ಅತ್ಯಾಚಾರ ಪ್ರಕರಣ: ಅಬ್ಬಾ ಇದೇನಿದು? ಸಂಸ್ಕೃತಿ ರಕ್ಷಕ ಬಿಜೆಪಿ ನಾಯಕಿಯರ ಹೇಳಿಕೆಗಳು ಹೀಗೆ!
ಬೆಂಗಳೂರು, ಆ. 27: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ನಾಯಕಿಯರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಗುರುವಾರ ಹಗುರವಾಗಿ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿಕ ಕ್ಷಮೆ ಕೇಳಿದ್ದರು. ಅದಾದ ಬಳಿಕ ಪಕ್ಷಬೇದ ಬಿಟ್ಟು ಗೃಹಸಚಿವರ ಹೇಳಿಕೆಯನ್ನು ಮಹಿಳೆಯರು ಖಂಡಿಸುತ್ತಾರೆ ಎನ್ನಲಾಗಿತ್ತು. ಆದರೆ ಬಿಜೆಪಿ ನಾಯಕಿಯರು ತಮ್ಮ ಪಕ್ಷ ಹಾಗೂ ಹುದ್ದೆಯನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಸಂತ್ರಸ್ತ ಯುವತಿಯದ್ದೇ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಇದೀಗ ಗೃಹ ಸಚಿವರ ಹೇಳಿಕೆಯೊಂದಿಗೆ ಬಿಜೆಪಿ ನಾಯಕೀಯರ ಹೇಳಿಕೆಗೂ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪ್ರಕರಣ ನಡೆದ 48 ಗಂಟೆಗಳ ವರೆಗೆ ಕನಿಷ್ಠ ಪ್ರಕರಣವನ್ನೂ ಮೈಸೂರು ಪೊಲೀಸರು ದಾಖಲಿಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ದೂರು ದಾಖಲಿಸಿಕೊಳ್ಳದಿದ್ದರೆ ತನಿಖೆಯನ್ನು ಹೇಗೆ ನಡೆಸಲಾಗಿದೆ? ಪ್ರಕರಣದ ಕುರಿತು ಇಷ್ಟೊಂದು ನಿರ್ಲಕ್ಷ ವಹಿಸಿದರೆ ಆರೋಪಿಗಳ ಪತ್ತೆ ಸಾಧ್ಯವಾ? ಎಂಬ ಪ್ರಶ್ನೆಯನ್ನು ಇದೀಗ ಸಾರ್ವಜನಿಕರು ಸರ್ಕಾರಕ್ಕೆ ಕೇಳುತ್ತಿದ್ದಾರೆ. ಅಷ್ಟಕ್ಕೂ ಸಂಜೆ 7.30ರ ಬಳಿಕ ಮಹಿಳೆಯರು ಮನೆಯಿಂದ ಹೊರೆಗೆ ಬರುವುದು ತಪ್ಪಾ? ಎಂಬ ಮೂಲಭೂತ ಪ್ರಶ್ನೆಯನ್ನು ನಾಡಿನ ಮಹಿಳೆಯರು ಕೇಳುತ್ತಿದ್ದಾರೆ.
ರಾಜ್ಯಾದ್ಯಂತ ಮಹಿಳೆಯರು ಆಕ್ರೋಶಗೊಳ್ಳುವಂತಹ ಯಾವ ಹೇಳಿಕೆಯನ್ನು ಮೈಸೂರು ಅತ್ಯಾಚಾರ ಪ್ರಕರಣದ ಕುರಿತು ಬಿಜೆಪಿ ನಾಯಕೀಯರು ಕೊಟ್ಟಿದ್ದಾರೆ? ಮುಂದಿದೆ ಮಾಹಿತಿ!
ನನ್ನನ್ಯಾಕೆ ಕೇಳ್ತೀರಿ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ!
