ನಾಯಕತ್ವ ಬದಲಾವಣೆ: ಹೈಕಮಾಂಡ್ ಭೇಟಿಗೆ ಶಾಸಕರ ನಿರ್ಧಾರ?
ಬೆಂಗಳೂರು, ಸೆ. 11: ಕೊರೊನಾ ಕುರಿತು ಜನರಲ್ಲಿ ಭಯ ಕಡಿಮೆಯಾಗುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಮತ್ತೆ ಗರಿಗೆದರಿದ ಮಾಹಿತಿ ಬರುತ್ತಿದೆ. ಕಳೆದ ಮಾರ್ಚ್ ತಿಂಗಳಿನಿಂದ ಸ್ಥಗಿತವಾಗಿದ್ದ ರಾಜಕೀಯ ಮೇಲಾಟ ಮತ್ತೆ ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಸಮಾನ ಮನಸ್ಕ ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆ ಹಾಗೂ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತಿದೆ.
ಹೀಗಾಗಿ ಹೈಕಮಾಂಡ್ ಭೇಟಿ ಮಾಡಲು ಸಮಾನ ಮನಸ್ಕ ಶಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲೀಗ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಶುರುವಾಗಿದೆ ಎಂಬ ಮಾಹಿತಿಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಒಂದು ವರ್ಷ ಪೂರೈಸಿದಾಗ ಸಚಿವ ಸಂಪುಟ ವಿಸ್ತರಣೆ ಬದಲಿಗೆ ಪುನಾರಚನೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬಂದಿದ್ದವು.
ಶೀಘ್ರ ದೆಹಲಿಗೆ ತೆರಳಲಿದ್ದೇನೆ: ಮುಖ್ಯಮಂತ್ರಿ ಯಡಿಯೂರಪ್ಪ
ಇದೇ ಕಾರಣದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ನಿಗಮ ಮಂಡಳಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇಮಕ ಮಾಡುವ ಮೂಲಕ ಶಾಸಕರ ಅಸಮಾಧಾನ ತಣಿಸಲು ಪ್ರಯತ್ನಿಸಿದ್ದರು. ಆದರೆ ಹಲವು ಆಪ್ತ ಶಾಸಕರೂ ಸೇರಿದಂತೆ ನಾಲ್ಕೈದು ಜನರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿ ಬೇರೆಯದ್ದೆ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
ಶಾಸಕರ ಅಸಮಾಧಾನ
ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ರಾಜ್ಯ ಬಿಜೆಪಿ ಶಾಸಕರ ಅಸಮಾಧಾನ ತಣಿಸಲಾಗಿದೆ ಎನ್ನಲಾಗಿತ್ತು. ಆದರೆ, ಶಾಸಕರ ಮನಸ್ಸಿನಲ್ಲಿ ಬೇರೆಯದ್ದೆ ಆಲೋಚನೆಯಿದೆ ಎಂಬ ಮಾಹಿತಿ ಇದೀಗ ಸಿಗುತ್ತಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಾಮೂಹಿಕ ನಾಯಕತ್ವದ ಸೂತ್ರ ತರಲು ಇದು ಸಕಾಲ ಎಂಬ ತೀರ್ಮಾನಕ್ಕೆ ಪ್ರಮುಖ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಸಮಾನ ಮನಸ್ಕ ಶಾಸಕರು ಹಲವು ಪ್ರತ್ಯೇಕ ಸಭೆಗಳನ್ನು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ್ದಾರೆ. ಭೋಜನಕೂಟದ ನೆಪದಲ್ಲಿ ನಡೆದ ಈ ಸಭೆಗಳ ಉದ್ದೇಶ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ನಡೆಸಿರುವ ಪ್ರಯತ್ನ ಎಂದೇ ಹೇಳಲಾಗಿದೆ. ಪ್ರಯತ್ನ ನಡೆಸಿರುವವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕ ಭಾಗದ ಶಾಸಕರಾಗಿದ್ದಾರೆ ಎಂಬುದು ಬಿಜೆಪಿ ವಲಯದಿಂದಲೇ ಕೇಳಿ ಬಂದಿರುವ ಮಾಹಿತಿ.
