ಕೊರೊನಾ ಸಾವಿಗೆ ಕೊಟ್ಟಂತೆ ಮಂಗನ ಕಾಯಿಲೆಯಿಂದ ಸತ್ತವರಿಗೂ ಪರಿಹಾರ ಕೊಡಿ
ಬೆಂಗಳೂರು, ಮಾ. 16: ಕಾಡಂಚಿನ ಜಿಲ್ಲೆಗಳ ಜನರ ಪ್ರಾಣವನ್ನು ಕರೊನಾಗಿಂತ ಹೆಚ್ಚಾಗಿ ಮಂಗನ ಕಾಯಿಲೆ ತೆಗೆದುಕೊಳ್ಳುತ್ತಿದೆ ಎಂದು ಬಿಜೆಪಿ ಶಾಸಕರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ವೈರಸ್ಗೆ ಬಲಿಯಾಗುವವರಿಗೆ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ಕೊಡುವಂತೆ, ಮಂಗನ ಕಾಯಿಲೆ ಎಂದು ಕರೆಯುವ ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್ಡಿ) ಯಿಂದ ಮೃತಪಟ್ಟವರಿಗು 4 ಲಕ್ಷ ರೂ. ಪರಿಹಾರ ಕೊಡಬೇಕೆಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹಿಂದೆ ಮೈತ್ರಿ ಸರ್ಕಾರವಿದ್ದಾಗ ಮಂಗನ ಕಾಯಿಲೆ ತಡೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು, ಆದರೆ ಇದೀಗ ಬಿಜೆಪಿ ಸರ್ಕಾರದಲ್ಲಿ ಸೂಕ್ತ ಲಸಿಕೆಗಳನ್ನು ಕೂಡ ಹಾಕುತ್ತಿಲ್ಲ. ಆರೋಗ್ಯ ಇಲಾಖೆಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಬಿಜೆಪಿ ಸದಸ್ಯರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಳ್ಳು ಉತ್ತರ ಕೊಟ್ಟರೆ ಹೊಟ್ಟೆ ಉರಿಯಲ್ವಾ?
ಸುಳ್ಳು ಉತ್ತರ ಕೊಟ್ಟರೆ ಹೊಟ್ಟೆ ಉರಿಯಲ್ವಾ ಅಂತಾ ಶಾಸಕ ಹಾಲಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಹಾಲಪ್ಪ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, ರಾಜ್ಯದಲ್ಲಿ ಈ ವರಗೆ 445 ಜನರಿಗೆ ಮಂಗನಕಾಯಿಲೆ ಸೋಂಕು ತಗುಲಿದ್ದು 15 ಸಾವು ಸಂಭವಿಸಿದೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಡಿಸಿದ ಶಾಸಕರಾದ ಅರಗ ಜ್ಞಾನೇಂದ್ರ ಹಾಗೂ ಹಾಲಪ್ಪ ಅವರು, ಇದುವರೆಗೆ 23 ಜನ ಸತ್ತಿದ್ದಾರೆ. ನಿಮಗೆ ತಪ್ಪು ಮಾಹಿತಿ ಕೊಟ್ಟಿರುವ ಅಧಿಕಾರಿ ಅಧಿಕಾರಿಗಳಿಗೆ, ಅವರ ಮಕ್ಕಳಿಗೆ ಮಂಗನ ಕಾಯಿಲೆ ಬಂದು ಸಾಯಬೇಕು. ಆಗ ಅವರಿಗೆ ಗೊತ್ತಾಗುತ್ತದೆ. ನಾನು ಎಷ್ಟು ಸಲ ಅಂತ ಅಧಿಕಾರಿಗಳ ಕಚೇರಿಗೆ ಹೋಗೋದು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಾವಿನ ಕೂಪ
ಅಧಿಕಾರಿಗಳ ನಿರ್ಲಕ್ಷದಿಂದ ಜನರು ಸಾಯುತ್ತಿದ್ದಾರೆ. ಮೃತಪಟ್ಟವರ ಕುಟುಂಬ ವರ್ಗದವರು ಏನು ಮಾಡಬೇಕು? ಎಂದು ಹಾಲಪ್ಪ ಅವರು ಮತ್ತೆ ಪ್ರಶ್ನೆ ಮಾಡಿದ್ರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಾವಿನ ಕೂಪವಾಗಿದೆ. ಸೋಂಕು ತಗುಲಿದವರನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿದ್ದೇ ಸಾವಿಗೆ ಕಾರಣವಾಯ್ತು. ಮೃತಪಟ್ಟ ನಂತರ ಪೋಸ್ಟ್ ಮಾರ್ಟಂ ಮಾಡುವುದಿರಲಿ ಮೃತದೇಹವನ್ನು ಅವರೇ ಹಾಕಿಕೊಂಡು ಹೋಗಿದ್ದ ಲುಂಗಿಯಲ್ಲಿಮುಚ್ಚಿ ಕಳುಹಿಸಿದ್ದಾರೆ. ಆರೋಗ್ಯ ಇಲಾಖೆ ಸತ್ತು ಹೋಗಿದೆ. ಕಳೆದ ವರ್ಷ ಐಸಿಯು ಸಹಿತ ಆಂಬುಲೆನ್ಸ್ ನಿಯೋಜಿಸಿದ್ದರು. ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಿದ್ದರು ಎಂದು ಹಿಂದಿನ ಮೈತ್ರಿ ಸರ್ಕಾರ ಕೈಗೊಂಡಿದ್ದರು ಎಂದು ಶಾಸಕ ಹಾಲಪ್ಪ ಅವರು ತೀವ್ರವಾಗಿ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ರು.
ಕಳೆದ ವರ್ಷ ವ್ಯಾಕ್ಸಿನೇಷನ್ ಮಾಡಲಾಗಿತ್ತು
ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರು, ಕಳೆದ ವರ್ಷ ಎಲ್ಲರಿಗೂ ಲಸಿಕೆ ಹಾಕಲಾಗಿತ್ತು. ಈ ಬಾರಿ ಮಾಡಿಲ್ಲ. ಹೊಸ ಪರಿಣಾಮ ಕಾರಿ ಔಷಧ ಕಂಡು ಹಿಡಿಯುವ ಪ್ರಯತ್ನ ಮಾಡಬೇಕು. ಕಳೆದ ಬಾರಿ ಲ್ಯಾಬ್ ಮಾಡೋಕೆ ಐದು ಕೋಟಿ ರೂ. ಗಳನ್ನು ಕೊಡಲಾಗಿತ್ತು. ಆದರೆ ಇನ್ನೂ ಲ್ಯಾಬ್ ನಿರ್ಮಾಣ ಮಾಡಿಲ್ಲ ಎಂದರು.
ಶಾಸಕರ ಸಭೆ ಕರೆಯುತ್ತೇನೆ ಎಂದು ಶ್ರೀರಾಮುಲು
ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸೂಕ್ತವಾಗಿ ಕೆಲಸ ಮಾಡಿರದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಸದನಕ್ಕೆ ಉತ್ತರ ಕೊಟ್ಟರು. ಜೊತೆಗೆ ಆ ಭಾಗದ ಶಾಸಕರೊಂದಿಗೆ ಉಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡುತ್ತೇವೆ. ಅಗತ್ಯ ಔಷಧಗಳನ್ನು ಸರಬರಾಜು ಮಾಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚನೆ ಕೊಡುತ್ತೇನೆ. ಸಚಿವರಾದ ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನವನ್ನು ಆರೋಗ್ಯ ಸಚಿವ ಶ್ರೀರಾಮುಲು ಮಾಡಿದ್ರು.