ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ ವಿರುದ್ಧ ಮಾನನಷ್ಟ ಮೊಕದ್ದಮೆ
ಬೆಂಗಳೂರು, ಜುಲೈ 19: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 15ನೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಶಾಸಕರ ಖರೀದಿ ವಿಚಾರ ಧುತ್ತೆಂದು ಹೊರ ಬಂದು ಭಾರಿ ಗದ್ದಲಕ್ಕೆ ಕಾರಣವಾಯಿತು. ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, 'ಶಾಸಕರ ಖರೀದಿಗೆ ಬಿಜೆಪಿ ಕೋಟ್ಯಂತರ ರುಪಾಯಿ ಸುರಿದಿದೆ, ನನಗೂ ಆಫರ್ ಬಂದಿತ್ತು' ಎಂದು ಬಾಂಬ್ ಸಿಡಿಸಿದರು. ಶ್ರೀನಿವಾಸ ಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಹೇಳಿದೆ
Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್
"ಶಾಸಕರನ್ನು ವಿರೋಧ ಪಕ್ಷದವರು ಖರೀದಿ ಮಾಡ್ತಾರೆ" ಎಂದು ಸಿಎಂ ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಹೇಳುತ್ತಿದ್ದಂತೆ ಎದ್ದುನಿಂತ ಶ್ರೀನಿವಾಸ ಗೌಡ ಅವರು, "ನನ್ನನ್ನು 5 ಕೋಟಿ ನೀಡಿ ಖರೀದಿಸಲು ಮುಂದಾಗಿದ್ದರು" ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.
ವಿಶ್ವಾಸಮತ LIVE: ಕಲಾಪ ಮುಂದೂಡಿಕೆ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್
ಶ್ರೀನಿವಾಸ್ ಅವರ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರು ಒಮ್ಮೆಗೆ ಎದ್ದು ನಿಂತು ಪ್ರತಿಕ್ರಿಯೆ ಮಾತನಾಡಲು ಆರಂಭಿಸುತ್ತಿದ್ದಂತೆ, ಪರಸ್ಪರ ಕೆಸರೆರಚಾಟ ಶುರುವಾಯಿತು. ಈ ನಡುವೆ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, 'ಪ್ರಾಮಾಣಿಕತೆ ಎಲ್ಲೂ ಇಲ್ಲ. ಹೊಟ್ಟೆಗೆ ಏನು ತಿನ್ನುತ್ತೀರಾ? ಗೌರವಯುತವಾಗಿ ಬದುಕೋ ನನ್ನ ಸಾಯಿಸೋಕೆ ಹೊರಟಿದ್ದೀರಲ್ಲ,ನಿಮ್ಮೊಳಗಿನ ಹೊಲಸೆಲ್ಲ ಹೊರಬರಲಿ, ನಿಮ್ಮ ಸ್ವಾರ್ಥಕ್ಕೆ ನಾನು ಯಾಕೆ ಸಾಯ್ಲಿ' ಎಂದು ಗರಂ ಆದರು.
ಮಾತು ಮುಂದುವರೆಸಿದ ಶ್ರೀನಿವಾಸ್ ಗೌಡ ಮಾತು ಮುಂದುವರೆಸಿ, 'ಬಿಜೆಪಿ ನಾಯಕರಾದ ಅಶ್ವಥ್ ನಾರಾಯಣ್, ವಿಶ್ವನಾಥ್, ಯೋಗೀಶ್ವರ್ ಅವರ ಹೆಸರನ್ನು ಹೇಳಿ, ಮೂವರು ನನ್ನ ಮನೆಗೆ ಬಂದು 5 ಕೋಟಿ ರು ಆಫರ್ ನೀಡಿದರು, ಆದರೆ, ನಾನು ನಿರಾಕರಿಸಿದೆ' ಎಂದರು. ಶ್ರೀನಿವಾಸ್ ಗೌಡ ಅವರ ಆರೋಪವನ್ನು ಅಲ್ಲಗೆಳೆದ ಬಿಜೆಪಿ ಶಾಸಕರು, ಶ್ರೀನಿವಾಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
28 ಕೋಟಿ ರೂಪಾಯಿ ಬಿಜೆಪಿ ಹಣಕ್ಕೆ ಸೇಲ್ ಆದರಾ ಎಚ್.ವಿಶ್ವನಾಥ್?
"ಒಬ್ಬೊಬ್ಬ ಶಾಸಕನಿಗೆ 30 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ, ಇದು ಬೀದಿಯಲ್ಲಿ ಮಾತಾಡೋ ಹಾಗಿಲ್ಲ, ಇದು ಸತ್ಯ" ಎಂದು ನಂತರ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಹೇಳಿದರು. ಇದಾದ ಬಳಿಕ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ರೆಬೆಲ್ ಶಾಸಕರ ಗುಂಪಿನ ಮುಂದಾಳತ್ವ ವಹಿಸಿಕೊಂಡು, ಮುಂಬೈನಲ್ಲಿರುವ ಎಚ್. ವಿಶ್ವನಾಥ್ ಅವರನ್ನು ಬಿಜೆಪಿ ಖರೀದಿ ಮಾಡಿದೆ ಎಂದು ಸಚಿವ ಸಾ.ರಾ ಮಹೇಶ್ ಆರೋಪಿಸಿದರು. ಸದನದಲ್ಲಿ ಶಾಸಕರ ಕುದುರೆ ವ್ಯಾಪಾರದ ಗಲಾಟೆ ನಡುವೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆಯಾಗಿದೆ.