ಡ್ರೀಮ್ ಗರ್ಲ್ ಹೇಮಾಮಾಲಿನಿಯವರ ಹೆಲಿಕ್ಯಾಪ್ಟರ್ರು, ರೈತ ಮಹಿಳೆ ನಳಿನಿಗೌಡರ ಬುಲೆಟ್ಟು..!
ಬೆಂಗಳೂರು, ಮೇ 26: ಕೋಲಾರದಲ್ಲಿ ರೈತ ಮಹಿಳೆಯೊಬ್ಬರ ಮೇಲೆ ಸಚಿವ ಮಾಧುಸ್ವಾಮಿ ಅವರ 'Rascal ಪ್ರಕರಣ' ಟ್ವಿಸ್ಟ್ ಪಡೆದುಕೊಂಡಿದೆ. ಕಳೆದ ವಾರ ಕೋಲಾರ ತಾಲೂಕಿನ ಎಸ್. ಅಗ್ರಹಾರ ಕೆರೆ ವೀಕ್ಷಿಸಲು ಮಾಧುಸ್ವಾಮಿ ತೆರಳಿದ್ದರು, ಆಗ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎ. ನಳಿನಿ ಗೌಡ ತಮ್ಮ ಸಮಸ್ಯೆ ವಿವರಿಸುತ್ತಿದ್ದಾಗ ತಾಳ್ಮೆ ಕಳೆದುಕೊಂಡಿದ್ದ ಮಾಧುಸ್ವಾಮಿ ರಾಸ್ಕಲ್ ಎಂದು ಬೈದಿದ್ದರು.
ಅವರ ಹೇಳಿಕೆಯ ಪರ-ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆ ನಡೆದಿತ್ತು. ನಳಿನಿಗೌಡ ಅವರು ಬುಲೆಟ್ ಓಡಿಸಿದ್ದನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ಪ್ರಕರಣದಲ್ಲಿ ಲೋಕಸಭಾ ಸದಸ್ಯೆ, ಬಾಲಿವುಡ್ ಡ್ರೀಮ್ ಗರ್ಲ್ ಹೇಮಾಮಾಲಿನಿ ಅವರು ಪರೋಕ್ಷವಾಗಿ ಎಂಟ್ರಿ ಕೊಟ್ಟಿದ್ದಾರೆ!
ನಳಿನಿಗೌಡ ಪರ ಬ್ಯಾಟಿಂಗ್
ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ರೈತ ಮಹಿಳೆ ಎ. ನಳಿನಿ ಗೌಡ ಅವರಿಗೆ ರಾಸ್ಕಲ್ ಎಂದು ಬೈದಿದ್ದು ಸಾಮಾಜಿಕ ಜಾಲತಾಣದಲ್ಲಿ ತೀರಾ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯಾದ್ಯಂತ ರೈತ ಸಂಘಟನೆಗಳು ಹಾಗು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಮಾಧುಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಹಿಳೆಯನ್ನು ನಿಂದಿಸಿದರೆ ಕ್ಷಮಿಸಲು ಸಾಧ್ಯವಿಲ್ಲ: ಸಚಿವ ಮಾಧುಸ್ವಾಮಿ ವಿರುದ್ಧ ಸಿಎಂ ಗರಂ
ಅದಾದ ಬಳಿಕ ಸಿಎಂ ಯಡಿಯೂರಪ್ಪ ಎಚ್ಚರಿಕೆ ಕೊಟ್ಟ ಬಳಿಕ, ಮಾಧುಸ್ವಾಮಿ ಅವರು ವಿಷಾದ ವ್ಯಕ್ತಪಡಿಸುವುದರೊಂದಿಗೆ ಪ್ರಕರಣ ಮುಕ್ತಾಯವಾಗಬೇಕಿತ್ತು. ಆದರೆ ಹಾಗಾಗಲಿಲ್ಲ.
ಮಾಧುಸ್ವಾಮಿ ಬೆಂಬಲಿಗರಿಂದ
ಇಡೀ ಪ್ರಕರಣದಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ರೀತಿಯಲ್ಲಿ ಮುಜುಗರವುಂಟಾಗಿತ್ತು. ವಿಧಾನಸಭೆ ಕಲಾಪದಲ್ಲಿ ಸರ್ಕಾರವನ್ನು ಇಕ್ಕಟ್ಟಿನಿಂದ ಪಾರು ಮಾಡುವ, ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಮಾಧುಸ್ವಾಮಿ ಅವರಿಗೆ ಮುಜುಗರವಾಗಿದ್ದು ಅವರ ಬೆಂಬಲಿಗರಿಗೆ ಸರಿ ಕಂಡಿರಲಿಕ್ಕಿಲ್ಲ.
ಹೀಗಾಗಿ ಎ. ನಳಿನಿ ಗೌಡ ಅವರು ರೈತ ಮಹಿಳೆಯೆ ಅಲ್ಲ. ಇಲ್ಲಿ ನೋಡಿ ರೈತ ಮಹಿಳೆ ಸ್ಕೂಟಿ ಓಡಿಸುತ್ತಿದ್ದಾರೆ. ಬುಲೆಟ್ ಬೈಕ್ನ್ನು ಓಡಿಸುತ್ತಿದ್ದಾರೆ. ಜೊತೆಗೆ ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ ಗುರುತಿಸಿ ಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಳಿನಿಗೌಡ ಅವರ ಫೋಟೊಗಳನ್ನು ಟ್ರೋಲ್ ಮಾಡಿದ್ದರು. ಜೊತೆಗೆ ಅವರು ರಾಜಕೀಯ ಪಕ್ಷವೊಂದರ ಕಾರ್ಯಕರ್ತೆ ಎಂದು ಆರೋಪಿಸಿದ್ದರು.
