ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆರೋಪದಿಂದ ಮುಕ್ತ
ಬೆಂಗಳೂರು, ಆಗಸ್ಟ್ 26: ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದ ಆರೋಪದಿಂದ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಖುಲಾಸೆಯಾಗಿದ್ದಾರೆ.
ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಸೋಮವಾರ ತೀರ್ಪು ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯ, ರೇಣುಕಾಚಾರ್ಯ ಅವರಿಗೆ ನೆಮ್ಮದಿ ನೀಡಿದೆ.
ಕಾಡಾ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಿ ದಾಂದಲೆ ನಡೆಸಿದ ಆರೋಪ ರೇಣುಕಾಚಾರ್ಯ ಅವರ ಮೇಲಿತ್ತು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ಅವರು ಗೈರಾಗುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಅವರಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅಲ್ಲದೆ, ಅವರನ್ನು ಬೆಳಿಗ್ಗೆಯಿಂದ ಸಂಜೆಯವರೆಗೂ ಪೊಲೀಸ್ ವಶದಲ್ಲಿ ಇರುವಂತೆ ಒಪ್ಪಿಸಿ, ನ್ಯಾಯಾಲಯದಲ್ಲಿಯೇ ಇರುವಂತೆ ಶಿಕ್ಷೆ ನೀಡಿತ್ತು.
ಈ ರಾಜ್ಯದಲ್ಲಿ ಮತ್ತೋರ್ವ ಯಡಿಯೂರಪ್ಪ ಹುಟ್ಟಲ್ಲ; ರೇಣುಕಾಚಾರ್ಯ
ಈ ಪ್ರಕರಣವು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ'ದಲ್ಲಿ ವಿಚಾರಣೆಗೆ ಒಳಪಟ್ಟಿತ್ತು. ರೇಣುಕಾಚಾರ್ಯ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಅವರನ್ನು ದೋಷಮುಕ್ತಗೊಳಿಸಿ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ತೀರ್ಪು ನೀಡಿದರು.
ಶಿವಮೊಗ್ಗ ಕಾಡಾ ಕಚೇರಿಯಲ್ಲಿ ದಾಂದಲೆ
ಭದ್ರಾ ಜಲಾಶಯದಿಂದ ದಾವಣಗೆರೆ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು ಎಂದು ಶಿವಮೊಗ್ಗದ ಮಲವಗೊಪ್ಪ ಬಳಿಯ ಭದ್ರಾ ಅಚ್ಚಕಟ್ಟು ಪ್ರಾಧಿಕಾರದ (ಕಾಡಾ) ಕಚೇರಿ ಎದುರು 2016ರಲ್ಲಿ ಪ್ರತಿಭಟನೆ ನಡೆದಿತ್ತು. ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದ ರೇಣುಕಾಚಾರ್ಯ ಅವರು ಕಚೇರಿಯ ಒಳಗೆ ನುಗ್ಗಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೆ, ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಆರೋಪವೂ ಅವರ ಮೇಲಿತ್ತು.
ಶಾಸಕ ರೇಣುಕಾಚಾರ್ಯಗೆ 500 ರೂ. ದಂಡ ವಿಧಿಸಿದ ನ್ಯಾಯಾಲಯ
ಪೊಲೀಸ್ ವಶಕ್ಕೆ ನೀಡಿದ್ದ ನ್ಯಾಯಾಲಯ
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ರೇಣುಕಾಚಾರ್ಯ ಅವರಿಗೆ ಹಲವು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಪದೇ ಪದೇ ಗೈರಾಗುತ್ತಿದ್ದರು. ವಿಚಾರಣೆಗೆ ಮತ್ತೆ ಗೈರಾದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದ ಬಳಿಕ ಈ ವರ್ಷದ ಮೇ ತಿಂಗಳಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೇ 31ರಂದು ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ರೇಣುಕಾಚಾರ್ಯ ಅವರನ್ನು ಸಂಜೆ ಐದು ಗಂಟೆಯವರೆಗೂ ಅಲ್ಲಿಯೇ ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಶಿಕ್ಷೆ ನೀಡಿದ್ದರು.
ಜನಪ್ರತಿನಿಧಿಗಳಿಂದ ಪ್ರತಿಭಟನೆ
ಶಾಸಕರಾದ ಎಸ್ಎ ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಿಪಿ ಹರೀಶ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಕಾಡಾ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತರು ಬೆಳೆದಿರುವ ಭತ್ತ ಮತ್ತು ಅಡಿಕೆ ನೀರಿಲ್ಲದೆ ಒಣಗಿ ಹೋಗುತ್ತಿವೆ. ಹೀಗಾಗಿ ಕೂಡಲೇ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದ್ದರು.
"ಭಂಡ ನಾನು, ಯಾವ ಸರ್ಕಾರ ಇದ್ದರೂ ಕೆಲ್ಸ ಮಾಡ್ತೀನಿ" ಎಂದ ರೇಣುಕಾಚಾರ್ಯ
ಕಾಡಾ ಕಚೇರಿಗೆ ಮುತ್ತಿಗೆ
ಮೊದಲ ಪ್ರತಿಭಟನೆಯಲ್ಲಿ ರಾಜಕೀಯ ಮುಖಂಡರು ಭಾಗವಹಿಸಿದ್ದರು. ಆಗ ಅಧಿಕಾರಿಗಳು ನೀರು ಹರಿಸುವ ಭರವಸೆ ನೀಡಿದ್ದರು. ಆದರೆ, ಅವರು ಹೇಳಿದ ಮಾತಿನಂತೆ ನಡೆದುಕೊಳ್ಳದೆ ಇದ್ದಿದ್ದರಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ರೈತರೂ ಪಾಲ್ಗೊಂಡಿದ್ದರು. ಈ ವೇಳೆ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ದಾಂದಲೆ ನಡೆಸಲಾಗಿತ್ತು. ರಸ್ತೆ ತಡೆ ನಡೆಸಿದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪ್ರಕರಣದಲ್ಲಿ ರೇಣುಕಾಚಾರ್ಯ ಮತ್ತು ಇತರೆ ಅನೇಕರ ವಿರುದ್ಧ ಪ್ರಕರಣ ದಾಖಲಾಗಿತ್ತು.