ಪಿಎಸೈ ಮಲ್ಲಿಕಾರ್ಜುನ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾ
ಕಲಬುರಗಿ, ಫೆ 27: ರೌಡಿ ಶೀಟರ್ ಮುನ್ನಾ ದರ್ಬಾದರ್ ಜೊತೆಗಿನ ಗುಂಡಿನ ಕಾಳಗದಲ್ಲಿ ಅಸುನೀಗಿದ್ದ ಪಿಎಸೈ ಮಲ್ಲಿಕಾರ್ಜುನ ಬಂಡೆಯವರ ಮಕ್ಕಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದತ್ತುಪಡೆದುಕೊಂಡಿದ್ದಾರೆ.
ಹುತಾತ್ಮ ಬಂಡೆ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿಯ ಪೂರ್ಣ ಪ್ರಮಾಣದ ಶಿಕ್ಷಣದ ವೆಚ್ಚವನ್ನ ಬಿಜೆಪಿಯೇ ನೋಡಿಕೊಳ್ಳಲ್ಲಿದೆ ಎಂದು ಭರವಸೆ ನೀಡಿರುವ ಅಮಿತ್ ಶಾ, ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಪ್ರಸ್ತುತ ಮಾಸಿಕ ಕೇವಲ ಒಂದು ಸಾವಿರ ರೂಪಾಯಿಯನ್ನು ಕರ್ನಾಟಕ ಸರಕಾರ ಬಂಡೆ ಕುಟುಂಬಕ್ಕೆ ಪರಿಹಾರವಾಗಿ ನೀಡುತ್ತಿದೆ. ಜನವರಿ 8, 2014ರಂದು ರೌಡಿ ಮುನ್ನಾ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಬಂಡೆಯವರ ಎದೆಗೆ ಗುಂಡು ತಾಗಿತ್ತು. ಇದಾದ ಒಂದು ವಾರದ ನಂತರ ಮಲ್ಲಿಕಾರ್ಜುನ ಬಂಡೆ ಅಸುನೀಗಿದ್ದರು.
ಬಂಡೆ ಅಸುನೀಗಿದ ಸುಮಾರು ಎರಡೂವರೆ ವರ್ಷದ ನಂತರ ಇವರ ಪತ್ನಿಯೂ ಮೃತಪಟ್ಟಿದ್ದರು. ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ಅವರು, ಹಲವು ದಿನಗಳ ಕಾಲ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗಿರಲಿಲ್ಲ.
ಸೋಮವಾರದಂದು (ಫೆ 26) ESI ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುಭಾಷ್ ಗುತ್ತೇದಾರ್, ಬಂಡೆ ಮಕ್ಕಳ ಪರಿಸ್ಥಿತಿ ಮತ್ತು ಮಕ್ಕಳಿಗೆ ಶಿಕ್ಷಣಕ್ಕಾಗುತ್ತಿರುವ ಕಷ್ಟದ ಬಗ್ಗೆ ಅಮಿತ್ ಶಾಗೆ ವಿವರಿಸಿದ್ದರು.
ಶಾಸಕರ ವಿವರಣೆಯ ನಂತರ ಬಂಡೆಯವರ ಇಬ್ಬರೂ ಮಕ್ಕಳನ್ನು ಹತ್ತಿರಕ್ಕೆ ಕರೆಸಿಕೊಂಡ ಅಮಿತ್ ಶಾ, ಮಕ್ಕಳನ್ನು ಈ ಕೂಡಲೇ ದತ್ತುಪಡೆಯುವಂತೆ ಯಡಿಯೂರಪ್ಪನವರಿಗೆ ಸ್ಥಳದಲ್ಲೇ ಸೂಚಿಸಿದ್ದಾರೆ.
ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮುಂಬೈ ಮೂಲದ ರೌಡಿ, ಶಾರ್ಪ್ ಶೂಟರ್ ಮುನ್ನಾ, ನಗರದ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ. ಮಲ್ಲಿಕಾರ್ಜುನ ಬಂಡೆ ತಮ್ಮ ಸಿಬ್ಬಂದಿಗಳೊಂದಿಗೆ ಮುನ್ನಾನನ್ನು ಬಂಧಿಸಲು ಹೋಗಿದ್ದಾಗ ಮುನ್ನಾ, ಮಲ್ಲಿಕಾರ್ಜುನ ಬಂಡೆಯವರ ಮೇಲೆ ಗುಂಡಿನ ದಾಳಿ ನಡೆಸಿದ್ದ.
ಮುನ್ನಾ ಜೊತೆ ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಂಡೆಯವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದ ಒಂದು ವಾರದ ನಂತರ ಬಂಡೆ ಸಾವನ್ನಪ್ಪಿದ್ದರು.