ಡಿವಿಎಸ್ ಸ್ಥಾನಕ್ಕೆ ಈಶ್ವರಪ್ಪ: ಯೋಗಿಗೆ ಕಾಂಗ್ರೆಸ್ ಯೋಗ
ಬೆಂಗಳೂರು, ಜೂನ್ 24: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಪರಾಜಿತರಾದ ಬಳಿಕ ಇತ್ತೀಚೆಗೆ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಪ್ರಾಪ್ತಿಯಾಗಿದೆ. ಈ ಸ್ಥಾನವು ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುತ್ತದೆ.
ಇದೀಗ ರೈಲ್ವೆ ಸಚಿವರಾಗಿರುವ ಡಿವಿ ಸದಾನಂದ ಗೌಡ ಅವರಿಂದ ತೆರವಾದ ಸ್ಥಾನವನ್ನು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅಲಂಕರಿಸಲಿದ್ದಾರೆ. ಶಿವಮೊಗ್ಗದವರೇ ಆದ ಶಂಕರಮೂರ್ತಿ ಅವರು ಸಭಾಪತಿಯಾಗಿದ್ದಾರೆ. (ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು)
ಈಶ್ವರಪ್ಪ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ್ನಾಗಿ ನೇಮಿಸಲು ಬಿಜೆಪಿ ಕಾರ್ಯಕಾರಿಣಿ ನಿರ್ಧರಿಸಿದೆ. ಈಶ್ವರಪ್ಪ ಅವರು ಜುಲೈ 1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಸ್ತುತ, ಮೇಲ್ಮನೆಯಲ್ಲಿ ಪ್ರತಿಪಕ್ಷ ಉಪನಾಯಕರಾಗಿರುವ ಕೆಬಿ ಶಾಣಪ್ಪ ಅವರು ಪ್ರತಿಪಕ್ಷ ನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಯೋಗೀಶ್ವರ್ ಗೆ ಕಾಂಗ್ರೆಸ್ ಸದಸ್ಯ ಸ್ಥಾನಮಾನ:
ಮಾಜಿ ಸಚಿವ, ಚನ್ನಪಟ್ಟಣದ ಹಾಲಿ ಶಾಸಕ ಸಿಪಿ ಯೋಗೀಶ್ವರ್ ಅವರಿಗೆ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯ ಎಂಬ ಮಾನ್ಯತೆ ನೀಡಲಾಗಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. (ಎಸ್ಪಿಗೆ ಕೈಕೊಟ್ಟು ಮತ್ತೆ ಡಿಕೆಶಿಗೆ ನಿಷ್ಠೆ ತೋರಿದ ಯೋಗಿ)
ತಾವೀಗ ಸಮಾಜವಾದಿ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇವೆ. ಹೀಗಾಗಿ ತನ್ನನ್ನು ಕಾಂಗ್ರೆಸ್ ಸದಸ್ಯ ಎಂದು ಮಾನ್ಯ ಮಾಡುವಂತೆ ಯೋಗೀಶ್ವರ್ ಅವರು ಪತ್ರ ನೀಡಿದ್ದರ ಹಿನ್ನೆಲೆಯಲ್ಲಿ ಆ ಬೇಡಿಕೆಯನ್ನು ಮಾನ್ಯ ಮಾಡಲಾಗಿದೆ. ಹಾಗೆಯೇ, ಬಿಎಸ್ ಯಡಿಯೂರಪ್ಪ, ಬಿ ಶ್ರೀರಾಮುಲು, ಪ್ರಕಾಶ್ ಹುಕ್ಕೇರಿ ಅವರು ಸಂಸದರಾಗಿ ಆಯ್ಕೆಗೊಂಡಿದ್ದರಿಂದ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ ಎಂದೂ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.