ನಾನು ಜನಾಶೀರ್ವಾದ ಯಾತ್ರೆ ಮಾಡಿರುವುದನ್ನು ತೆಗೆಸಿ ನೋಡಿ. ಮಧ್ಯರಾತ್ರಿ 12 ಗಂಟೆಯ ವರೆಗೂ ನಾನು ಓಡಾಡಿದ್ದೇನೆ. ಗೃಹ ಸಚಿವರ ಹೇಳಿಕೆಗೆ ನನ್ನನ್ನೇಕೆ ಪ್ರತಿಕ್ರಿಯೇ ಕೇಳುತ್ತಿರಿ? ನಾನೀಗ ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಯಾವುದೇ ಹೋರಾಟ ಮಾಡುವ ಸ್ಥಾನದಲ್ಲಿ ಇಲ್ಲ. ಹೋರಾಟದ ಮೂಲಕ ಇದಕ್ಕೆ ನಾನು ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ. ಅವರ ಹೇಳಿಕೆ ಬಗ್ಗೆ ನನ್ನನ್ನು ಯಾಕೆ ಎಳೀತೀರಾ? ಅವರಿಂದಲೇ ಸ್ಪಷ್ಟನೆ ಕೇಳಿ. ಪ್ರಕರಣಗಳಲ್ಲಿ ನಮ್ಮ ಸರ್ಕಾರ ವಿಫಲ ಆಗಿಲ್ಲ. ಯಾರನ್ನೂ ರಕ್ಷಣೆ ಮಾಡುವ ಅವಶ್ಯಕತೆಯೂ ನಮ್ಮ ಸರ್ಕಾರಕ್ಕೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಡವಟ್ಟು ಹೇಳಿಕೆಗೆ ಶೋಭಾ ಕರಂದ್ಲಾಜೆ ಉಡಾಫೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯುವತಿ ಮನೆಯವರು ದೂರು ನಕೊಡಬೇಕಾಗಿತ್ತು!
ಜೊತೆಗೆ ಯುವತಿಯ ಮನೆಯವರು ದೂರು ಕೊಡದಿರುವುದು ತನಿಖೆಗೆ ಚುರುಕುಗೊಳ್ಳದಿರಲು ಕಾರಣವಾಗಿದೆ ಎಂಬ ಅರ್ಥದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿದ್ದಾರೆ. ನಾನು ಸರ್ಕಾರಕ್ಕೆ, ಪೋಲೀಸರಿಗೆ ಹೇಳಬಹುದು ಅಷ್ಟೇ. ಆದರೆ ಆ ಯುವತಿ ಕಡೆಯವರು ಮುಂದೆ ಬಂದು ದೂರು ಕೊಡಬೇಕು. ಆಗ ಪೊಲೀಸರು ಕ್ರಮ ತೆಗೆದು ಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ದುಷ್ಕರ್ಮಿಗಳನ್ನು ಬಂಧನ ಮಾಡುತ್ತಾರೆ ಎಂದು ಹೆಳಿಕೆ ಕೊಡುವ ಮೂಲಕ ಸಂತ್ರಸ್ತ ಯುವತಿಯ ಪರ ನಿಲ್ಲಲು ಶೋಭಾ ಕರಂದ್ಲಾಜೆ ಹಿಂದೇಟು ಹಾಕಿದ್ದಾರೆ. ಶೋಭಾ ಕರಂದ್ಲಾಜೆ ಅವರ ಉಢಾಪೆ ಉತ್ತರಕ್ಕೆ ನಾಡಿನ ಮಹಿಳೆಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಗೃಹ ಸಚಿವರ ಹೇಳಿಕೆ ಸಮರ್ಥಿಸಿಕೊಂಡಿರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಗೃಹ ಸಚಿವರು ಆ ಅರ್ಥದಲ್ಲಿ ಹೇಳಿಲ್ಲ!
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಋಣಾತ್ಮಕವಾಗಿ ಆ ರೀತಿ ಹೇಳಿಲ್ಲ. ಮಹಿಳೆಯರ ಬಗ್ಗೆ ಕಾಳಜಿಯಿಂದ ಹಾಗೆ ಮಾತನಾಡಿದ್ದಾರೆ.
ಆ ಸಮಯದಲ್ಲಿ ಹೋಗಬಾರದಿತ್ತು ಅಂತ ಹೇಳಿದ್ದಾರೆ. ಗೃಹ ಸಚಿವರು ಒಂದು ಕಾಳಜಿಯಿಂದ ಆ ರೀತಿ ಹೇಳಿದ್ದಾರೆ. ಜಾಗ್ರತೆಯಿಂದ ಇರಬೇಕೆಂದು ಹೇಳಿದ್ದಾರೆ. ಬೆಳಗ್ಗೆಯಾದರೆ ಸಾರ್ವಜನಿಕರು ಓಡಾಡುತ್ತಾರೆ. ಸಾರ್ವಜನಿಕರು, ಅಕ್ಕಪಕ್ಕದ ಜನ ಗಮನಿಸ್ತಾರೆ. ರಾತ್ರಿ ಹೊತ್ತಲ್ಲಿ ಇಂಥವು ನಡೆದರೆ ಯಾರಿಗೂ ಕಾಣೋದಿಲ್ಲ. ರಾತ್ರಿ ಹೊತ್ತು ಸರಿ ಅಂತ ಕಾಮುಕರು ಯೋಚನೆ ಮಾಡುತ್ತಾರೆ ಎಂದು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಇಬ್ಬರೂ ನಾಯಕೀಯರ ಹೇಳಿಕೆಗಳು ಸೇರಿದಂತೆ ಪ್ರಕರಣದ ಬಗ್ಗೆ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಕಿಡಿ ಕಾರಿದ್ದಾರೆ.
