ಅರುಣ್ ಸಿಂಗ್ಗೆ ದೂರು; ಬಿಎಸ್ವೈ ವಿರುದ್ಧದ 5 ಆರೋಪಗಳು!
ಬೆಂಗಳೂರು, ಜೂನ್ 16; ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಯಾಗಿ ರಾಜ್ಯಕ್ಕೆ ಆಗಮಿಸಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ಉಸ್ತುವಾರಿ ಆಗಮನ ಕುತೂಹಲ ಹುಟ್ಟುಹಾಕಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರದ ಕಾರ್ಯವೈಖರಿ ಮತ್ತು ಕೆಲವು ಸಚಿವ ವಿರುದ್ಧ ಅರುಣ್ ಸಿಂಗ್ಗೆ ದೂರು ಕೊಡಲು ಹಲವು ಶಾಸಕರು ತಯಾರಾಗಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹಾಗಾದರೆ ಯಡಿಯೂರಪ್ಪ ವಿರುದ್ಧದ ಆರೋಪಗಳೇನು? ಎಂಬುದು ಚರ್ಚೆಯ ವಿಷಯ.
ರಾಜ್ಯಕ್ಕೆ ಅರುಣ್ ಸಿಂಗ್; ಜೂನ್ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ
ಯಡಿಯೂರಪ್ಪ ಪರವಾಗಿ ನಿಲ್ಲಲು ಸಹ ಶಾಸಕರ ತಂಡ ಸಿದ್ಧವಾಗಿದೆ. ಮೂರು ದಿನಗಳ ಕಾಲ ಕರ್ನಾಟಕ ಬಿಜೆಪಿ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ. ಸಚಿವರು, ಶಾಸಕರ ಜೊತೆ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ.
ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ
ಜೂನ್ 18ರಂದು ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಈಗಾಗಲೇ ಅರುಣ್ ಸಿಂಗ್ ಕಳೆದ ವಾರ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ; ನಾಯಕತ್ವ ಬದಲಾವಣೆ ಕುರಿತು ಬಿಎಸ್ವೈ ಮಾತು
ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ
ಯಡಿಯೂರಪ್ಪ ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪ ನಡೆಯುತ್ತಿದೆ ಎಂಬುದು ಕೆಲವು ಶಾಸಕರ ಗಂಭೀರ ಆರೋಪವಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಈ ಕುರಿತು ಈಗಾಗಲೇ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಯಡಿಯೂರಪ್ಪ ಪುತ್ರ ಮತ್ತು ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪವಿದ್ದು, ಈ ಕುರಿತು ಅರುಣ್ ಸಿಂಗ್ಗೆ ದೂರು ನೀಡಲಾಗುತ್ತದೆ.
ಸಮನ್ವಯದ ಕೊರತೆ ಇದು
ಮುಖ್ಯಮಂತ್ರಿಗಳು ಮತ್ತು ಸಚಿವರು ಹಾಗೂ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯದ ಕೊರತೆ ಇದೆ. ತಮ್ಮದೇ ಪಕ್ಷದ ಸರ್ಕಾರವಿದ್ದರೂ ಶಾಸಕರ ಕೈಗೆ ಹಲವು ಸಚಿವರು ಸಿಗುತ್ತಿಲ್ಲ ಎಂಬುದು ಪ್ರಮುಖವಾದ ಆರೋಪ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸಿಗುತ್ತಿದೆ ಎಂಬುದು ಆರೋಪವಾಗಿದ್ದು ಈ ಕುರಿತು ಅರುಣ್ ಸಿಂಗ್ಗೆ ಶಾಸಕರು ವಿವರಣೆ ನೀಡುವ ಸಾಧ್ಯತೆ ಇದೆ.
ಸುತ್ತಮುತ್ತಲಿನವರ ಮಾತು ಕೇಳುತ್ತಾರೆ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಸುತ್ತ ಇರುವ ಆಪ್ತರ ಮಾತನ್ನು ಮಾತ್ರ ಕೇಳುತ್ತಾರೆ. ತಮ್ಮ ಮಾತು, ಸಲಹೆಗಳನ್ನು ಪರಿಗಣಿಸುವುದಿಲ್ಲ ಎಂದು ಶಾಸಕರ ನಿಯೋಗ ಆರೋಪವನ್ನು ಮಾಡುತ್ತಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಂದೆ ಈ ಕುರಿತು ತಮ್ಮ ವಾದವನ್ನು ಮಂಡನೆ ಮಾಡಲು ಮುಂದಾಗಿದೆ.
ಜೆಡಿಎಸ್, ಕಾಂಗ್ರೆಸ್ ನಾಯಕರ ಸಂಪರ್ಕ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಆಪ್ತವಾಗಿದ್ದಾರೆ. ಅಡ್ಜೆಸ್ಟ್ಮೆಂಟ್ ರಾಜಕೀಯವನ್ನು ಮಾಡುತ್ತಿದ್ದಾರೆ ಎಂಬುದು ಹಲವು ಶಾಸಕರ ದೂರು. ಮುಂದೆ ಚುನಾವಣೆ ಎದುರಾಗುವ ಹಿನ್ನಲೆಯಲ್ಲಿ ಈ ಕುರಿತು ಅರುಣ್ ಸಿಂಗ್ಗೆ ದೂರು ನೀಡುವ ಸಾಧ್ಯತೆ ಇದೆ.
Recommended Video
ನಾಯಕತ್ವ ಬದಲಾವಣೆ ಆಗಬೇಕು
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡಬೇಕು. ಚುನಾವಣೆಯಲ್ಲಿ ಗೆದ್ದು ಸಂಪೂರ್ಣ ಬಹುಮತ ಪಡೆಯಬೇಕಾದರೆ ಈಗಲೇ ನಾಯಕತ್ವ ಬದಲಾವಣೆಯಾಗಬೇಕು ಎಂಬುದು ಕೆಲವು ಶಾಸಕರ ಅಭಿಪ್ರಾಯ. ಇದನ್ನು ಸಹ ಅರುಣ್ ಸಿಂಗ್ ಮುಂದೆ ವಿವರಿಸಲು ಶಾಸಕರು ಸಿದ್ಧರಾಗಿದ್ದಾರೆ.