ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ
ಬೆಂಗಳೂರು, ಮಾರ್ಚ್ 11: ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಆಕಾಂಕ್ಷಿಗಳಾಗಿರುವ ರಾಜೀವ್ ಚಂದ್ರಶೇಖರ್ ಹಾಗೂ ವಿಜಯ ಸಂಕೇಶ್ವರ ಇಬ್ಬರಿಗೂ ಪಕ್ಷವು ಶಾಕ್ ನೀಡಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ರಾಜೀವ್ ಚಂದ್ರಶೇಖರ್ ಹಾಗೂ ವಿಜಯ ಸಂಕೇಶ್ವರ್ ಇಬ್ಬರಲ್ಲಿ ಒಬ್ಬರಿಗೆ ರಾಜ್ಯಸಭಾ ಟಿಕೆಟ್ ನೀಡಲು ಬಿಜೆಪಿಯಲ್ಲಿ ಚರ್ಚೆ ನಡೆದಿತ್ತು, ಹಲವು ಶಾಸಕರು ವಿಜಯ್ ಸಂಕೇಶ್ವರ್ ಅವರಿಗೇ ಟಿಕೆಟ್ ನೀಡುವಂತೆ ಯಡಿಯೂರಪ್ಪ ಅವರಿಗೆ ಮನವಿಯನ್ನೂ ಮಾಡಿದ್ದರು. ಸ್ಥಳೀಯರನ್ನು ರಾಜ್ಯಸಭೆಗೆ ಆರಿಸದಿದ್ದರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗುವ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಲಾಗಿತ್ತು.
ವಿಜಯ ಸಂಕೇಶ್ವರ್ ಅಥವಾ ರಾಜೀವ್ ಚಂದ್ರಶೇಖರ್ ಲೆಕ್ಕಾಚಾರದಲ್ಲಿ ಬಿಜೆಪಿ?
ಆದರೆ ಪಕ್ಷದ ವರಿಷ್ಠರು ಇಬ್ಬರಿಗೂ ಟಿಕೆಟ್ ನಿರಾಕರಿಸಿ ಪಕ್ಷದ ಹಲವು ವರ್ಷಗಳ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ಶಿವಮೊಗ್ಗದ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರಿಗೆ ರಾಜ್ಯಸಭಾ ಚುನಾವಣೆ ಟಿಕೆಟ್ ನೀಡಲು ಪಕ್ಷ ಚಿಂತಿಸಿದ್ದು, ಇಂದು ಸಂಜೆ ವೇಳೆಗೆ ಟಿಕೆಟ್ ಘೋಷಣೆ ಆಗಲಿದೆ ಎಂಬ ಸುದ್ದಿ ಪಕ್ಷದಲ್ಲಿ ಹರಿದಾಡುತ್ತಿದೆ.
ರುದ್ರೇಗೌಡ ಅವರು ಯಡಿಯೂರಪ್ಪ ಅವರಿಗೆ ಬಹಳ ಆಪ್ತರಾಗಿದ್ದು, ಹಲವು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ಕೆಳಮಟ್ಟದಿಂದ ದುಡಿದವರಾಗಿದ್ದಾರೆ. ರುದ್ರೇಗೌಡ ಅವರು ಈಶ್ವರಪ್ಪ ಅವರ ವಿರೋಧಿಗಳಾಗಿದ್ದು, ಇತ್ತೀಚೆಗೆ ಈಶ್ವರಪ್ಪಗೆ ಟಿಕೆಟ್ ನಿರಾಕರಿಸುವಂತೆ ಬಹಿರಂಗವಾಗಿ ಮನವಿ ಮಾಡಿದ್ದರು, ಅಲ್ಲದೇ ಈಶ್ವರಪ್ಪ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದು ಸುದ್ದಿಯಾಗಿತ್ತು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರುದ್ರೇಗೌಡ ಹಾಗೂ ಕೆ.ಎಸ್.ಈಶ್ವರಪ್ಪ ಅವರ ನಡುವೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ಗಾಗಿ ಬಿರುಸಿನ ತಿಕ್ಕಾಟ ನಡೆದಿದ್ದು, ಅವರಿಬ್ಬರ ನಡುವಿನ ತಿಕ್ಕಾಟ ತಪ್ಪಿಸಲೆಂದು ರುದ್ರೇಗೌಡ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿ ಸುಮ್ಮನಾಗಿಸುವ ಯತ್ನ ಇದು ಎನ್ನಲಾಗಿದೆ.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