ಅಂಬರೀಶ್ ಪುತ್ರ ಬಿಜೆಪಿ ಸೇರ್ಪಡೆ: ಪರೋಕ್ಷವಾಗಿ ಒಪ್ಪಿಕೊಂಡ ಸಿ.ಟಿ.ರವಿ
ಬೆಂಗಳೂರು, ಮೇ 7: ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಸಕ್ರಿಯ ರಾಜಕಾರಣಕ್ಕೆ ಬರುವ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಲೇ ಇದೆ. ಬಿಜೆಪಿ ನಾಯಕರು ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಡುವಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.
ಶನಿವಾರ (ಮೇ 7) ಮಂಡ್ಯ ಜಿಲ್ಲೆಯ ಇಬ್ಬರು ಯುವ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ಸಂದೇಶ ನಾಗರಾಜ, ಮಂಡ್ಯದ ನಿವೃತ್ತ IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ಅಶೋಕ ಜಯರಾಂ ಅವರುಗಳು ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಆಪರೇಶನ್ ಕಮಲಕ್ಕೆ ಮೇ 7ರ ಮಹೂರ್ತ: 4 ಘಟಾನುಘಟಿಗಳು ಬಿಜೆಪಿಗೆ
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, "ಇನ್ನೂ ಬಹಳಷ್ಟು ಜನರು ಬಿಜೆಪಿಗೆ ಬರುವವರಿದ್ದಾರೆ, ಕಾದು ನೋಡಿ. ನಮ್ಮ ಮಿಷನ್ 150. ಇದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ"ಎಂದು ಹೇಳಿದರು.
ಮಂಡ್ಯದಲ್ಲಿ ಅಭಿಷೇಕ್ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸಿ.ಟಿ.ರವಿ, "ಮಂಡ್ಯ ಗೆಲ್ಲದೇ ಬಿಜೆಪಿಗೆ ಗೆಲುವೇ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ಬಿಜೆಪಿಯ ಭದ್ರಕೋಟೆಯಾಗುವುದು ನಿಶ್ಚಿತ"ಎಂದು ಹೇಳುವ ಮೂಲಕ, ಅಂಬರೀಷ್ ಪುತ್ರನ ಸೇರ್ಪಡೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
"ನಮ್ಮ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋತರು, ಬಾದಾಮಿಯಲ್ಲಿ ತಿಣುಕಾಡಿ ಗೆದ್ದರು. ಹಾಗಿದ್ದರೂ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಸುತ್ತಾಡಿಕೊಂಡಿದ್ದಾರೆ"ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
"ಕಾಂಗ್ರೆಸ್ಸಿನವರದ್ದು ಒಂದು ಕೆಟ್ಟ ಚಾಳಿಯಿದೆ, ಚುನಾವಣೆಯಲ್ಲಿ ಸೋತರೆ ಅದನ್ನು ಒಪ್ಪಿಕೊಳ್ಳುವುದಿಲ್ಲ, ಇವಿಎಂ ಮೇಲೆ ಗೂಬೆ ಕೂರಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ" ಎನ್ನುವ ಭವಿಷ್ಯವನ್ನು ಸಿ.ಟಿ.ರವಿ ನುಡಿದರು.