ತಂತಿ ಮೇಲಿನ ನಡಿಗೆ ಎಂದ ಸಿಎಂ; ಬಿಜೆಪಿ ಸದಸ್ಯರು ಹೇಳಿದ್ದೇನು?
"ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದರೆ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ" ಎಂದು ನಿನ್ನೆ ಭಾನುವಾರ ದಾವಣಗೆರೆಯಲ್ಲಿ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿಕೆ ನೀಡಿದ್ದರು. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆರಂಭವಾದ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಅವರು, "ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತನೆ ಮಾಡಬೇಕಾಗಿದೆ" ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿಯವರೂ ಪ್ರತಿಕ್ರಿಯೆ ನೀಡಿದ್ದರು. ಇದೀಗ ಬಿಜೆಪಿ ಸದಸ್ಯರು ಯಡಿಯೂರಪ್ಪನವರ ಈ ಹೇಳಿಕೆ ಕುರಿತು ತಮ್ಮದೇ ಮಾತುಗಳನ್ನು ಆಡಿದ್ದಾರೆ.
"ಬಹುಮತ ಸಿಗುವವರೆಗೂ ಇದೇ ಸ್ಥಿತಿ"
ಯಡಿಯೂರಪ್ಪನವರ ಹೇಳಿಕೆ ಕುರಿತು ಉಡುಪಿಯಲ್ಲಿ ಮಾತನಾಡಿರುವ ಸಂಸದೆ ಶೋಭಾ ಕರಂದ್ಲಾಜೆ, "ಬಹುಮತ ಸಿಗುವ ತನಕ ಮುಖ್ಯಮಂತ್ರಿಗಳದ್ದು ತಂತಿ ಮೇಲಿನ ನಡಿಗೆಯೇ" ಎಂದಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಸಿಎಂ ಹೇಳಿಕೆ ಸಹಜ, ಯಾಕೆಂದರೆ ಉಪಚುನಾವಣೆ ಇನ್ನಷ್ಟೇ ಆಗಬೇಕಿದೆ. ನಮ್ಮಲ್ಲಿ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಬೀತು ಮಾಡಲು 113 ಶಾಸಕರು ಆಗಲೇಬೇಕು. ಬಹುಮತ ಸಿಗುವ ತನಕ ನಮ್ಮದು ತಂತಿ ಮೇಲಿನ ನಡಿಗೆಯಂತೆಯೇ. ಸರ್ಕಾರ ಸ್ಥಿರ ಆದ ಮೇಲೆ ಯಾವುದೇ ಸಮಸ್ಯೆ ಇರಲ್ಲ" ಎಂದು ಹೇಳಿದ್ದಾರೆ. "ಸರ್ಕಾರದಲ್ಲಿ ಮಂತ್ರಿಗಳಾಗಿರುವವರ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲಾ ಮಂತ್ರಿ ಆಗುವ ಅಪೇಕ್ಷೆ ಇದೆ. ಅಪೇಕ್ಷೆ ತಪ್ಪಲ್ಲ, ಯಾಕಂದ್ರೆ ಅವರೆಲ್ಲ ಅನೇಕ ಬಾರಿ ಗೆದ್ದಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸುವುದು ಸಹಜವಾಗಿ ಕಷ್ಟದ ಕೆಲಸ" ಎಂದೂ ಹೇಳಿದರು.
ಯಡಿಯೂರಪ್ಪರಿಂದ ವೀರಶೈವ ಸಮಾಜ ಉಳಿಯಿತು: ಶಾಮನೂರು ಶಿವಶಂಕರಪ್ಪ
"ಯಡಿಯೂರಪ್ಪ ಒಬ್ಬ ಮಾಸ್ ಲೀಡರ್"
"ಯಡಿಯೂರಪ್ಪನವರು ಎಲ್ಲಾ ಸಮಾಜಕ್ಕೆ ಸಮಾನ ರೀತಿ ಅನುದಾನ ಬಿಡುಗಡೆ ಮಾಡುವ ಕುರಿತು ಈ ರೀತಿ ಹೇಳಿದ್ದಾರೆ. ವೀರಶೈವ ಮಠಗಳಿಗೆ ಅನುದಾನ ನೀಡಿ ಎಂದಾಗ ಈ ಮಾತು ಬಂದಿದೆ. ಅದರಲ್ಲಿ ಬೇರೆ ಯೋಚಿಸುವ ಅಗತ್ಯ ಇಲ್ಲ. ರಾಜ್ಯದಲ್ಲಿ ನೆರೆ ಹಾವಳಿಯಾಗಿದ್ದು ಜನ ತತ್ತರಿಸಿ ಹೋಗಿದ್ದಾರೆ. ಕೇಂದ್ರದ ನಾಯಕರ ಮೇಲೆ ವಿಶ್ವಾಸವಿದೆ. ಅನುದಾನವನ್ನು ಬೇಗ ಬಿಡುಗಡೆ ಮಾಡುತ್ತಾರೆ" ಎಂದು ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
"ಯಡಿಯೂರಪ್ಪನವರು ಹೋರಾಟದ ಮುಖಾಂತರ ಪಕ್ಷ ಕಟ್ಟಿದ್ದಾರೆ. ಪ್ರಶ್ನಾತೀತ ವ್ಯಕ್ತಿಯಾಗಿ ಬೆಳೆದಿದ್ದಾರೆ. ಅವರ ಮೇಲೆ ಕಾಂಗ್ರೆಸ್ ನವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಹೇಳಿದರು. "ಪಕ್ಷದಲ್ಲಿ ಏನೇ ಇದ್ದರು ಅದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಡಿ. ಯಾವುದೇ ಸಮಸ್ಯೆ ಇದ್ದರೂ ಪಕ್ಷದಲ್ಲಿ ಕೂತು ಚರ್ಚೆ ಮಾಡೋಣ. ಬಹಿರಂಗ ಹೇಳಿಕೆ ಕೊಟ್ಟರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತೆ." ಎಂದು ಪಕ್ಷದವರಿಗೆ ಸಲಹೆ ನೀಡಿದರು.
