ಸುಪ್ರೀಂ ತೀರ್ಪು ಹೊರಬೀಳುತ್ತಲೇ ಬಿಜೆಪಿಯ ಮೊದಲ ವಿಕೆಟ್ ಡೌನ್?
ಬೆಂಗಳೂರು, ನ 13: ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ, ಇಷ್ಟುದಿನ ಬಿಜೆಪಿಯಲ್ಲಿದ್ದ ಅನಧಿಕೃತ ಬಂಡಾಯವೊಂದು ಅಧಿಕೃತವಾಗಿದೆ.
ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎನ್ನುವ ತೀರ್ಪು ಪ್ರಕಟವಾಗುತ್ತಿದ್ದಂತೆಯೇ, ಕಳೆದ ಬಾರಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ, ಸೋಲು ಅನುಭವಿಸಿದ್ದ ಮುಖಂಡರಿಗೂ ನಿರಾಸೆಯಾಗಿದೆ.
ಶರತ್ ಬಚ್ಚೇಗೌಡಗೆ ಆರ್.ಅಶೋಕ್ ಎಚ್ಚರಿಕೆ
ಮುಂದಿನ ಐದು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನುವ ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಸುಪ್ರೀಂ ಎತ್ತಿಹಿಡಿಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೂ, ಸರ್ವೋಚ್ಚ ನ್ಯಾಯಾಲಯ ಶಾಕ್ ನೀಡಿದೆ.
ಹೊಸಕೋಟೆಯಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಬಿಜೆಪಿ ಮುಖಂಡ ಆರ್. ಅಶೋಕ್ ಅವರ ಎಚ್ಚರಿಕೆಗೆ, ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್, ಡೋಂಟ್ ಕೇರ್ ಎಂದಿದ್ದಾರೆ. ಬಿಜೆಪಿ, ಇವರ ವಿರುದ್ದ ಶಿಸ್ತಿನಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿಲ್ಲದಿಲ್ಲ.
ಸಚಿವ ಆರ್. ಅಶೋಕ್ ಎಚ್ಚರಿಕೆ
ಶರತ್ ಬಚ್ಚೇಗೌಡ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು. ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ. ಅನರ್ಹರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿ, ಪಕ್ಷದ ವಿರುದ್ಧ ನಡೆದುಕೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ರವರು ಶರತ್ ಬಚ್ಚೇಗೌಡಗೆ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ
ಎಂಟಿಬಿ ನಾಗರಾಜ್ ತಮ್ಮ ಬೆಂಬಲಿಗರ ಮನೆಯಲ್ಲಿ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಚ್ಚೇಗೌಡ ಸ್ಪಷ್ಟನೆಯನ್ನು ನೀಡಿದ್ದಾರೆ. ಇದು ಇವರಿಬ್ಬರ ನಡುವಿನ ವಾಕ್ಸಮರಕ್ಕೆ ಮತ್ತಷ್ಟು ಕಾರಣವಾಗಿದೆ. ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಚ್ಚೇಗೌಡ್ರು, ಎಂಟಿಬಿಗೆ ಚಾಲೆಂಜ್ ಮಾಡಿದ್ದಾರೆ. ಆಪರೇಷನ್ ಕಮಲ ಮಾತುಕತೆ ನಡೆದದ್ದು, ಬಚ್ಚೇಗೌಡ್ರ ಸಮ್ಮುಖದಲ್ಲೇ ಎಂದು ಎಂಟಿಬಿ ಆರೋಪಿಸಿದ್ದರು.
ಅಶೋಕ್ ಎಚ್ಚರಿಕೆಗೆ ಕ್ಯಾರೇ ಅನ್ನದ ಶರತ್
ಆರ್. ಅಶೋಕ್ ಎಚ್ಚರಿಕೆಗೆ ಕ್ಯಾರೇ ಅನ್ನದ ಶರತ್, ಗುರುವಾರ (ನ 14) ಪಕ್ಷೇತರರಾಗಿ, ಹೊಸಕೋಟೆಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಇದನ್ನು ಅವರೇ ಖಾತ್ರಿ ಪಡಿಸಿದ್ದಾರೆ. ಇದರಿಂದ, ಹೊಸಕೋಟೆ ಉಪಚುನಾವಣೆ ರಂಗೇರಿದೆ. ಜೊತೆಗೆ, ಎಂಟಿಬಿ ಟೆನ್ಸನ್ ಜಾಸ್ತಿಯಾಗಿದೆ.
ಎಚ್.ಡಿ.ಕುಮಾರಸ್ವಾಮಿ ಬೆಂಬಲ
ಶರತ್, ಪಕ್ಷೇತರರಾಗಿ ಸ್ಪರ್ಧಿಸುವುದು ಖಾತ್ರಿಯಾಗುತ್ತಿದ್ದಂತೆಯೇ, ಎಚ್.ಡಿ.ಕುಮಾರಸ್ವಾಮಿ, ಶರತ್ ಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಹೇಳುವ ಮೂಲಕ, ಶರತ್ ಗೆ ನೈತಿಕ ಬಲ ತುಂಬಿದ್ದಾರೆ.
ಸಿಎಂ ಯಡಿಯೂರಪ್ಪ ಗರಂ
ಶರತ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಿಎಂ ಬಿಎಸ್ವೈ, "ನಾವು ನಮ್ಮ ಜೊತೆಗಿರುವವರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ" ಎನ್ನುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಬಿಜೆಪಿ ಎಚ್ಚರಿಕೆಯ ನಡುವೆಯೂ, ಶರತ್ ಕಣಕ್ಕಿಳಿದರೆ, ಅವರ ವಿರುದ್ದ ಶಿಸ್ತಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.