ರಾಜ್ಯ ಸಚಿವ ಸಂಪುಟ ವಿಸ್ತರಣೆ? ಅಥವಾ ನಾಯಕತ್ವ ಬದಲಾವಣೆ?
ಬೆಂಗಳೂರು, ಆ. 22: ಗಣೇಶ ಹಬ್ಬಕ್ಕೆ ಶುಭಾಶಯ ವಿನಿಮಯ ರೂಪದಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ . ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ ಎರಡು ದಿನಗಳಿಂದ ಬಿಜೆಪಿಯಲ್ಲಿ ನಾಯಕರ ಭೇಟಿ, ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ಸಂಗ್ರಹಿಸಿ ಹಲವು ಸೂಚನೆಗಳನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
Recommended Video
ಸಿಎಂ ಯಡಿಯೂರಪ್ಪ ಗಣೇಶನಲ್ಲಿ ಕೇಳಿ ಕೊಂಡಿದ್ದೇನು?
ಇಂದು ಬೆಳಗ್ಗೆಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿ.ಎಲ್. ಸಂತೋಷ್ ಅವರು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಕಳಪೆ ಸಾಧನೆ ಮಾಡಿರುವ ಸಚಿವರಲ್ಲಿ ಈ ನಾಯಕರ ಭೇಟಿ ನಡುಕ ಹುಟ್ಟಿಸಿದೆ. ಸಂಪುಟ ವಿಸ್ತರಣೆ ನಡೆಯಲೇ ಬೇಕಾಗಿದೆ. ಆದರೆ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆ ಬದಲಿಗೆ, ಪುನರ್ ರಚೆನೆಗೆ ಒಲವು ತೋರಿದೆ ಎನ್ನಲಾಗ್ತಿದೆ. ಹೀಗಾಗಿ ಹಲವು ಸಚಿವರು ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
BSY ಭೇಟಿ ಮಾಡಿದ ಸಂತೋಷ್
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಪ್ರಮುಖವಾಗಿ ಇಬ್ಬರೂ ನಾಯಕರು ಎರಡು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಗಣೇಶ ಹಬ್ಬದ ಶುಭಾಶಯ ಹೇಳಲು ಹಾಗೂ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿರುವುದರಿಂದ ಆರೋಗ್ಯ ವಿಚಾರಿಸಲು ಬಿ.ಎಲ್. ಸಂತೋಷ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಹೈಕಮಾಂಡ್ ಕಳುಹಿಸಿದ್ದ ಸಂದೇಶವನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಂತೋಷ್ ಅವರು ತಿಳಿಸಿದ್ದಾರೆ. ಹಾಗೆ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಗಲಭೆ ಕುರಿತು ಸರ್ಕಾರ ಮುಂದೆನೂ ಮಾಡಬೇಕು ಎಂಬುದನ್ನು ಸಂತೋಷ್ ಸೂಚಿಸಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಆತ್ಮೀಯರೂ ಆಗಿರುವ ಬಿ.ಎಲ್. ಸಂತೋಷ್ ಅವರನ್ನು ಇಂದು ಮನೆಗೆ ಆಹ್ವಾನಿಸಿ ಹಬ್ಬದ ಶುಭಾಶಯ ಕೋರಲಾಯಿತು. ರಾಜ್ಯದ ಅಭಿವೃದ್ಧಿ, ಪಕ್ಷಸಂಘಟನೆ ಕುರಿತಂತೆ ಮಾತುಕತೆ ನಡೆಸಲಾಯಿತು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು ಎಂದಿದ್ದಾರೆ.
ಬೆಂಗಳೂರು ಗಲಭೆ
ಬೆಂಗಳೂರು ಗಲಭೆ ನಿರ್ವಹಣೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಿರೀಕ್ಷೆಯಂತೆ ರಾಜ್ಯ ಬಿಜೆಪಿ ಸರ್ಕಾರ ನಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇಡೀ ಪ್ರಕರಣ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ. ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಘಟನೆ ಪೂರ್ವನಿಯೋಜಿತ ಎಂದು ಹೇಳಿಕೆ ಕೊಟ್ಟಿದ್ದರು.
ಗಲಭೆ ಪೂರ್ವನಿಯೋಜಿತ ಎಂದಾಗಿದ್ದರೆ ಅದು ಗುಪ್ತಚರ ಇಲಾಖೆಗೆ ಯಾಕೆ ಗೊತ್ತಾಗಿರಲಿಲ್ಲ ಎಂದು ಕೇಂದ್ರ ಬಿಜೆಪಿ ಪ್ರಶ್ನೆ ಮಾಡಿತ್ತು. ಇದೇ ವಿಚಾರವಾಗಿ ನಿನ್ನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಕರೆಯಿಸಿ ಬಿ.ಎಲ್. ಸಂತೋಷ್ ಅವರು ಚರ್ಚೆ ನಡೆಸಿದ್ದರು. ಜೊತೆಗೆ ಗಲಭೆಕೋರರ ಮೇಲೆ ಕಠಿಣಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದರು.
ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ ವಿಚಾರವಾಗಿಯೂ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮಾಡಬೇಕೊ? ಅಥವಾ ಪುನರ್ ರಚನೆ ಮಾಡಬೇಕೊ ಎಂಬುದನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡಲು ಇಬ್ಬರೂ ನಾಯಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಮೊದಲು ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ.
ಯಾವುದೇ ಕಾರಣಕ್ಕೂ ಕಳಪೆ ಸಾಧನೆ ಮಾಡಿರುವ ಸಂಪುಟ ಸದಸ್ಯರನ್ನು ಮುಂದುವರಿಸುವುದಿಲ್ಲ ಎಂದು ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದೆ. ಹೀಗಾಗಿ ಸಂಪುಟ ಪುನರ್ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಹಾಗೇ ಮಾಡಿದಲ್ಲಿ ಹಲವು ಸಚಿವರಿಗೆ ಕೊಕ್ ಕೊಡುವುದು ಕೂಡ ಖಚಿತವಾಗಿದೆ. ಹಲವು ಸಚಿವರು ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
BLS ಭೇಟಿ ಮಾಡಿ ಸೋಮಣ್ಣ
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಮಾಹಿತಿ ಬೆನ್ನಲ್ಲಿಯೇ ಭೇಟಿ ಹಾಗೂ ಚರ್ಚೆ ಕುತೂಹಲ ಮೂಡಿಸಿದೆ. ಹೀಗಾಗಿ ಸೋಮಣ್ಣ ಭೇಟಿ ಮಹತ್ವ ಪಡೆದುಕೊಂಡಿದೆ.
ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಸಚಿವ ವಿ. ಸೋಮಣ್ಣ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಂಬುದು ಊಹಾಪೋಹ ಅಷ್ಟೆ ಎಂದಿದ್ದಾರೆ. ನಾಯಕತ್ವ ಬದಲಾವಣೆ ವಿಚಾರವೇ ಚರ್ಚೆಗೆ ಬಂದಿಲ್ಲ. ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರ ಮನೆಗೆ ಹೋಗಿ ಹಬ್ಬದ ಶುಭಾಶಯ ಹೇಳಿದ್ದೆ. ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ತುಂಬಾ ದಿನ ಆಗಿತ್ತು. ಹೀಗಾಗಿ ಇಂದು ಭೇಟಿ ಮಾಡಿದ್ದೇನೆ. ಸಂಪುಟ ಪುನಾರಚನೆ ವಿವಚಾರ ಸಿಎಂ ಯಡಿಯೂರಪ್ಪ ಅವರಿಗೆ ವಿಚಾರ ಎಂದಿದ್ದಾರೆ.