ಕೇಸ್ ಹಾಕಿದ ಕೇರಳ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು
ಬೆಂಗಳೂರು, ಜನವರಿ 24: ಪೌರತ್ವ ತಿದ್ದುಪಡಿ ಕಾಯ್ದೆ ಪರ ಇರುವ ಹಿಂದೂಗಳಿಗೆ ನೀರು ನೀಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಕ್ಕೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವ ಕೇರಳ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಶೋಭಾ, ತಾರತಮ್ಯ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಅದನ್ನು ಬಹಿರಂಗಪಡಿಸಿದ ತಮ್ಮ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಎಫ್ಐಆರ್
'ಚೆರುಕುನ್ನುದಲ್ಲಿ ದಲಿತ ಕುಟುಂಬದ ಮೇಲೆ ತಾರತಮ್ಯ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಅವರು ನನ್ನ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಅದಕ್ಷ ಮತ್ತು ಪಕ್ಷಪಾತಿ ಎಡ ಸರ್ಕಾರದ ಒತ್ತಡ ಹೇರುವ ತಂತ್ರದ ವಿರುದ್ಧ ಇಡೀ ಸಮಾಜ ಒಂದಾಗಲು ಇದು ಸೂಕ್ತ ಸಮಯ' ಎಂದು ಶೋಭಾ ಹೇಳಿದ್ದಾರೆ.
ಸತ್ಯ ಹೇಳಿದಕ್ಕೆ ಪ್ರಕರಣ
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ನ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿದೆ. ಆದರೆ ಸಿಎಎಯನ್ನು ಬೆಂಬಲಿಸುತ್ತಿರುವ ಜನರನ್ನು ವ್ಯವಹಾರಗಳಿಂದ ಬಹಿಷ್ಕರಿಸಲಾಗುತ್ತಿದೆ, ಮೂಲ ಸೌಕರ್ಯಗಳನ್ನು ಮತ್ತು ಉದ್ಯೋಗಗಳನ್ನು ನೀಡಲು ನಿರಾಕರಿಸಲಾಗುತ್ತಿದೆ. ಕೇರಳದಾದ್ಯಂತ ಈ ಕೃತ್ಯಗಳು ನಡೆಯುತ್ತಿದ್ದರೂ ಸಿಪಿಎಂ ಸರ್ಕಾರ ಕುರುಡಾಗಿದೆ. ಆದರೆ ಸತ್ಯ ಹೇಳಿರುವುದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಆರೋಪಿಸಿದ್ದಾರೆ.
ವ್ಯಾಪಾರಿಗೆ ಬಹಿಷ್ಕಾರ
ಕೇರಳದಲ್ಲಿ ಇತಿಹಾಸ ಮರುಕಳಿಸಲಿದೆಯೇ? ಕೊಲ್ಲಂನ ಓಚಿರಾದಲ್ಲಿನ ಪೊನ್ನಪ್ಪನ್ ಅವರು ಅಂಗಡಿಗಳಿಗೆ ಚಹಾ ಮತ್ತು ತಿನಿಸುಗಳನ್ನು ಪೂರೈಸುತ್ತಿದ್ದರು. ಫೇಸ್ಬುಕ್ನಲ್ಲಿ ಅವರು ಸಿಎಎ ಪರವಾಗಿ ಹೇಳಿಕೆ ನೀಡಿದ್ದಕ್ಕಾಗಿ ನಿರ್ದಿಷ್ಟ ಸಮುದಾಯವೊಂದರಿಂದ ಅವರು ಸಂಪೂರ್ಣ ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಈ ಅನ್ಯಾಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಅತ್ಯಾಚಾರ ಪ್ರಕರಣ: ಡಿಜಿಯನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ
ಸರ್ವಾಧಿಕಾರಿ ವರ್ತನೆ- ಸಿ.ಟಿ. ರವಿ
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ತೆಗೆದುಕೊಂಡ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸರ್ಕಾರದ ಮುಖ್ಯಸ್ಥರಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಬದಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.
ದಲಿತರಿಗೆ ನ್ಯಾಯ ಒದಗಿಸಿ
ಪಿಣರಾಯಿ ವಿಜಯನ್ ಅವರಿಗೆ ನಾಚಿಕೆಯಾಗಬೇಕು. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸುವ ಬದಲು ಅವರ ಸರ್ಕಾರ, ಸಿಎಎ ಪರ ಸಮಾವೇಶದಲ್ಲಿ ಭಾಗವಹಿಸಿದ್ದಕ್ಕೆ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರು ಕುಡಿಯುವ ನೀರು ಒದಗಿಸಲು ನಿರಾಕರಿಸಲಾಗುತ್ತಿರುವ ಚೆರುಕುನ್ನುದಲ್ಲಿನ ದಲಿತರಿಗೆ ನ್ಯಾಯ ಒದಗಿಸುವತ್ತ ಗಮನ ಹರಿಸಲಿ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಹೇಳಿದ್ದಾರೆ.