ಬಿಎಸ್ವೈ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ನೂತನ ಸಚಿವರಾರು, ಆ 'ಸಿಡಿ'ಯಲ್ಲಿ ಅಂತದ್ದೇನಿದೆ!
ಹಿಡಿದ ಹಠವನ್ನು ಕೊನೆಗೂ ಸಾಧಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊನೆಗೂ ಸಂಪುಟ ವಿಸ್ತರಣೆಯನ್ನು ನಡೆಸಿದ್ದಾರೆ. ಏಳು ಶಾಸಕರನ್ನು ನೂತನವಾಗಿ ಸಂಪುಟಕ್ಕೆ ಸೇರಿಸುವ ಕಾರ್ಯಕ್ರಮ ರಾಜಭವನದಲ್ಲಿ ಸಂಕ್ರಾಂತಿಯ ಮುನ್ನಾದಿನ ನಡೆದಿದೆ.
ಸಂಪುಟ ವಿಸ್ತರಣೆಯ ನಂತರ ಸಚಿವ ಸ್ಥಾನ ತಪ್ಪಿದ ಆಕಾಂಕ್ಷಿಗಳು ಸಹಜವಾಗಿಯೇ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ರೇಣುಕಾಚಾರ್ಯ, ಸತೀಶ್ ರೆಡ್ಡಿ, ಎಚ್.ವಿಶ್ವನಾಥ್, ರಾಮದಾಸ್ ಪ್ರಮುಖರು.
RR ನಗರ ಚುನಾವಣಾ ಪ್ರಚಾರದಲ್ಲಿ ಸಿಎಂ ಬಿಎಸ್ವೈ ಹೇಳಿದ್ದೇನು, ಈಗ ಮಾಡುತ್ತಿರುವುದೇನು?
ಎಚ್.ವಿಶ್ವನಾಥ್ ಅವರಿಂದ ವಚನಭ್ರಷ್ಟರು ಎನ್ನುವ ಆಪಾದನೆಯನ್ನು ಸಿಎಂ ಕೇಳಬೇಕಾಗಿ ಬಂತು. ಇನ್ನು ಸತೀಶ್ ರೆಡ್ಡಿಯವರು, "ಯುವ ಕಾರ್ಯಕರ್ತರಿಗೆ ಯಡಿಯೂರಪ್ಪ ಬೆಲೆ ಕೊಡುತ್ತಿಲ್ಲವೇಕೆ"ಎಂದು ಪ್ರಶ್ನಿಸಿದ್ದಾರೆ.
ಆದರೆ, ಇವೆಲ್ಲಕ್ಕಿಂತಲೂ ವಿಜಯಪುರದ ಶಾಸಕ, ಯಡಿಯೂರಪ್ಪನವರ ಕಟ್ಟಾ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್, ಸಿಡಿಸಿದ ಬಾಂಬ್ ಮಾತ್ರ, ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ. ಯತ್ನಾಳ್ ಅವರು ಬಿಎಸ್ವೈ ವಿರುದ್ದ ಕಿಡಿಕಾರುವುದು ಹೊಸದೇನಲ್ಲದಿದ್ದರೂ, ಅವರು ಆಡಿದ ಆ ಸಿಡಿ, ಆ ನೂತನ ಸಚಿವರಾರು ಎನ್ನುವ ಗಂಭೀರ ಪಶ್ನೆ ಉದ್ಭವವಾಗಿದೆ.
ಎಲ್ಲದಕ್ಕೂ ನಿಮ್ಮ ಮಗನ ಬಳಿಯೇ ಮಾತನಾಡಬೇಕೇ?: ವಿಜಯೇಂದ್ರ ವಿರುದ್ಧ ಯತ್ನಾಳ್ ನೇರಾ ನೇರ ಕಿಡಿ
ಸಿಡಿಯೊಂದನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್ ಮೇಲ್
"ಹಿರಿತನ, ಅನುಭವ, ಪ್ರಾಂತ್ಯವಾರುಗೆ ಬೆಲೆಯಿಲ್ಲ. ಸಿಡಿಯೊಂದನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ, ಇಂದು ಮೂವರು ಶಾಸಕರು ಸಚಿವರಾಗಿದ್ದಾರೆ. ಇದೊಂದು ಅಪವಿತ್ರ ಸಂಪುಟ ವಿಸ್ತರಣೆ"ಎನ್ನುವ ಗಂಭೀರ ಆರೋಪವನ್ನು ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದಾರೆ.
