ಬಜೆಟ್ ಮಂಡಿಸಿದ ಬಳಿಕ ಒಬ್ಬಂಟಿ ಆದರಾ ಸಿಎಂ ಯಡಿಯೂರಪ್ಪ?
ಬೆಂಗಳೂರು, ಮಾ. 05: ಬಜೆಟ್ ಮಂಡನೆ ಬಳಿಕ ನಡೆಯುವ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಗೆ ಸಂಪುಟದ ಎಲ್ಲ ಸದಸ್ಯರು ಹಾಜರಿರುವುದು ವಾಡಿಕೆ. ಆದರೆ ಇವತ್ತು ನಡೆದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸುದ್ದಿಗೋಷ್ಠಿಗೆ ಕೇವಲ ಇಬ್ಬರು ಸಚಿವರು ಮಾತ್ರ ಹಾಜರಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಉಯಡಿಯೂರಪ್ಪ ಅವರು ಮಂಡನೆ ಮಾಡಿರುವ ಬಜೆಟ್ ಆಡಳಿತ ಪಕ್ಷದವರಿಗೆ ಸಮಾಧಾನ ತಂದಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2,37,893 ಲಕ್ಷ ಕೋಟಿ ರೂ. ಗಳಷ್ಟು ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಅದನ್ನು ಬಜೆಟ್ ಮಂಡನೆ ಬಳಿಕ ನಾಡಿನ ಜನರಿಗೆ ತಿಳಿಸಲು ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಕೇವಲ ಇಬ್ಬರು ಸಚಿವರು ಮಾತ್ರ ಉಪಸ್ಥಿತರಿದ್ದರು, ಇದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ
ಬೆಂಗಳೂರಿಗೆ ಹೆಚ್ಚಿನ ಅನುದಾನ ಕೊಟ್ಟಿರುವುದು, ಉಳಿದ ಪ್ರದೇಶಗಳಿಗೆ ಕಡಿಮೆ ಅನುದಾನ, ಇಲಾಖೆಗಳಿಗೂ ನಿರೀಕ್ಷಿಸಿದಷ್ಟು ಅನುದಾನ ಸಿಗದೇ ಇರುವುದು ಆಡಳಿತ ಪಕ್ಷದವರ ಬೇಸರಕ್ಕೆ ಕಾರಣ ಎನ್ನಲಾಗಿದೆ. ಆದರೆ ಅದನ್ನು ಸಚಿವರು ಬಹಿರಂಗವಾಗಿ ತೋರ್ಪಡಿಸದೇ ಇದ್ದರೂ, ಸುದ್ದಿಗೋಷ್ಠಿಗೆ ಗೈರು ಹಾಜರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಸಿಎಂ ಸುದ್ದಿಗೋಷ್ಠಿಯಲ್ಲಿ ಇದ್ದುದ್ದು ಇಬ್ಬರು ಸಚಿವರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2,37,893 ಲಕ್ಷ ಕೋಟಿ ರೂ. ಗಳಷ್ಟು ದೊಡ್ಡ ಗಾತ್ರದ ಬಜೆಟ್ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿರಿದ್ದುದು ಕೇವಲ ಇಬ್ಬರು ಸಚಿವರು ಮಾತ್ರ. ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಮಾತ್ರ ಸಿಎಂ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಉಳಿದಂತೆ ಯಾವುದೇ ಸಚಿವರು ಸಿಎಂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವ ಗೋಜಿಗೆ ಹೋಗಲಿಲ್ಲ.
