ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕಷ್ಟ ಅನುಭವಿಸುವುದು ಇನ್ನೂ ಬೇಕಾದಷ್ಟಿದೆ
ಬೆಂಗಳೂರು, ಡಿ 4: ಇದು ರಾಮನಗರ ಜಿಲ್ಲೆಯ ರಾಜಕೀಯ. ಇಲ್ಲಿ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ನಡುವೆ ಯಾವಾಗಲೂ ಜಿದ್ದಾಜಿದ್ದಿನ ರಾಜಕೀಯ ನಡೆಯುತ್ತಲೇ ಇರುತ್ತದೆ. ಒಬ್ಬರ ವಿರುದ್ದ ಇನ್ನೊಬ್ಬರು ತಿರುಗಿಬೀಳುತ್ತಲೇ ಇರುತ್ತಾರೆ.
ಸಚಿವಸ್ಥಾನದ ಆಸೆಯಲ್ಲಿರುವ ಬಿಜೆಪಿಯ ವಿಧಾನಪರಿಷತ್ ಸದಸ್ಯ ಯೋಗೇಶ್ವರ್ ಇಂದು ಎಚ್ಡಿಕೆ ಮತ್ತು ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ. "ಕುಮಾರಸ್ವಾಮಿಯವರು ಅಧಿಕಾರ ಕಳೆದುಕೊಂಡು ನೊಂದು ಹೋಗಿದ್ದಾರೆ. ನನ್ನ ವಿರುದ್ದ ಅವರು ಮತ್ತು ಶಿವಕುಮಾರ್ ಏನಾದರೂ ಮಸಲತ್ತು ನಡೆಸುತ್ತಲೇ ಇರುತ್ತಾರೆ"ಎಂದು ಸಿಪಿವೈ ಹೇಳಿದರು.
ಎಚ್.ವಿಶ್ವನಾಥ್ ವಿರುದ್ದ ಪಿಐಎಲ್: ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಸಾ.ರಾ.ಮಹೇಶ್ ಹೇಳಿಕೆ
"ಕುಮಾರಸ್ವಾಮಿಯವರು ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಕೊಂಡು ಹೋಗುತ್ತಿದ್ದಾರೆ. ಭೇಟಿಯಾಗಿರುವುದು ಅಭಿವೃದ್ದಿ ಕೆಲಸಕ್ಕೆ ಎಂದು ಹೇಳುತ್ತಿದ್ದಾರೆ. ಭೇಟಿಯಾಗಿ ಕೆಲಸ ಮಾಡಿಸಿಕೊಂಡು ಹೋಗಲಿ ಬಿಡಿ"ಎಂದು ಯೋಗೇಶ್ವರ್ ಹೇಳಿದರು.
"ಕುಮಾರಸ್ವಾಮಿಯವರಿಗೆ ಅಧಿಕಾರವಿಲ್ಲದೇ ಕಷ್ಟದಲ್ಲಿದ್ದಾರೆ, ಇವರು ಮತ್ತು ಡಿ.ಕೆ.ಶಿವಕುಮಾರ್ ಅವರು ಇನ್ನೂ ಕಷ್ಟ ಪಡುವುದು ಬೇಕಾದಷ್ಟಿದೆ. ನಾವೇನೂ ಮಾಡಲು ಸಾಧ್ಯವಿಲ್ಲ"ಎಂದು ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದರು.
"ನಾನು ಈ ಹಿಂದೆನೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ನಾನು ಸಚಿವ ಸ್ಥಾನಕ್ಕಾಗಿ ದಂಬಾಲು ಬೀಳುವವನಲ್ಲ. ಪಕ್ಷ ಏನಾದರೂ ಹುದ್ದೆ ಕೊಡುತ್ತೆ ಎಂದರೆ, ಅದನ್ನು ನಿರಾಕರಿಸಲು ಸಾಧ್ಯವೇ"ಎಂದು ಯೋಗೇಶ್ವರ್ ಪ್ರಶ್ನಿಸಿದ್ದಾರೆ.
Recommended Video
"ಚನ್ನಪಟ್ಟಣಕ್ಕೆ ನಾನೇ ಸರಕಾರ, ಮುಖ್ಯಮಂತ್ರಿ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಅವರು ತಮ್ಮನ್ನು ಆ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿದರೆ ನಾವೇನು ಮಾಡಲು ಸಾಧ್ಯ. ಡಿ.ಕೆ.ಶಿವಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಹತಾಶೆಯಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ. ಯಾಕೆ ಅವರು ಹೀಗೆ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುವುದಿಲ್ಲ"ಎಂದು ಯೋಗೇಶ್ವರ್ ಹೇಳಿದರು.