ಒಬ್ಬರು ಸಿಡಿ ಮತ್ತು ದುಡ್ಡನ್ನು ವಿಜಯೇಂದ್ರಗೆ ನೀಡಿದ್ದಾರೆ
"ಕಳೆದ ಮೂರು ತಿಂಗಳಿನಿಂದ ಮೂರು ಸಿಡಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಆ ಸಿಡಿಯನ್ನು ಇಟ್ಟುಕೊಂಡು ಇಬ್ಬರು ಸಚಿವರಾಗಿದ್ದರೆ, ಒಬ್ಬರು ಸಿಡಿ ಮತ್ತು ದುಡ್ಡನ್ನು ಸಿಎಂ ಪುತ್ರ ವಿಜಯೇಂದ್ರಗೆ ನೀಡಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ"ಎನ್ನುವ ಆರೋಪವನ್ನು ಯತ್ನಾಳ್ ಮಾಡಿದ್ದಾರೆ.
ಎಚ್.ವಿಶ್ವನಾಥ್ ಯತ್ನಾಳ್ ಮಾತಿಗೆ ಧ್ವನಿಗೂಡಿಸಿದ್ದಾರೆ
ಇದಕ್ಕೆ ಪೂರಕ ಎನ್ನುವಂತೆ ಎಚ್.ವಿಶ್ವನಾಥ್ ಯತ್ನಾಳ್ ಮಾತಿಗೆ ಧ್ವನಿಗೂಡಿಸಿದ್ದಾರೆ. "ಆ ಯೋಗೀಶ್ವರ್ ನನ್ನು ಸಚಿವರನ್ನಾಗಿ ಮಾಡಿದ್ದಾರಲ್ವಾ. ಯಾವ ಆಧಾರದ ಮೇಲೆ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಏನಾದರೂ ಸಿಎಂ ಅವರನ್ನು ಸಿಡಿ ತೋರಿಸಿ ಬೆದರಿಸುತ್ತಿದ್ದಾರಾ. ಸಿಡಿ ಇರುವುದು ನಿಜ, ಅದು ಯಾವತ್ತು ಬೇಕಾದರೂ ಸಿಡಿಯಬಹುದು. ಸಂಕ್ರಾಂತಿಯ ನಂತರ ಆ ಸಿಡಿ ಸಿಡಿಯುತ್ತದೆ"ಎಂದು ವಿಶ್ವನಾಥ್ ಹೇಳಿದ್ದಾರೆ.
ಆ ಸಿಡಿಯಾವುದು, ಅದರಲ್ಲೇನಿದೆ
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನೂತನ ಸಚಿವ ಯೋಗೀಶ್ವರ್, "ಆ ಸಿಡಿ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ವಿರೋಧಿಗಳು ಬಲಾಢ್ಯರಿದ್ದಾರೆ. ರಾಜ್ಯ ರಾಜಕೀಯದಲ್ಲಿ ನನಗೆ ಶತ್ರುಗಳು ತುಂಬಾ ಜನರಿದ್ದಾರೆ. ಅವರು ಪಿತೂರಿಯನ್ನು ಮಾಡಿರಬಹುದು"ಎಂದು ಯೋಗೀಶ್ವರ್ ಹೇಳಿದ್ದಾರೆ. ಸಿಡಿ ವಿವಾದ ಇಂದು ನಿನ್ನೆಯದಲ್ಲ. ಯತ್ನಾಳ್ ಮತ್ತು ವಿಶ್ವನಾಥ್ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ, ಆ ಸಿಡಿಯಾವುದು, ಅದರಲ್ಲೇನಿದೆ, ಸಿಡಿ ತೋರಿಸಿ ಬೆದರಿಸಿ ಸಚಿವರಾದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸದ್ಯದಲ್ಲೇ ಸಿಕ್ಕರೂ ಸಿಗಬಹುದು.