ಬಿಜೆಪಿ ಅಲಿಖಿತ ನಿಯಮ
ಈಗ ಇದ್ದಂತೆಯೆ ರಾಜ್ಯ ಸರ್ಕಾರ ಮುಂದುವರಿದರೆ ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಸಾಧ್ಯವಿಲ್ಲ. ಸಿಎಂ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ವರಿಷ್ಠ ನಾಯಕರು ಎಂದು ಬಿಜೆಪಿಯೆ ಎಲ್ಲ ಶಾಸಕರಲ್ಲಿಯೂ ಒಪ್ಪಿಗೆ ಇದೆ. ಆದರೆ ಅವರನ್ನು ಪೂರ್ಣಾವಧಿಗೆ ಮುಂದುವರಿಸಿದರೆ ಹೊಸ ನಾಯಕತ್ವಕ್ಕೆ ಅದು ಅಡ್ಡಿಯಾಗಲಿದೆ.
ಪಕ್ಷದ ಇಮೇಜ್ ಗೆ ಹಾನಿ, ದುಡ್ಡೂ ಪೋಲು: ಬಿಎಸ್ವೈ ಸರಕಾರದ ಬ್ಯಾಡ್ ಡಿಶಿಷನ್
ಮುಂದಿನ ಚುನಾವಣೆ ವೇಳೆಗೆ ಸಿಎಂ ಯಡಿಯೂರಪ್ಪ ಅವರು 80 ವರ್ಷ ದಾಟಲಿದ್ದಾರೆ. ಹೀಗಾಗಿ ಮತ್ತೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಲು ಆಗುವುದಿಲ್ಲ. ಜೊತೆಗೆ 75 ವರ್ಷ ಮೀರಿದವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನು ಮತ್ತೆ ಬಿಜೆಪಿ ಹೈಕಮಾಂಡ್ ತಾನೇ ಮುರಿದಂತಾಗುತ್ತದೆ. ಅದು ಉಳಿದ ರಾಜ್ಯಗಳು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕ ಅಸಮಾಧಾನಕ್ಕೂ ಕಾರಣವಾಗಬಹುದು. ಸಧ್ಯ 75 ವರ್ಷ ಮೀರಿದರೂ ಬಿಜೆಪಿಯಲ್ಲಿ ಅಧಿಕಾರದಲ್ಲಿರುವುದು ಕರ್ನಾಟಕದ ಸಿಎಂ ಯಡಿಯೂರಪ್ಪ ಅವರೊಬ್ಬರು ಮಾತ್ರ. ಹೀಗಾಗಿ ಮುಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಸಿಎಂ ಸ್ಥಾನದಲ್ಲಿ ಮುಂದುವರೆಸಲು ಹೈಕಮಾಂಡ್ ಕೂಡ ಒಪ್ಪುವ ಸಾಧ್ಯತೆಗಳು ಇಲ್ಲ.
ಚುನಾವಣೆ ಬಳಿಕ ಬದಲಾವಣೆ
ಅದರೊಂದಿಗೆ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಗೆ ತೆರಳಿ ಫಲಿತಾಂಶದ ಬಳಿಕ ಬೇರೊಬ್ಬರನ್ನು ಆಯ್ಕೆ ಮಾಡುವುದು ಸಾಧುವಲ್ಲ. ಹಾಗೆ ಮಾಡಿದರೆ ಮತದಾರರು, ಪಕ್ಷದ ಕಾರ್ಯಕರ್ತರೂ ಗೊಂದಲಕ್ಕೆ ಸಿಲುಕುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗಿರುವುದರಿಂದ ಹಾಲಿ ಅವಧಿಯಲ್ಲೇ ಹೊಸ ನಾಯಕರ ಆಯ್ಕೆಯಾಗಬೇಕು. ಪರ್ಯಾಯ ನಾಯಕರನ್ನು ಗುರುತಿಸಬೇಕೆಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ.
ಜತೆಗೆ ಎಲ್ಲರನ್ನೂ ಸಮನ್ವಯದಿಂದ ಕರೆದುಕೊಂಡು ಹೋಗುವಂಥವರಿಗೆ ಜವಾಬ್ದಾರಿ ನೀಡ ಬೇಕು. ನಾಯಕತ್ವದ ಹೊಣೆ ವಹಿಸಿಕೊಂಡವರಿಗೆ ಸಾಮರ್ಥ್ಯ ರುಜುವಾತು ಪಡಿಸಲು ಕನಿಷ್ಠ 2 ವರ್ಷ ಕಾಲಾವಕಾಶ ಸಿಕ್ಕಿದರೆ ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ. ಇದರಿಂದ ಪಕ್ಷದ ಭವಿಷ್ಯವೂ ಗಟ್ಟಿಯಾಗಲಿದೆ ಎಂಬ ಪ್ರತಿಪಾದನೆ ಶಾಸಕರ ವಲಯದಲ್ಲಿ ಕೇಳಿ ಬಂದಿದೆ.