28 ಸಚಿವರಲ್ಲಿ ಸಮರ್ಥನೆ ಮಾಡಿಕೊಂಡಿದ್ದು ಬೆರಳೆಣಿಕೆಯಷ್ಟು
ಇನ್ನು ಪ್ರತಿ ಸಲ ಬಜೆಟ್ ಮಂಡನೆ ಆದ ನಂತರ ವಿರೋಧ ಪಕ್ಷಗಳು ಬಜೆಟ್ ವಿರೋಧಿಸಿ ಮಾತನಾಡುತ್ತಾರೆ. ಬಜೆಟ್ನ್ನು ವಿಶ್ಲೇಷಣೆ ಮಾಡುತ್ತಾರೆ. ಬಜೆಟ್ ಹೇಗೆ ಇದ್ದರೂ ಅದನ್ನು ಸಚಿವರು ಸಮರ್ಥನೆ ಮಾಡಿಕೊಳ್ಳುವುದು ರೂಢಿ. ಈ ಸಲ ಯಡಿಯೂರಪ್ಪ ಅವರು ರೈತರು, ಮಕ್ಕಳಿಗೆ ವಿಶೇಷ ಯೋಜನೆಗಳನ್ನು ಪ್ರಕಟ ಮಾಡಿದ್ದಾರೆ. ಆದರೆ ಹೈದರಾಬಾದ್ ಕರ್ನಾಟಕಕ್ಕೆ, ಉತ್ತರ ಕರ್ನಾಟಕಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಹೆಚ್ಚಿನ ಅನುದಾನ ಕಾಯ್ದಿರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಮೊಟ್ಟ ಮೊದಲ ಬಾರಿಗೆ 'ಮಕ್ಕಳ' ಬಜೆಟ್: ಇತಿಹಾಸ ಸೃಷ್ಟಿಸಿದ ಬಿ.ಎಸ್.ವೈ!
ಸಚಿವರಾದ, ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ, ಎಸ್. ಸುರೇಶ್ ಕುಮಾರ್, ಡಾ. ಸುಧಾಕರ್, ಬಿ.ಸಿ. ಪಾಟೀಲ್, ಪ್ರಭು ಚೌಹಾಣ್, ಗೋವಿಂದ ಕಾರಜೋಳ್, ಈಶ್ವರಪ್ಪ, ಡಾ. ಅಶ್ವಥ್ ನಾರಾಯಣ್, ಸಿ.ಸಿ. ಪಾಟೀಲ್, ಲಕ್ಷ್ಮಣ ಸವದಿ, ಸಿ.ಟಿ. ರವಿ ಸೇರಿದಂತೆ ಕೆಲವು ಸಚಿವರು ಮಾತ್ರ ಬೆಜೆಟ್ ಸಮರ್ಥಿಸಿಕೊಂಡಿದ್ದಾರೆ. ಉಳಿದವರು ಬಜೆಟ್ ಕುರಿತು ಮಾತೇ ಆಡಿಲ್ಲ.
ಕೇಂದ್ರದಿಂದಲೇ ಅನುದಾನ ಕೊರತೆ ಎಂದ ಸಿಎಂ ಯಡಿಯೂರಪ್ಪ
ಇನ್ನು ಕೇಂದ್ರ ಸರ್ಕಾರದಿಂದಲೇ ರಾಜ್ಯಕ್ಕೆ ಕಡಿಮೆ ಅನುದಾನ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣ ಕಡಿಮೆಯಾಗಿದೆ. ಜಿಎಸ್ಟಿ ಪರಿಹಾರ ಹಣ ಕೂಡ ಕಡಿಮೆ ಆಗಿದೆ. ಹಾಗಾಗಿ ರಾಜ್ಯದ ಸಂಪನ್ಮೂಲ ಕಳೆದ ವರ್ಷಗಳಿಗೆ ಹೊಲಿಸಿದ್ರೆ 15 ಸಾವಿರ ಕೋಟಿ ಕಡಿಮೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿಯೇ ಇಲಾಖೆಗಳಿಗೆ ಅನುದಾನ ಹಂಚಿಕೆ ಕಡಿಮೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಬಜೆಟ್ನಲ್ಲಿ ಇಲಾಖಾವಾರು ಅನುದಾನ ಹಂಚಿಕೆ ಹೀಗಿದೆ
