನ್ನುವ ಸುದ್ದಿಯಿದೆ. (ಬಿಎಸ್ವೈಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಖಚಿತ)
ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಜೊತೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ವೇಳೆಯಲ್ಲಿ ಬಿಎಸ್ವೈ ಮತ್ತೆ ಸಿಟ್ಟಾಗಿರುವುದು ಪ್ರಮುಖವಾಗಿ ಕಾರ್ಯಕರ್ತರಲ್ಲಿ, ಬಿಜೆಪಿ ಮುಖಂಡರಲ್ಲೂ ಆತಂಕ ಹುಟ್ಟಿಸಿದೆ. ಏನಿರಬಹುದು ಯಡಿಯೂರಪ್ಪನವರ ಮುಂದಿನ ನಡೆ..
ಹೆಬ್ಬಾಳ ಮತ್ತು ಬೀದರ್ ಕ್ಷೇತ್ರ
ಕನಿಷ್ಠ ತನ್ನ ವಶದಲ್ಲಿದ್ದ ಹೆಬ್ಬಾಳ ಮತ್ತು ಬೀದರ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಆದ್ಯತೆ ಬಿಜೆಪಿಗೆ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆ ಪಂಚಾಯತಿ ಚುನಾವಣೆಯಲ್ಲೂ ತನ್ನ ಅಸ್ತಿತ್ವವನ್ನು ಮುಂದುವರಿಸುವುದು.
ಪಕ್ಷದಲ್ಲಿ ತಾನು ಮೂಲೆಗುಂಪು
ಆದರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಪದೇ ಪದೇ ತನ್ನ ಮಾತಿಗೆ ಬೆಲೆಯಿಲ್ಲದಂತಾಗಿರುವುದು, ಪಕ್ಷ ತನ್ನನ್ನು ಮೂಲೆಗುಂಪು ಮಾಡಲು ನೋಡುತ್ತಿದೆ ಎನ್ನುವ ಸಿಟ್ಟು/ನೋವು ಯಡಿಯೂರಪ್ಪನವರಿಗೆ ಚುನಾವಣೆಯ ಈ ಕಾಲದಲ್ಲಿ ಕಾಡುತ್ತಿರುವುದು ಬಿಜೆಪಿ ಪಾಲಿಗೆ ಒಳ್ಳೆ ಲಕ್ಷಣವಂತೂ ಅಲ್ಲವೇ ಅಲ್ಲ.
ಅಶೋಕ್, ಬಿಬಿಎಂಪಿ ಚುನಾವಣೆ
ಪ್ರಮುಖವಾಗಿ ಯಡಿಯೂರಪ್ಪ ವಿರೋಧಿ ಬಣದಲ್ಲಿ (ಎನ್ನಲಾಗುವ) ಕಾಣಿಸಿಕೊಳ್ಳುತ್ತಿರುವ ಅಶೋಕ್, ಪಕ್ಷವನ್ನು ಬಿಬಿಎಂಪಿ ಅಧಿಕಾರಕ್ಕೇರುಸುವಲ್ಲಿ ವಿಫಲವಾದ ನಂತರ, ಕೇಂದ್ರ ಮಟ್ಟದಲ್ಲಿ ಅಶೋಕ್ ತನ್ನ ಚಾರ್ಮ್ ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸತ್ಯ.
ಯಡಿಯೂರಪ್ಪ ಮೇಲುಗೈ ಸಾಧಿಸಬಾರದು
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಬಾರದು ಎನ್ನುವ ಗುಂಪು ಈಗಲೂ ಕಾರ್ಯಪ್ರವೃತ್ತರಾಗಿರುವುದರಿಂದ, ಅತ್ತ ಪಕ್ಷ ಹಿನ್ನಡೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕಾಂಗ್ರೆಸ್ ತನ್ನ ಸ್ಥಾನವನ್ನು ಭಲ ಪಡಿಸಿಕೊಳ್ಳುತ್ತಿದೆ.
ಸಿದ್ದರಾಮಯ್ಯ ಸರಕಾರ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ, ಎಷ್ಟೋ ಘಟನೆಗಳನ್ನು ಹಿಡಿದುಕೊಂಡು ಸರಕಾರದ ವಿರುದ್ದ ಹೋರಾಡಿ, ವಿಪಕ್ಷ ಸ್ಥಾನದ ಜವಾಬ್ದಾರಿಯನ್ನು ಮನದಟ್ಟು ಮಾಡುವ ಅವಕಾಶವನ್ನು ಬಿಜೆಪಿ ಕಳೆದುಕೊಂಡಿತ್ತು. ಜೆಡಿಎಸ್ ಇದರ ಉಪಯೋಗ ಪಡೆದುಕೊಂಡಿತ್ತು. ರಾಜ್ಯದಲ್ಲಿ ಅಧಿಕೃತ ವಿಪಕ್ಷ ಬಿಜೆಪಿಯೋ ಅಥವಾ ಜೆಡಿಎಸ್ ಪಕ್ಷವೋ ಎನ್ನುವ ಮಟ್ಟಿಗೆ ಬಿಜೆಪಿ ಮುಖಂಡರು ಉದಾಸೀನರಾಗಿದ್ದರು.
ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ
ಪಕ್ಷದ ಕೆಲವೊಂದು ಪ್ರಮುಖ ಕಾರ್ಯಕ್ರಮಕ್ಕೆ ಮಾತ್ರ ಹಾಜರಾಗುತ್ತಿರುವ ಯಡಿಯೂರಪ್ಪ, ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ಮುಂದುವರಿಯುವುದಕ್ಕೆ ಅವರ ಹೆಸರನ್ನು ಅನುಮೋದಿಸಿದ್ದರು. ಆದರೆ ಯಡಿಯೂರಪ್ಪ ತನ್ನ ನಿಜವಾದ ಶಕ್ತಿಯನ್ನು ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕಿದ ನಂತರ ಪ್ರದರ್ಶಿಸಬಹುದೇನೋ?
ಹುಟ್ಟು ಹೋರಾಟಗಾರ ಯಡಿಯೂರಪ್ಪ
ತನ್ನ ರಾಜಕೀಯ ಜೀವನದ ಇತಿಹಾಸದಿಂದ ಪಾಠ ಕಲಿತಿರುವ, ಹುಟ್ಟು ಹೋರಾಟಗಾರ, ಹಠಮಾರಿ ಸ್ವಭಾವದ ಯಡಿಯೂರಪ್ಪನವರ ಮುಂದಿನ ಹೆಜ್ಜೆ, ಬಿಜೆಪಿ ಪಾಲಿಗಂತೂ ಉಪಚುನಾವಣೆ ಮತ್ತು ಪಂಚಾಯತ್ ಚುನಾವಣೆಯ ಈ ಸಂದರ್ಭದಲ್ಲಿ ಅತ್ಯಂತ ನಿರ್ಣಾಯಕ.