ಡಿಸಿಎಂ ಹುದ್ದೆ ರದ್ದು ವಿಚಾರ ಕಟೀಲ್ ಭೇಟಿ ಮಾಡಿದ ರೇಣುಕಾಚಾರ್ಯ
ಬೆಂಗಳೂರು, ಡಿ. 18: ರಾಜ್ಯ ಬಿಜೆಪಿ ಸರ್ಕಾರದಲ್ಲಿರುವ ಮೂರು ಡಿಸಿಎಂ ಹುದ್ದೆಗಳನ್ನ ರದ್ದು ಮಾಡುವಂತೆ ಬಿಜೆಪಿ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.
ಇಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬೇಟಿ ಮಾಡಿದ್ದ ರೇಣುಕಾಚಾರ್ಯ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಕಟೀಲ್ ಭೇಟಿ ಬಳಿಕ ರೇಣುಕಾಚಾರ್ಯ ಹೇಳಿಕೆ ರಾಜ್ಯದ ಬಿಜೆಪಿ ಕಾರ್ಯಕರ್ತರ, ಲೋಕಸಭಾ ಸದಸ್ಯರ, ಶಾಸಕರ ಅಭಿಪ್ರಾಯವನ್ನು ನಾನು ರಾಜ್ಯಾಧ್ಯಕ್ಷರ ಮುಂದೆ ಇಟ್ಟಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಬಳಿಕ ರೇಣುಕಾಚಾರ್ಯ ಹೇಳಿದರು. ರಾಜ್ಯಾಧ್ಯಕ್ಷರ ಜೊತೆ ಏನು ಮಾತಾಡಿದ್ದೇನೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಬಹಳ ಉತ್ತಮವಾದ ಮಾತುಕತೆ ನಡೆದಿದೆ ಅಂತಾ ರೇಣುಕಾಚಾರ್ಯ ತಿಳಿಸಿದರು.
ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ನೋಡೋಣ. ಪಕ್ಷದ ಕಾರ್ಯಕರ್ತನಾಗಿ ನನ್ನ ಮನಸ್ಸಿನ ಅಭಿಪ್ರಾಯ ಅಧ್ಯಕ್ಷರಿಗೆ ಹೇಳಿದ್ದೇನೆ. ನನಗೆ ಸಂಘಟನೆ ಹೊಸದಲ್ಲ. ಪಕ್ಷ ನನ್ನ ತಾಯಿ ಸಮಾನ, ನನ್ನ ಉಸಿರು ಇದ್ದಂತೆ. ನಮ್ಮ ಶಾಸಕರಿಗೆ ಇದನ್ನು ಹೇಳಲು ಆಗುತ್ತಿಲ್ಲ. ಆದರೆ ನಾನು ಕಾರ್ಯಕರ್ತನಾಗಿ ಅಭಿಪ್ರಾಯ ತಿಳಿಸಿದ್ದೇನೆಂದು ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.
ನಿನ್ನೆಯೂ ಇದೇ ರೀತಿ ಹೇಳಿಕೆಯನ್ನು ರೇಣುಕಾಚಾರ್ಯ ಕೊಟ್ಟಿದ್ದರು. ಇವತ್ತು ರಾಜ್ಯಾಧ್ಯಕ್ಷರನ್ನ ಭೇಟಿ ಮಾಡಿ ಒತ್ತಾಯ ಮಾಡಿರುವುದು ಡಿಸಿಎಂಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಜೊತೆಗೆ ಚುನಾವಣೆಯಲ್ಲಿ ಗೆದ್ದಿದ್ದರೂ ಮಂತ್ರಿ ಸ್ಥಾನ ಸಿಗದ ಬಿಜೆಪಿ ಶಾಸಕರು ಸಹಮತ ವ್ಯಕ್ತಪಡಿಸುವ ಸಾಧ್ಯತೆಯಿದೆ.