2020-21ನೇ ಸಾಲಿನ ಬಜೆಟ್ನಲ್ಲಿ ಹಣಕಾಸು ಸಚಿವರು ಆಗಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಹೀಗಿದೆ. ಶಿಕ್ಷಣ ಇಲಾಖೆಗೆ 29,768 ಕೋಟಿ ರೂ.ಗಳು, ನಗರಾಭಿವೃದ್ಧಿ ಇಲಾಖೆಗೆ 27,952 ಕೋಟಿ ರೂ.ಗಳು, ಜಲಸಂಪನ್ಮೂಲ ಇಲಾಖೆಗೆ 21,308 ಕೋಟಿ ರೂ.ಗಳು, ಇಂಧನ ಇಲಾಖೆಗೆ 17,290 ಕೋಟಿ ರೂ.ಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 15,595 ಕೋಟಿ ರೂ.ಗಳು, ಕಂದಾಯ ಇಲಾಖೆಗೆ 11,860 ಕೋಟಿ ರೂ.ಗಳು, ಲೋಕೋಪಯೋಗಿ ಇಲಾಖೆಗೆ 11,463 ಕೋಟಿ ರೂ.ಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 10,122 ಕೋಟಿ ರೂ.ಗಳು, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 10,108 ಕೋಟಿ ರೂ.ಗಳು, ಸಮಾಜ ಕಲ್ಯಾಣ ಇಲಾಖೆಗೆ 9,444 ಕೋಟಿ ರೂ.ಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 7,889 ಕೋಟಿ ರೂ.ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4,650 ಕೋಟಿ ರೂ.ಗಳು, ವಸತಿ ಇಲಾಖೆಗೆ 2,971 ಕೋಟಿ ರೂ.ಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 2,68 ಕೋಟಿ ರೂ.ಗಳು ಹಾಗೂ ಇತರೆ ಎಂದು 84,023 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.
ಬಿಜೆಪಿ ಸರ್ಕಾರವು ದರಿದ್ರವೋ ಅಲ್ಲವೋ ಅನ್ನೋದಕ್ಕೆ ಉತ್ತರ ಸಿಕ್ತು: ಸಿದ್ದರಾಮಯ್ಯ
ಬಜೆಟ್ ಮೂಲಕ ಜನರಿಗೆ ದ್ರೋಹ ಎಂದ ವಿರೋಧ ಪಕ್ಷ ನಾಯಕರು
ಒಂದೆಡೆ ಸಚವರು ನಿರೀಕ್ಷಿಸಿದಷ್ಟು ಬಜೆಟ್ ಸಮರ್ಥನೆ ಮಾಡಿಕೊಂಡಿಲ್ಲ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕರು ಜನರಿಗೆ ದ್ರೋಹ ಬಗೆದ ಬಜೆಟ್ ಎಂದು ಟೀಕಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಕೊಟ್ಟಿರುವ, ಮುನ್ನೋಟವಿಲ್ಲದ ಜನರಿಗೆ ದ್ರೋಹ ಮಾಡಿರುವ ಬಜೆಟ್ ಮಂಡಿಸಿದ್ದಾರೆಂದು ಆರೋಪಿಸಿದ್ದಾರೆ. ಸುಣ್ಣಬಣ್ಣ ಬಳಿಯಲು ಆಗದ ಬಜೆಟ್ ಇದು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಳಿದಂತೆ ಬಜೆಟ್ ವಿರೋಧಿಸಿ ಎಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಎಸ್.ಆರ್. ಪಾಟೀಲ್, ಶಿವಲಿಂಗೇಗೌಡ, ಬಂಡೆಪ್ಪ ಕಾಶೆಂಪೂರ್, ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್ ಸೇರಿದಂತೆ ಬಹಳಷ್ಟು ನಾಯಕರು ಮಾತನಾಡಿದ್ದಾರೆ.