Recommended Video
ಮಾಜಿ ಸಂಸದೆ, ನಟಿ ರಮ್ಯಾ ತೀವ್ರ ಖಂಡನೆ!
ಇನ್ನು ಇಡೀ ಪ್ರಕರಣದ ಕುರಿತು ಮಾಜಿ ಸಂಸದೆ ರಮ್ಯಾ ತೀವ್ರ ಖಂಡನೆ ಮಾಡಿದ್ದಾರೆ. "ಪುರುಷರು ಮಾಡುವ ಅಪರಾಧಕ್ಕೆ ನಾವೇ ದೂಷಿಸಲ್ಪಡುತ್ತೇವೆ. ಮಹಿಳೆಯರ ಮೇಲೆ ಮಾಡುವ ಪ್ರತಿಯೊಂದಕ್ಕೂ ಧೂಷಣೆ. ಅದು ಅತ್ಯಾಚಾರವಾಗಲಿ, ದೈಹಿಕ, ಮೌಖಿಕ ನಿಂದನೆಯಾಗಲಿರಲಿ ನಾವು ಇದನ್ನೇ ಹೆಚ್ಚಾಗಿ ಕೇಳುತ್ತೇವೆ ಎಂದಿದ್ದಾರೆ. ಜೊತೆಗೆ ಗೃಹ ಸಚಿವರ ಹೇಳಿಕೆ ಕುರಿತು, "ಇದು ನಿಮ್ಮ ತಪ್ಪು, ನೀವು ಹೇಳಬಾರದಿತ್ತು. ನೀವು ಅದನ್ನು ಧರಿಸಬಾರದಿತ್ತು, ಬಿಗಿಯಾಗಿ, ಚಿಕ್ಕದಾಗಿ. ನೀವು ತಡವಾಗಿ ಹೊರಗೆ ಹೋಗಬಾರದಿತ್ತು. ಅದನ್ನು ಮಾಡಬಾರದಿತ್ತು, ನೀವು ಮೇಕಪ್, ಬಟ್ಟೆ ಎಲ್ಲ. ಏಕೆ ಕೆಂಪು ಲಿಪ್ಸ್ಟಿಕ್, ಏಕೆ ಮಿನುಗು? ನೀವು ಕಣ್ಣು ಮಿಟುಕಿಸಬಾರದಿತ್ತು ಎನ್ನುತ್ತಾರೆ.
ಏಕೆಂದರೆ ಪುರುಷರು ಯಾವಾಗಲೂ ಪುರುಷರೇ. ಯಾವಾಗಲೂ ನಾವೇ ರಾಜಿ ಮಾಡಿಕೊಳ್ಳಬೇಕು. ನಾವೆ ಬದಲಾಗಬೇಕು, ನಾವೆ ಹೊಂದಿಕೊಳ್ಳಬೇಕು. ನಾವೇ ಸಹಿಸಿಕೊಳ್ಳಬೇಕು, ಇಲ್ಲ.. ಇಲ್ಲ! ಈ ಅಸಂಬದ್ಧತೆಗೆ ಪೂರ್ಣವಿರಾಮ ಹಾಕೋಣ. ನಾನು ನನ್ನ ಸ್ನೇಹಿತರ ವಿಷಯದಲ್ಲೂ ಇದನ್ನೇ ಮಾಡಿದ್ದೇನೆ. ಆಪಾದನೆಗಳನ್ನು ತೆಗೆದುಕೊಳ್ಳಿ, ಕಣ್ಣು ಮುಚ್ಚಬೇಡಿ. ನಮ್ಮ ಮೇಲಿನ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ. ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಮಾತನಾಡಿ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಫೇಸ್ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.