ಏನೋ ಹೇಳೋದು, ಆಮೇಲೆ ಹೇಳಿಕೆ ತಿರುಚಲಾಗಿದೆ ಎನ್ನುವುದು: ಯಾಕೀ ನಾಟಕ?
ಪಕ್ಷಾತೀತವಾಗಿ ಈ ಒಂದು ಚಾಳಿ ರಾಜಕಾರಣಿಗಳಲ್ಲಿ ಹೆಚ್ಚಾಗುತ್ತಿದೆ. ಮೈಕ್ ಮುಂದೆ ಮಾತಾನಾಡಿದ್ದನ್ನೇ ಎಷ್ಟೋ ಬಾರಿ ಒಪ್ಪಿಕೊಳ್ಳಲು ಸಿದ್ದರಿರುವುದಿಲ್ಲ. ಯಾವಾಗ ತಮ್ಮತಮ್ಮ ಹೇಳಿಕೆ ಆಕ್ರೋಶಕ್ಕೆ ಕಾರಣವಾಗುತ್ತೋ, ಆಗ ಮಾಧ್ಯಮದವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆಂದು ಮಿಡೀಯಾಗಳ ಮೇಲೆ ಗೂಬೆ ಕೂರಿಸುವುದು.
ಇಂತಹ ರಾಜಕಾರಣಕ್ಕೆ ತಾಜಾ ಉದಾಹರಣೆ ಬಿಜೆಪಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಮಾಧ್ಯಮಗಳ ಮತ್ತು ತುಂಬಿದ ಸಭೆಯಲ್ಲಿ ಜನರ ಮುಂದೆ ಮಾತನಾಡಿದ ವಿಚಾರ, ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆಯೇ ತಮ್ಮ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ.
ಸಿಎಂ ಹುದ್ದೆ ಡೀಲ್ ಹೇಳಿಕೆ ನೀಡಿದ ಯತ್ನಾಳ್ಗೆ ಶಿಸ್ತು ಸಮಿತಿ ನೋಟಿಸ್: ಕಟೀಲ್ ಎಚ್ಚರಿಕೆ
ಯಡಿಯೂರಪ್ಪನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ತಮ್ಮವರ ವಿರುದ್ದವೇ ಟೀಕಾ ಪ್ರಹಾರವನ್ನು ಮಾಡುತ್ತಿರುವ ಯತ್ನಾಳ್, ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ, ಮಾತಿನ ಬಾಣವನ್ನು ತೀವ್ರಗೊಳಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ಪ್ರಮುಖವಾಗಿ ಯಡಿಯೂರಪ್ಪ, ವಿಜಯೇಂದ್ರ, ಮುರುಗೇಶ್ ನಿರಾಣಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್ ಅವರನ್ನು ನಿಯಂತ್ರಿಸುವ ಕೆಲಸವನ್ನು ರಾಜ್ಯಾಧ್ಯಕ್ಷರಾಗಲಿ, ಶಿಸ್ತು ಸಮಿತಿಯಾಗಲಿ, ಉಸ್ತುವಾರಿ ಮಾಡಿರಲಿಲ್ಲ. ಈಗ ಪಕ್ಷ ಎಚ್ಚೆತ್ತುಕೊಂಡಿದೆ, ಯತ್ನಾಳ್ ಕೂಡಾ ಉಲ್ಟಾ ಹೊಡೆದಿದ್ದಾರೆ.
2500 ಕೋಟಿ ಕೊಟ್ರೆ ಸಿಎಂ ಮಾಡ್ತೀವಿ ಅಂತ ಬಂದಿದ್ರು: ಯತ್ನಾಳ್ ಬಾಂಬ್
ಎಚ್ಚೆತ್ತುಕೊಂಡ ನಳಿನ್ ಕುಮಾರ್ ಕಟೀಲ್, ಶಿಸ್ತು ಸಮಿತಿ ಮೂಲಕ ನೋಟಿಸ್
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಹೇಳಿಕೆಯನ್ನು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದರು. ದುಡ್ದಿದ್ದರೆ ಮುಖ್ಯಮಂತ್ರಿ ಹುದ್ದೆ ಬಿಕರಿಯಾಗುತ್ತದೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಮೊದಲೇ ನಲವತ್ತು ಪರ್ಸೆಂಟ್, ಪಿಎಸ್ಐ ನೇಮಕ ವಿಚಾರದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಎದುರಿಸುತ್ತಿರುವ ಸಂದರ್ಭದಲ್ಲಿ ಯತ್ನಾಳ್ ಹೇಳಿಕೆ ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಿಸ್ತು ಸಮಿತಿ ಮೂಲಕ ನೋಟಿಸ್ ಅನ್ನು ನೀಡಿದ್ದಾರೆ. ನೋಟಿಸ್ ಬರುತ್ತಿದ್ದಂತೆಯೇ ಯತ್ನಾಳ್ ಉಲ್ಟಾ ಹೊಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಇದನ್ನು ಪ್ರಶ್ನಿಸಬಹುದಿತ್ತು
"ಅವರೇನೂ ಪಕ್ಷದ ಬಗ್ಗೆ ಮಾತನಾಡಲಿಲ್ಲವಲ್ಲ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರಲ್ವಾ, ಇದರ ಅರ್ಥವೇನು. ಇದಕ್ಕಿಂತ ಇನ್ನೇನು ಬೆಂಬಲ ಸಿಗಬೇಕು" ಎಂದು ಹೇಳಿದ್ದ ಯತ್ನಾಳ್, ಈಗ ಸಿಎಂ ಹುದ್ದೆಗೆ 2,500 ಕೊಡಬೇಕೆಂಬ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದಾರೆ. "ದಲ್ಲಾಳಿಗಳು ಹಣ ಪಡೆದು ಟಿಕೆಟ್ ನೀಡುತ್ತಿರುವ ವಿಚಾರವನ್ನು ಸದನದಲ್ಲೇ ಪ್ರಸ್ತಾವಿಸಿದ್ದೇನೆ. ಆಗಲೇ, ಕೆಪಿಸಿಸಿ ಅಧ್ಯಕ್ಷರು ಇದನ್ನು ಪ್ರಶ್ನಿಸಬಹುದಿತ್ತು"ಎಂದು ಯತ್ನಾಳ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ಮಾಧ್ಯಮದವರ ಮೇಲೆ ಗೂಬೆ ಕೂರಿಸಿದ್ದಾರೆ
"ನಾನು ಕೇದಾರನಾಥದ ಮಹಾರಾಜ ಮಾತನಾಡುವುದು. ನನಗೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಎಲ್ಲರೂ ಗೊತ್ತು, ಮೋದಿ, ಸೋನಿಯಾ ಗಾಂಧಿ, ದೇವೇಗೌಡ್ರು ಗೊತ್ತೆಂದು ಪರಿಚಯ ಮಾಡಿಸಿಕೊಳ್ಳುತ್ತಾನೆ. ಇಂತಿಷ್ಟು ಹಣ ತಂದು ಕೊಟ್ಟರೆ, ಕೇಂದ್ರದಲ್ಲಿ ಶಿಫಾರಸ್ಸನ್ನು ಮಾಡುತ್ತೇನೆ ಎಂದು ಆಮಿಷವೊಡ್ಡುತ್ತಾನೆ. ಇಂತವರನ್ನೆಲ್ಲಾ ನಂಬಲು ಹೋಗಬೇಡಿ ಎನ್ನುವ ನನ್ನ ಹಿತವಚನವನ್ನೇ ಮಾಧ್ಯಮದವರು ತಿರುಚಿ ಬಿತ್ತರಿಸಿದ್ದಾರೆ"ಎಂದು ಬಸನಗೌಡ ಪಾಟೀಲ್ ಯತ್ನಾಳ್, ಮಾಧ್ಯಮದವರ ಮೇಲೆ ಗೂಬೆ ಕೂರಿಸಿದ್ದಾರೆ.
ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದಿದ್ದರು
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, "ದೆಹಲಿಯಿಂದ ಒಂದಷ್ಟು ಮಂದಿ ನನ್ನ ಬಳಿ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೂ. ಕೊಡಿ ಎಂದಿದ್ದರು. ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಕೋಣೆಯಲ್ಲಿ ಇಡೊದಾ, ಗೋದಾಮಿನಲ್ಲಿ ಇಡೋದಾ, ರಾಜಕಾರಣದಲ್ಲಿ ಮೋಸ ಮಾಡುತ್ತಾರೆ"ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.