ಸಿಎಂ ಕುಟುಂಬದ ವಿರುದ್ದ ಕಿಕ್ ಬ್ಯಾಕ್ ಆರೋಪ: 10% ಅಂದರೆ ಎಷ್ಟಾಯಿತು?
ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಮುಳ್ಳಿನ ಮೇಲಿನ ನಡಿಗೆ ಮುಂದುವರಿಯುತ್ತಲೇ ಇದೆ. ನಿರಾಳವಾಗಿ ಅವರು ರಾಜ್ಯಭಾರ ನಡೆಸಿದ ದಿನಗಳೇ ಇಲ್ಲ ಎನ್ನುವುದು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿರುವ ಮಾತು.
ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ವೇಳೆ, ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ನಡೆಯಬಹುದು ಎನ್ನುವ ಭಿನ್ನರ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆದರೂ, ಭಿನ್ನರೊಬ್ಬರು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ನಾಯಕತ್ವ ಬದಲಾವಣೆ: ಉಸ್ಸಪ್ಪಾ ಎನ್ನುವಷ್ಟರಲ್ಲಿ ಬಿಎಸ್ವೈಗೆ ಮತ್ತೆ ಆತಂಕ
ದೈನಂದಿನ ಆಡಳಿತದಲ್ಲಿ ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಸ್ತಕ್ಷೇಪವೇ ಎಲ್ಲಾ ಈಗಿನ ತೊಂದರೆಗಳಿಗೆ ಕಾರಣ ಎನ್ನುವ ಮಾತು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಈ ವಿಚಾರದಲ್ಲಿ ಹಲವು ಬಾರಿ ಅಸಮಾಧಾನ ವ್ಯಕ್ತ ಪಡಿಸಿದ್ದುಂಟು.
'ಅವರ' ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಲಿದೆ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್!
ಈಗ, ಬಾಂಬೆ ಫ್ರೆಂಡ್ಸ್ ತಂಡದಲ್ಲಿ ಮಂಚೂಣಿಯಲ್ಲಿದ್ದ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿಗಳ ಕುಟುಂಬದ ವಿರುದ್ದ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ. ಇದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ.
ಬಿಎಸ್ವೈ ಪುತ್ರ ವಿಜಯೇಂದ್ರ ಪ್ರತಿಯೊಂದು ಇಲಾಖೆಯಲ್ಲೂ ಹಸ್ತಕ್ಷೇಪ
ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಪ್ರತಿಯೊಂದು ಇಲಾಖೆಯಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದ್ದು, ಇದರಲ್ಲಿ ಶೇ.10ರಷ್ಟು ಕಮಿಷನ್ ವಿಜಯೇಂದ್ರ ಪಡೆದಿದ್ದಾರೆ" ಎಂದು ಎಚ್.ವಿಶ್ವನಾಥ್ ಗಂಭೀರ ಆರೋಪವನ್ನು ಮಾಡಿದ್ದರು.
200 ಕೋಟಿ ರೂಪಾಯಿಯನ್ನು ಕಿಕ್ ಬ್ಯಾಕ್, ವಿಶ್ವನಾಥ್ ಗಂಭೀರ ಆರೋಪ
ಭದ್ರಾ ಮೇಲ್ದಂಡೆ ಕಾಮಗಾರಿಗೆ ಇಪ್ಪತ್ತು ಸಾವಿರ ಕೋಟಿ ರೂಪಾಯಿಯ ಟೆಂಡರ್ ಅನ್ನು ಕರೆಯಲಾಗಿತ್ತು. ಇದರಲ್ಲಿ ಹತ್ತು ಪರ್ಸೆಂಟ್ ಅಂದರೆ ಇನ್ನೂರು ಕೋಟಿ ರೂಪಾಯಿಯನ್ನು ಕಿಕ್ ಬ್ಯಾಕ್ ರೂಪದಲ್ಲಿ ವಿಜಯೇಂದ್ರ ಪಡೆದಿದ್ದಾರೆ ಎನ್ನುವುದು ಎಚ್.ವಿಶ್ವನಾಥ್ ಅವರ ಗಂಭೀರ ಆರೋಪವಾಗಿದೆ.
|
ಮುಖ್ಯಮಂತ್ರಿಗಳು ಈಗ ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲಿ
ಸ್ವಪಕ್ಷೀಯರೇ ಮಾಡಿರುವ ಆರೋಪ ಈಗ ವಿರೋಧ ಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿದೆ. "ಮುಖ್ಯಮಂತ್ರಿಗಳು ಈಗ ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲಿ. ರಾಕ್ಷಸ ಸರ್ಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರ್ಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಸಿಎಂ @BSYBJP 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು"ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Recommended Video
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತನಿಖೆಗೆ ಒತ್ತಾಯ
"ಈಗಿನ @BJP4Karnataka ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ಶಾಸಕ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ' ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.