ಬುಲೆಟ್ ಓಡಿಸಬಾರದಾ?
ಹೀಗಾಗಿ ಸಚಿವ ಮಾಧುಸ್ವಾಮಿ ಹಾಗೂ ಬಿಜೆಪಿ ಬೆಂಬಲಿಗರ ಮೇಲೆ ರೈತ ಮಹಿಳೆಯ ಪರವಾಗಿ ನೆಟ್ಟಿಗರು ತಿರುಗಿ ಬಿದ್ದರು. ಮಾಧುಸ್ವಾಮಿಯವರು ಬೈದ ಹೆಣ್ಣುಮಗಳು ಸ್ಕೂಟಿಯಲ್ಲಿ ಕುಳಿತಿರುವ ಒಂದೆರಡು ಫೋಟೊಗಳನ್ನು ಶೇರ್ ಮಾಡಿಕೊಂಡು "ನೋಡ್ರೋ ರೈತ ಮಗಳ ಸ್ಟೈಲು. ಇವ್ಳಿಗೋಸ್ಕರ ಪಾಪ ನಮ್ ಮಾದಪ್ಪುನ್ ಬೋದ್ರಲ್ಲಪ್ಪಾ..." ಎಂದು ಪೋಸ್ಟ್ ಶೇರ್ ಮಾಡುತ್ತಿರುವ FB, ವಾಟ್ಸಾಪ್ ಯೂನಿವರ್ಸಿಟಿಯ ಕಾಯಂ ವಿದ್ಯಾರ್ಥಿಗಳಿಗೆ ಹಾಗೂ ಅದನ್ನು ಪೋಸ್ಟ್ ಮಾಡಿದವರನ್ನು ಕೇಳಬೇಕಿರುವ ಪ್ರಶ್ನೆ, ರೈತ ಮಹಿಳೆ ಸ್ಕೂಟಿ ಓಡಿಸಬಾರದಾ...? ಸನ್ ಗ್ಲಾಸ್ ತೊಡಬಾರದಾ...? ಶೋಕಿ ಮಾಡಬಾರದಾ...? ನಿಮ್ಮ ಹೊಟ್ಟೆ ತುಂಬಿಸಲು ಹರಕಲು ಬಟ್ಟೆ ತೊಟ್ಟುಕೊಂಡು ಇಪ್ಪತ್ತನಾಲ್ಕು ಗಂಟೆಯೂ ಗದ್ದೆ ತೋಟ ಗೇಯುತ್ತಿರಬೇಕಾ...? ಎಂದು ಪ್ರಶ್ನೆ ಮಾಡಿದ್ದರು.
ಜೊತೆಗೆ ಬಿಜೆಪಿ ಸಂಸದೆ, ಬಾಲಿವುಡ್ ಡ್ರೀಮ್ ಗರ್ಲ್ ಹೇಮಾಮಾಲಿನ ಅವರ ಉದಾಹರಣೆ ಕೊಟ್ಟು ಭರ್ಜರಿಯಾಗಿಯೆ ಸಚಿವ ಮಾಧುಸ್ವಾಮಿ ಅವರ ಬೆಂಬಲಿಗರ ಕಾಲೆಳೆದಿದ್ದರು.
ಹೆಲಿಕ್ಯಾಪ್ಟರ್ನಲ್ಲಿ ಹೇಮಾಮಾಲಿನಿ!
ರಾಸ್ಕಲ್ ಪ್ರಕರಣವೀಗ ನಟಿ ಹೇಮಾಮಾಲಿನಿ ಅವರನ್ನು ಎಳೆದು ತರುವಲ್ಲಿಗೆ ಬಂದು ನಿಂತಿದೆ. ಕಳೆದ ಲೋಕಸಭಾ ಚುನಾವಣೆ (2019) ಸಂದರ್ಭದಲ್ಲಿ ಹೇಮಾಮಾಲಿನಿ ಅವರು ಹೆಲಿಕ್ಯಾಪ್ಟರ್ನಲ್ಲಿ ತೆರಳಿ ಗೋಧಿ ಕಟಾವಿನಲ್ಲಿ ಭಾಗವಹಿಸಿದ್ದರು.
ಅದನ್ನು ಉಪಯೋಗಿಸಿಕೊಂಡು ಕಾಲೆಳೆದಿರುವ ನೆಟ್ಟಿಗರು, ಅಯ್ಯೋ ನಳಿನಿ ಗೌಡ್ರೇ, ಪ್ರಧಾನಿ ನರೇಂದ್ರ ಮೋದಿ ಅವರ ಗವರ್ನಮೆಂಟ್ ಆಡಳಿತದಲ್ಲಿ ರೈತ ಮಹಿಳೆಯರು ಜರತಾರಿ ಸೀರೆ ಉಟ್ಟು, ಮೇಕಪ್ ಮಾಡ್ಕೊಂಡು, ಹೆಲಿಕಾಪ್ಟರ್ನಲ್ಲಿ ಬಂದು ಹೊಲದ ಕೆಲಸ ಮಾಡಿ ಹೋಗ್ತಾ ಇದ್ದಾರೆ. ನೀವಿನ್ನೂ ಬುಲೆಟ್ ಬಿಡ್ತಾ ಇದ್ದೀರಲ್ರೀ? ಎಂದು ಬಿಜೆಪಿ ಬೆಂಬಲಿಗರ ಕಾಲೆಳೆದಿದ್ದಾರೆ.