ಯಾಕೆ ಹೇಳಿದರೋ ಗೊತ್ತಿಲ್ಲ
ಹುಬ್ಬಳ್ಳಿಯಲ್ಲಿ ಯಡಿಯೂರಪ್ಪನವರ ಹೇಳಿಕೆಗೆ ಉತ್ತರಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, "ಯಡಿಯೂರಪ್ಪನವರು ಯಾವ ಕಾರಣಕ್ಕೆ ಹೇಳಿದ್ದರೋ ಗೊತ್ತಿಲ್ಲ, ಆ ಪ್ರಶ್ನೆ ಅವರಿಗೇ ಕೇಳಬೇಕು" ಎಂದಷ್ಟೇ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ನೆರೆ ಪರಿಹಾರದ ಕುರಿತು ಮಾಡನಾಡಿ "ರಾಜ್ಯ ಸರ್ಕಾರ ಈಗಾಗಲೇ ಅಗತ್ಯವಿರುವ ಪರಿಹಾರ ಕಾರ್ಯ ಕೈಗೊಂಡಿದೆ. ಮನೆ ಇಲ್ಲದವರಿಗೆ ಮನೆ ನಿರ್ಮಾಣ, ತಾತ್ಕಾಲಿಕ ಶೆಡ್ ನಿರ್ಮಾಣ ಎಲ್ಲವೂ ನಡೆಯುತ್ತಿದೆ. ಕರ್ನಾಟಕದಲ್ಲಷ್ಟೇ ಅಲ್ಲ, ನಾಲ್ಕೈದು ರಾಜ್ಯಗಳಲ್ಲಿ ನೆರೆ ಹಾವಳಿ ಬಂದಿದೆ. ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆ ಮಾಡಿಲ್ಲ. ಏಕಕಾಲಕ್ಕೆ ಎಲ್ಲ ರಾಜ್ಯಗಳಿಗೂ ಪರಿಹಾರ ಬಿಡುಗಡೆಯಾಗಲಿದೆ. ತಾಳ್ಮೆ ಇರಲಿ" ಎಂದಿದ್ದಾರೆ.
ಉಪಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ನುಡಿದ ಭವಿಷ್ಯ ನಿಜವಾಗುವುದೇ?
"ಯಡಿಯೂರಪ್ಪನವರ ವಿಷಯಕ್ಕೆ ಬಂದರೆ ಭಸ್ಮವಾಗ್ತೀರಿ"
ಯಡಿಯೂರಪ್ಪನವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿರುವ ಕುರಿತು ಮಾತನಾಡಿದ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್, "ತಮ್ಮ ಬೇಳೆ ಬೇಯಿಸಿಕೊಳ್ಳಲು ಯಡಿಯೂರಪ್ಪನವರ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಅವರಿಗೆ ಭಂಗ ತರುತ್ತಿದ್ದಾರೆ" ಎಂದು ಹೇಳಿದ್ದಾರೆ. ಇದೇ ಸಂದರ್ಭ, ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಮಾತನಾಡಿ, "ಯಡಿಯೂರಪ್ಪ ಅವರ ವಿಚಾರಕ್ಕೆ ಬಂದರೆ ಸುಟ್ಟು ಭಸ್ಮರಾಗುತ್ತೀರಿ. ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟು ತೊಡೆ ತಟ್ಟಿದರೆ ನಾವು ಕೂಡ ತೊಡೆ ತಟ್ಟಲು ಸಿದ್ದ" ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ರೇಣುಕಾ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ನಾವು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಭಿಕ್ಷೆ ಬೇಡಿ ಉತ್ತರ ಕರ್ನಾಟಕಕ್ಕೆ ಸಂತ್ರಸ್ತರಿಗೆ ಪರಿಹಾರ ಕೊಡ್ತೀವಿ. ಸ್ವಾಭಿಮಾನಕ್ಕೆ ಧಕ್ಕೆ ತಂದರೆ ನಾವು ಬಿಡಲ್ಲ" ಎಂದರು.