ಬಿಎಸ್ವೈ ಇಲ್ಲದ ಬಿಜೆಪಿ
ಸಿಎಂ ಯಡಿಯೂರಪ್ಪ ಅವರ ಹೊರತಾದ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಆವರಿಸಲಿದೆ ಎನ್ನುವುದು ಶಾಸಕರಿಗೂ ತಿಳಿದಿರುವ ವಿಚಾರವೇ. ಆದರೆ, ವಯಸ್ಸಿನ ಕಾರಣದಿಂದ ಇನ್ನು ಮುಂದೆ ಆಡಳಿತಾತ್ಮಕ ಚಟುವಟಿಕೆಯಲ್ಲಿ ಸಕ್ರಿಯರಾಗುವುದು ಯಡಿಯೂರಪ್ಪ ಅವರಿಗೆ ಕಷ್ಟವಾಗಬಹುದು. ಹಾಗಾದ ಸಂದರ್ಭದಲ್ಲಿ ಆಪ್ತರು ಹಸ್ತಕ್ಷೇಪ ಮಾಡಬಹುದು. ಯಡಿಯೂರಪ್ಪ ಅವರ ಉತ್ತರಾಧಿಕಾರಿ ತಾವೆಂದು ಬಿಂಬಿಸಿಕೊಳ್ಳಲು ಆ ಮೂಲಕ ಪಕ್ಷದ ಮೇಲೆ, ಶಾಸಕರ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಬಹುದು ಎಂಬ ಆತಂಕ ಕೆಲವು ಶಾಸಕರಲ್ಲಿ ಮೂಡಿದೆ.
ಶಾಸಕಾಂಗ ಪಕ್ಷದ ಸಭೆಗೆ ಆಗ್ರಹ?
ವಿಧಾನ ಮಂಡಲ ಅಧಿವೇಶನಕ್ಕೆ 15 ದಿನ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಬೇಕೆಂದು ಶಾಸಕರು ಆಗ್ರಹಿಸಿದ್ದರು. ಆದರೀಗ ಶಾಸಕಾಂಗ ಸಭೆ ನಡೆ ಸುವ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಸರ್ಕಾರದ ಮುಖ್ಯಸ್ಥರಿಂದ ಶಾಸಕರು ನಿರೀಕ್ಷಿಸುತ್ತಿಲ್ಲ. ಹೀಗಾಗಿ ತಮ್ಮೆಲ್ಲಾ ಅಹವಾಲು, ಅಸಮಾಧಾನ, ಅನುದಾನ, ಅಭಿವೃದ್ಧಿ ಅಡ್ಡಿ ಆತಂಕಗಳನ್ನು ನೇರವಾಗಿ ಹೈಕಮಾಂಡ್ ತಿಳಿಸುವ ಪ್ರಯತ್ನವನ್ನು ಬಿಜೆಪಿ ಶಾಸಕರು ನಡೆಸಿದ್ದಾರೆ.
Recommended Video
ಅಧಿವೇಶನದ ವೇಳೆ ಭೋಜನಕೂಟ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಳೆಗಾಲದ ಅಧಿವೇಶನದ ಸಂದರ್ಭದಲ್ಲಿ ಮತ್ತಷ್ಟು ಬೋಜನ ಕೂಟಗಳು ನಡೆಯಲಿವೆ. ಬಜೆಟ್ ಅಧಿವೇಶನದ ವೇಳೆ ಭೋಜನಕೂಟದ ನೆಪದಲ್ಲಿ ಉತ್ತರ ಕರ್ನಾಟಕದ ಭಾಗದ ಶಾಸಕರು, ಲಿಂಗಾಯತ ಪ್ರಮುಖ ನಾಯಕರು ನಡೆಸುತ್ತಿದ್ದ ನಾಯಕತ್ವ ಬದಲಾವಣೆ ಚೆರ್ಚೆ ಮಳೆಗಾಲದ ಅಧಿವೇಶನದ ವೇಳೆ ಬಹುತೇಕ ಸ್ವಷ್ಟ ರೂಪ ಪಡೆದುಕೊಳ್ಳಲಿದೆ.
ಅಲ್ಲದೆ ಅಧಿವೇಶನ ಮುಗಿದ ಬಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವ ಹಾಗೂ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿಯಗಳನ್ನು ಭೇಟಿ ಮಾಡಲು ಸಮಯಾವಕಾಶ ಪಡೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬಂದಿದೆ.